ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ 2020-21ನೇ ಸಾಲಿನಲ್ಲಿ 20.23 ಲಕ್ಷ ರೂ. ಲಾಭಗಳಿಸಿ ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಿದೆ. ಗ್ರಾಹಕರ ಸಹಕಾರದಿಂದ ನಿಧಿಗಳ ಸಮರ್ಪಕ ನಿರ್ವಹಣೆ, ಸಾಲಗಳ ವಿತರಣೆ ಹಾಗೂ ಸಮಯೋಜಿತ ಹೂಡಿಕೆಗಳಿಂದಾಗಿ ಸಂಘವು ಉತ್ತಮ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.
ಸಂಘದ ಪ್ರಧಾನ ಕಛೇರಿಯಲ್ಲಿ ಭಾನುವಾರ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಹಕಾರಿಯು 2020-21ನೇ ಸಾಲಿನಲ್ಲಿ ರೂ. 24.26 ಕೋಟಿ ಠೇವಣಿ ಹೊಂದಿದ್ದು 21.73 ಕೋಟಿ ಸಾಲ ನೀಡಿದೆ. ಕಳೆದ ಸಾಲಿನ ಕಾರ್ಯಯೋಜನೆಯಲ್ಲಿ ನಿಗದಿಪಡಿಸಿದ ಠೇವಣಿ, ಸಾಲ, ಅನುತ್ಪಾದಕ ಸಾಲ, ಸುಸ್ತಿ ಸಾಲ ಹಾಗೂ ಮುಂಗಡ ಲಾಭಗಳಿಕೆಯಲ್ಲಿ ನಿಗದಿತ ಗುರಿಯನ್ನು ಮೀರಿ ಸಂಸ್ಥೆ ಪ್ರಗತಿ ಸಾಧಿಸಿದೆ. ಜಿಲ್ಲೆಯಲ್ಲಿಯೇ ಮಾದರಿ ಸಂಸ್ಥೆಯಾಗಿ ರೂಪುಗೊಳ್ಳುತ್ತಿರುವ ಹಿಂದೆ ಗ್ರಾಹಕರ ಸಹಕಾರ ಹಾಗೂ ನೌಕರರ ಶ್ರಮವಿದೆ ಎಂದರು.
ಸೌಹಾರ್ದ ಸಹಕಾರಿಯ ವ್ಯಾಪ್ತಿಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಕೋವಿಡ್ ಸಂತ್ರಸ್ಥರು ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು. ಶಾಖೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದ ಪ್ರಬಂಧಕರಾದ ಕಿಟ್ಟಣ್ಣ ರೈ, ನಾಗರಾಜ ಪಿ,. ರಾಘವೇಂದ್ರ ಹಾಗೂ ಶ್ರೀನಿವಾಸ ಅವರನ್ನು ಗೌರವಿಸಲಾಯಿತು.
ನಿರ್ದೇಶಕರುಗಳಾದ ಮಂಜು ಪೂಜಾರಿ ನಾವುಂದ, ರಾಮಕೃಷ್ಣ ಖಾರ್ವಿ, ಶಿವರಾಮ ಪೂಜಾರಿ, ಅಣ್ಣಪ್ಪ ಪೂಜಾರಿ ಇದ್ದರು. ಸಂಘದ ಉಪಾಧ್ಯಕ್ಷ ಎಂ. ವಿನಾಯಕ ರಾವ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಟ್ಟಣ್ಣ ರೈ ಕೆ. ವಾರ್ಷಿಕ ವರದಿ ವಾಚಿಸಿದರು. ನಾಗೂರು ಶಾಖಾ ಪ್ರಬಂಧಕ ನಾಗರಾಜ ಯಡ್ತರೆ ಕಾರ್ಯಕ್ರಮ ನಿರೂಪಿಸಿದರು. ಕಂಬದಕೋಣೆ ಶಾಖಾ ಪ್ರಬಂಧಕ ರಾಜೇಂದ್ರ ಸಹಕರಿಸಿದರು.