ಕುಂದಾಪುರ: ಇಲ್ಲಿನ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನ ಗಣೇಶೋತ್ಸವ ಸಮಿತಿ ವತಿಯಿಂದ ಗಣೇಶೋತ್ಸವ ರಜತ ಮಹೋತ್ಸವ ಸೆ.17ರಿಂದ ಸೆ.21ರ ತನಕ ವಿಜೃಂಭಣೆಯಿಂದ ನಡೆಯಲಿದೆ. ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಆಗಮಿಸಲಿದ್ದು, ಸಾಮೂಹಿಕ ಸಹಸ್ರ ನಾಳಿಕೇರ ಗಣಯಾಗ, ಅದ್ದೂರಿಯ ಪುರಮೆರವಣಿಗೆ, ಜಲಸ್ಥಂಭನದ ವಿಶಿಷ್ಟತೆಗಳು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸೆ.17ರಂದು ರಜತೋತ್ಸವ ಕಾರ್ಯಕ್ರಮ ಆರಂಭವಾಗಲಿದೆ. ಬೆಳಿಗ್ಗೆ 10:30ಕ್ಕೆ ಉದ್ಘಾಟನೆ ನಡೆಯಲಿದೆ. ನಂತರ ವಿವಿಧ ಸ್ಪರ್ಧೆಗಳು ನಡೆಯಲಿದೆ. ರಾತ್ರಿ ಗೋಳಿಗರಡಿ ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಸೆ.18ರಂದು ಭಜನಾ ಕಾರ್ಯಕ್ರಮ, ರಾತ್ರಿ 9ರಿಂದ ಗಾನ ನೃತ್ಯ ವೈಭವ ನಡೆಯಲಿದೆ.
ಸೆ.19ರಂದು ಸಂಜೆ 5ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ಆಗಮಿಸಲಿದ್ದು, ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಶ್ರೀ ಮಂಜುನಾಥ ಸಭಾಭವನವನ್ನು ಉದ್ಘಾಟಿಸಿ, ಆಶೀರ್ವಚನ ನೀಡುವರು. ಸೆ.20ರಂದು ಕುಣಿತ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ರಜತೋತ್ಸವ ಕಾರ್ಯಕ್ರಮದ ಸಮಾರೋಪ ನಡೆಯಲಿದ್ದು, ಸಮ್ಮಾನ ಕಾರ್ಯಕ್ರಮ ನಂತರ ನೃತ್ಯ ಸಂಗಮ ನೆಡೆಯಲಿದೆ. ಸೆ.21ರಂದು ಬೆಳಿಗ್ಗೆ 8ರಿಂದ ಸಾಮೂಹಿಕ ಸಹಸ್ರ ನಾಳಿಕೇರ ಗಣಯಾಗ ನಡೆಯಲಿದ್ದು, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದರು.
ಸೆ.21ರಂದು 6:30ಕ್ಕೆ ವಿದ್ಯುದ್ದೀಪಾಲಂಕೃತ ವಾಹನದಲ್ಲಿ ಶ್ರೀ ಗಣೇಶನ ವಿಗ್ರಹದ ವೈಭವೋಪೇತ ಪುರಮೆರವಣಿಗೆ ನಡೆಯಲಿದ್ದು, ವಿವಿಧ ಟ್ಯಾಬ್ಲೋಗಳು, ನೃತ್ಯ ಪ್ರಕಾರಗಳು ಭಾಗವಹಿಸಲಿವೆ. ನಂತರ ಬ್ಲೂವಾಟರ್ ಹತ್ತಿರ ಪಂಚಗಂಗಾವಳಿ ನದಿಯಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಶ್ರೀ ಆಂಜನೇಯ ವ್ಯಾಯಾಮ ಶಾಲೆಯ ಸದಸ್ಯರಿಂದ ಬೆಂಕಿಯಾಟ ಪ್ರದರ್ಶನ ನಡೆಯಲಿದೆ. 25ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸಂದೀಪ ಖಾರ್ವಿ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದೆ