ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸೌಪರ್ಣಿಕಾ ನದಿಯಲ್ಲಿ ಪ್ರವಾಹ ಬಂದಾಗ ನೀರಿನಿಂದ ಆವೃತವಾಗಿ ಊರಿನ ಪ್ರಧಾನ ಭಾಗದಿಂದ ಸಂಪರ್ಕ ಕಡಿದುಕೊಳ್ಳುವ ನದಿತೀರ ಪ್ರದೇಶಗಳನ್ನು ಹೊಂದಿದ ಐದು ಗ್ರಾಮಗಳಿಗೆ ಜಿಲ್ಲಾಡಳಿತ ಒದಗಿಸಿದ ದೋಣಿಗಳನ್ನು ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್ ಆಯಾ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಜಿಲ್ಲಾಧಿಕಾರಿಗಳ ನೇತೃತ್ವದ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ನಾಡ, ಬಡಾಕೆರೆ, ಮರವಂತೆ, ನಾವುಂದ, ಹೇರೂರು ಗ್ರಾಮಗಳಿಗೆ ತಲಾ ಒಂದು ದೋಣಿ ವಿತರಿಸಲಾಗಿದೆ. 18 ಅಡಿ ಉದ್ದದ ಪ್ರತಿ ಫೈಬರ್ ದೋಣಿಯನ್ನು ರೂ 85,000ಕ್ಕೆ ಖರೀದಿಸಲಾಗಿದೆ. ಈ ಗ್ರಾಮಗಳಲ್ಲಿ ವಿವಿಧ ಮೂಲಗಳಿಂದ ಖರೀದಿಸಿದ ದೋಣಿಗಳು ಈಗಾಗಲೇ ಇದ್ದರೂ ಪ್ರವಾಹ ಬಂದಾಗ ಗ್ರಾಮಗಳ ಎಲ್ಲ ಬಾಧಿತ ಪ್ರದೇಶಗಳಲ್ಲಿ ಏಕ ಕಾಲದಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಹೆಚ್ಚುವರಿ ದೋಣಿಗಳಿಗೆ ಬೇಡಿಕೆ ಬಂದ ಕಾರಣ ಇವುಗಳನ್ನು ಒದಗಿಸಲಾಗಿದೆ. ದೋಣಿಗಳ ನಿರ್ವಹಣೆ ಮತ್ತು ಉಸ್ತುವಾರಿಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ ಎಂದರು.
ಮರವಂತೆಗೆ ನೀಡಿದ ದೋಣಿಯನ್ನು ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಲೋಕೇಶ ಖಾರ್ವಿ, ಸದಸ್ಯರಾದ ಎಂ. ವಿನಾಯಕ ರಾವ್, ಕಿಶನ್ ಪೂಜಾರಿ, ಕಾರ್ಯದರ್ಶಿ ದಿನೇಶ ಶೇರುಗಾರ್, ಸಿಬ್ಬಂದಿ ಶೇಖರ ಮರವಂತೆ ಸ್ವೀಕರಿಸಿದರು. ಕಂದಾಯ ಪರಿವೀಕ್ಷಕ ಮಂಜು, ಗ್ರಾಮ ಲೆಕ್ಕಾಧಿಕಾರಿ ಸಂದೀಪ್, ಗ್ರಾಮ ಸಹಾಯಕ ಕೃಷ್ಣ ಮೊಗವೀರ ಇದ್ದರು.