ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಾಳಾವರ ಗ್ರಾಮದ ನರಿಕೊಡ್ಲುವಿನಲ್ಲಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ‘ಶ್ರೀ ವರಲಕ್ಷ್ಮೀ ನಿಲಯ’ ನೂತನ ಗೃಹದ ಹಸ್ತಾಂತರ ಸಮಾರಂಭ ಶುಕ್ರವಾರ ಜರುಗಿತು.
ಉದ್ಯಮಿ ಹಾಗೂ ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರ ತಂದೆ ತಾಯಿ ಬಾಬು ಪೂಜಾರಿ ಹಾಗೂ ಮಂಜಮ್ಮ ದಂಪತಿಗಳು ನೂತನ ಗೃಹವನ್ನು ಉದ್ಘಾಟಿಸಿದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ನೂತನ ಗೃಹದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಗೋವಿಂದ ಬಾಬು ಪೂಜಾರಿ ಅವರು ದೇವರು ಮೆಚ್ಚುವ ಕಾರ್ಯ ಮಾಡಿದ್ದಾರೆ. ಅವರಿಂದ ಇನ್ನಷ್ಟು ಜನಪರ ಕಾರ್ಯಗಳಾಗಲಿ ಎಂದು ಶುಭಹಾರೈಸಿದರು.
ಗೋವಿಂದ ಬಾಬು ಪೂಜಾರಿ ಹಾಗೂ ಮಾಲತಿ ಗೋವಿಂದ ಪೂಜಾರಿ ಅವರು ಸವಿತಾ ಅವರಿಗೆ ಮನೆಯ ಬಿಗದ ಕೈ ಹಸ್ತಾಂತರಿಸಿದರು. ಬಳಿಕ ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ ಟ್ರಸ್ಟೀ ಮೂಲಕ ನಿರ್ಮಿಸಲಾಗಿರುವ ಐದನೇ ಮನೆ ಇದಾಗಿದೆ. ಟ್ರಸ್ಟ್ ಮೂಲಕ ನಿರಂತರವಾಗಿ ಸೇವಾ ಕಾರ್ಯಗಳನ್ನು ಮಾಡುತ್ತಾ ಬರಲಾಗುತ್ತಿದೆ. ಈ ವರ್ಷ ಒಟ್ಟು ನಾಲ್ಕು ಮನೆ ನಿರ್ಮಿಸಲಾಗಿದೆ. ಕೋವಿಡ್ ಸಮಯದಲ್ಲಿ ಐದು ಸಾವಿರಕ್ಕೂ ಅಧಿಕ ಪುಡ್ಕಿಟ್ ವಿತರಣೆ, ಕುಡಿಯುವ ನೀರು ಸರಬರಾಜು, ಅಗತ್ಯವುಳ್ಳವರಿಗೆ ಆರ್ಥಿಕ ನೆರವು, ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.
ಗೋವಿಂದ ಬಾಬು ಪೂಜಾರಿ ಅವರನ್ನು ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಗುರುರಾಜ ಪಂಜು ಪೂಜಾರಿ, ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ ಶೆಟ್ಟಿ, ಪಂಚಾಯತ್ ಸದಸ್ಯರು, ಬಿಲ್ಲವ ಸಮಾಜದ ಮುಖಂಡರು ಉಪಸ್ಥಿತರಿದ್ದರು.