ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪುಟ್ಟಪುಟ್ಟ ಕಲಾಕೃತಿಗಳು ಮಕ್ಕಳ ಕಲಿಕೆ ಮತ್ತು ಕ್ರಿಯಾಶೀಲತೆ ವೃದ್ಧಿಗೆ ಪೂರಕವಾಗಿವೆ. ಅಂತಹ ನೂರಾರು ಕೃತಿಗಳನ್ನು ನೋಡುವುದೆಂದರೆ ಕಣ್ಣಿಗೆ ಹಬ್ಬ ಎಂದು ಗಂಗೊಳ್ಳಿ ಕಾರ್ಮೆಲ್ ಕಾನ್ವೆಂಟಿನ ಸಿ. ಕೆರೋನಾ ಎ.ಸಿ ಹೇಳಿದರು.
ತ್ರಾಸಿಯ ಡಾನ್ ಬೋಸ್ಕೊ ಕಿಂಡರ್ಗಾರ್ಟನ್ ಶಾಲೆಯ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಆಕರ್ಷಕ ವಸ್ತುಪ್ರದರ್ಶನವನ್ನು ಉದ್ಘಾಟಿಸಿದ ಅವರು ತಮ್ಮ ಮೆಚ್ಚುಗೆ ಸೂಚಿಸಿದರು. ಶಾಲೆಯ ಪ್ರಾಂಶುಪಾಲ ಹಾಗೂ ರೆಕ್ಟರ್ ಫಾ. ಮ್ಯಾಕ್ಸಿಂ ಡಿಸೋಜ, ಆಡಳಿತಗಾರ ಫಾ. ರೋಶನ್ ಡಿಸೋಜ ಮತ್ತು ಮಕ್ಕಳ ಪೋಷಕರು ಇದ್ದರು. ಸಿ. ಕೆರೋನಾ ಮತ್ತು ಗಂಗೊಳ್ಳಿಯ ಪ್ರೀತಿ ಪ್ರದರ್ಶಿನಿಗಳ ಮೌಲ್ಯ ಮಾಪನ ಮಾಡಿದರು.
ವ್ಯರ್ಥ ಎಂದು ಎಸೆಯುವ ವಸ್ತುಗಳಿಂದ ಕೆ.ಜಿ ತರಗತಿಯ ಮಕ್ಕಳು ಮತ್ತು ಪೋಷಕರು ಈ ಕಲಾಕೃತಿಗಳನ್ನು ತಯಾರಿಸಿದ್ದರು. ಅವುಗಳಲ್ಲಿ ಹಲವು ಪರಿಸರ ಕುರಿತಾದ ವಿಷಯಗಳಿಗೆ ಸಂಬಂಧಿಸಿದ್ದರೆ, ಇನ್ನುಳಿದವು ನಿತ್ಯೋಪಯೋಗಿ ಎನಿಸುವ ವಸ್ತುಗಳು ಹಾಗೂ ಸಾಮಾನ್ಯ ಕಲಾಕೃತಿಗಳಾಗಿದ್ದುವು. ಪ್ರದರ್ಶನವನ್ನು ಕೆ.ಜಿ ತರಗತಿಯ ಶಿಕ್ಷಕಿಯರಾದ ಶೀತಲ್ ಒಲಿವೇರಾ, ಸುಜಾತಾ ಡಯಾಸ್, ಫಿಲೋಮಿನಾ ಒಲಿವೇರಾ, ಸುನಿತಾ ಡಿಲಿಮಾ ಆಯೋಜಿಸಿದ್ದರು.