ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ನವದೆಹಲಿ, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಂತ್ರಜ್ಞಾನ ವಸ್ತು ಸಂಗ್ರಹಾಲಯ, ಬೆಂಗಳೂರು ಮತ್ತು ಕೇರಳ ಸರ್ಕಾರದ ಶಿಕ್ಷಣ ಸಚಿವಾಲಯವು ಕೇರಳದ ತ್ರಿಶೂರಿನಲ್ಲಿ ಜಂಟಿಯಾಗಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ಸಿದ್ಧಾಪುರದ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಪೂರ್ಣಿಮಾ ಭಟ್ ದಕ್ಷಿಣ ಭಾರತ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಸ್ತು ಪ್ರದರ್ಶನದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಪೂರ್ಣಿಮಾ ಭಟ್ ಅವರು ರೂಪಿಸಿದ ಗಣಿತದ ಸ್ವಕಲಿಕೆಯ ಸಾಮಗ್ರಿಗಳನ್ನು ಮೆಚ್ಚಿದ ತೀರ್ಪುಗಾರರು ಗಣಿತ ಕಲಿಕೆಯ ಕುರಿತು ಆಸಕ್ತಿ ಮತ್ತು ಪ್ರೀತಿ ಮೂಡಿಸಬಲ್ಲ ಈ ಸಾಮಗ್ರಿಗಳ ಬಳಕೆಯ ಕುರಿತು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು.
ಸಂಕಲನ ಹಾಗೂ ಗುಣಾಕಾರದಲ್ಲಿ ಬರುವ ಚಿಹ್ನೆಗಳ ಪರಿಕಲ್ಪನೆ ಮೂಡಿಸುವುದು, ತ್ರಿಭುಜದ ಮೂರು ಕೋನಗಳ ಒಟ್ಟು ಮೊತ್ತ 180° ಎಂಬುದನ್ನು ಚಟುವಟಿಕೆಯ ಮೂಲಕ ತಿಳಿಸಿ ಕೊಡುವುದು, ಬೀಜೋಕ್ತಿಗಳ ಗುಣಾಕಾರ ಮಾಡುವುದು, ಬೀಜೋಕ್ತಿಗಳ ಸಾಮಾನ್ಯ ಅಪವರ್ತನ ಕಂಡು ಹಿಡಿಯುವುದು, ಭಿನ್ನರಾಶಿಗಳ ಕುರಿತು ಸ್ಪಷ್ಟ ಪರಿಕಲ್ಪನೆ ಮೂಡಿಸುವುದು, ಸಂಖ್ಯೆಗಳ ಮ. ಸಾ.ಅ ಹಾಗೂ ಲ.ಸಾ.ಅ ಕಂಡುಹಿಡಿಯುವುದು, ಎರಡು ಸಮಾಂತರ ರೇಖೆಗಳನ್ನು ಒಂದು ಛೇದಕವು ಕತ್ತರಿಸಿದಾಗ ಉಂಟಾಗುವ ವಿವಿಧ ಬಗೆಯ ಕೋನಗಳ ಲಕ್ಷಣಗಳು, ವಿವಿಧ ವೃತ್ತ ಖಂಡದಲ್ಲಿ ಉಂಟಾಗುವ ಕೋನದ ಲಕ್ಷಣಗಳು, ಸರ್ವಸಮ ಆಕೃತಿಗಳು, ಸಮಮಿತಿಯ ಅಕ್ಷ ಹಾಗೂ ಅವುಗಳಲ್ಲಿ ಉಂಟಾಗುವ ಕೋನದ ಬೆಲೆ ಕಂಡು ಹಿಡಿಯುವುದು, ವಿವಿಧ ಮಾದರಿ ಕೋನಗಳನ್ನು ಗುರುತಿಸುವುದು ಮುಂತಾದ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಚಟುವಟಿಕೆಯ ಮಾದರಿಯನ್ನು ಅವರು ರಚಿಸಿದ್ದರು.
ಸ್ಪರ್ಧೆಯ ಹೊರತಾಗಿಯೂ ಪೂರ್ಣಿಮಾ ಭಟ್ ರವರು ಗಣಿತವು ಕ್ಷಿಷ್ಟ ಎಂಬ ಭಯವನ್ನು ಹೋಗಲಾಡಿಸಲು ಸಾಕಷ್ಟು ಸ್ವಕಲಿಕೆಯ ಮಾದರಿಗಳನ್ನು ರಚಿಸಿದ್ದಾರೆ. ಆಯ್ದ ಕೆಲವು ಮಾದರಿಗಳನ್ನು ಅವರು ಚಲದೀನ್ ಸಿರಿಯನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ದಕ್ಷಿಣ ಭಾರತ ವಿಜ್ಞಾನ ವಸ್ತು ಪ್ರದರ್ಶನಕ್ಕಾಗಿ ಕೊಂಡೊಯ್ದಿದ್ದರು. ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಗಣಿತ ಮಾದರಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ದಕ್ಷಿಣ ಭಾರತ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದಿದ್ದರು.
ಈ ವರ್ಷದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿಯೂ ಅವರ ಮಾರ್ಗದರ್ಶನದಲ್ಲಿ ಮಳೆ ನೀರು ಇಂಗಿಸುವ ಕುರಿತಾದ ಅಧ್ಯಯನ ನಡೆಸಿ ಶಾಲೆಯ ವಿದ್ಯಾರ್ಥಿನಿ ಶ್ರೀನಿಧಿ ದಕ್ಷಿಣ ಭಾರತ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿರುವರು.