ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಇದರ ಗೋಳಿಹೊಳೆ ಶಾಖೆಯ ವಾರ್ಷಿಕೋತ್ಸವ ಹಾಗೂ ಸೌಹಾರ್ದ ಸಹಕಾರಿ ದಿನಾಚರಣೆಯ ಅಂಗವಾಗಿ ಸೋಮವಾರ ಗೋಳಿಹೊಳೆಯ ಮಹಿಷಮರ್ಧಿನಿ ಸಭಾಭವನದಲ್ಲಿ ಗ್ರಾಹಕರ ಸಭೆ ಹಾಗೂ ಸಹಕಾರಿ ಸದಸ್ಯರು – ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ನಿರ್ದೇಶಕ ಎಸ್. ಕೆ. ಮಂಜುನಾಥ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿ ಸರ್ಕಾರದ ಯಾವುದೇ ಅನುದಾನ ಮತ್ತು ಪ್ರೋತ್ಸಾಹವಿಲ್ಲದೆ ಸಂಘದ ಸದಸ್ಯರಿಂದಲೇ ಸೌಹಾರ್ದ ಸಹಕಾರಿ ಸಂಸ್ಥೆಗಳು ಪ್ರಗತಿ ಸಾಧಿಸಿವೆ. ಸಹಕಾರಿ ರಂಗದಲ್ಲಿ ವಿಶ್ವಾಸಾರ್ಹತೆಯನ್ನು ಕಾಯ್ದುಕೊಂಡು ಬಂದಿರುವುದು ಶ್ಲಾಘನಾರ್ಹ. ಸೌಹಾರ್ದ ಸೊಸೈಟಿಗಳು ಸರ್ಕಾರ ವಿಧಿಸಿದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ರಾಜಕೀಯ ಉದ್ದೇಶದಿಂದಾಗಿ ಒಳ್ಳೆಯ ಸಹಕಾರಿ ಸಂಸ್ಥೆಗಳು ಮೂಲೆ ಗುಂಪಾಗಿರುವುದು ವಿಷಾದನೀಯ ಎಂದರು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು. ಶಾಖಾ ವ್ಯಾಪ್ತಿಯ ಕೊರಗ ಸಮುದಾಯದ ಮಕ್ಕಳಿಗೆ ಪ್ರತಿವರ್ಷದಂತೆ ಸಮವಸ್ತ್ರ ವಿತರಿಸಲಾಯಿತು. ಸಂಘದ ಅದೃಷ್ಟಶಾಲಿ ಸದಸ್ಯರನ್ನು ಆಯ್ಕೆ ಮಾಡಿ ವಿಶೇಷ ಬಹುಮಾನ ನೀಡಲಾಯಿತು.
ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಅಧ್ಯಕ್ಷ ಎಸ್. ರಾಜು ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗದ ಶಾಖೆಯೊಂದರಲ್ಲಿ ಶೇ.100 ವಸೂಲಾತಿ ಆಗಿರುವುದು ದಾಖಲೆಯಾಗಿದೆ. ಗ್ರಾಹಕರ ಸಹಕಾರದೊಂದಿಗೆ ಪ್ರಾಮಾಣಿಕತೆಯಿಂದ ಸೇವೆ ನೀಡುತ್ತಿರುವ ಸಿಬ್ಬಂದಿ ಇದಕ್ಕೆ ಕಾರಣರಾಗಿದ್ದಾರೆ. ಸದಸ್ಯರಿಗೆ ಸಂಸ್ಥೆಯ ಮೂಕಲ ಅವಶ್ಯ ಸೇವೆಯನ್ನು ಒದಗಿಸಲು ಸಂಘ ಸಿದ್ಧವಾಗಿದೆ ಎಂದರು.
ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಸಹಕಾರಿಗಳಾದ ಟಿ. ನಾರಾಯಣ ಹೆಗ್ಡೆ ಮತ್ತು ನಾರಾಯಣ ಶೆಟ್ಟಿ ಚುಚ್ಚಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗೋಳಿಹೊಳೆ ಗ್ರಾಪಂ ಅಧ್ಯಕ್ಷ ವಸಂತ್ ಹೆಗ್ಡೆ, ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಸೌಹಾರ್ದ ಸಂಯೋಜಕ ವಿಜಯ ಬಿ.ಎಸ್, ನಿವೃತ್ತ ಮುಖ್ಯಶಿಕ್ಷಕ ಜೆ. ರತ್ನಾಕರ ಶೆಟ್ಟಿ, ಸಂಘದ ಉಪಾಧ್ಯಕ್ಷ ಎಂ. ವಿನಾಯಕ ರಾವ್, ನಿರ್ದೇಶಕ ಸೀತಾರಾಮ ಮಡಿವಾಳ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಕಿಟ್ಟಣ್ಣ ರೈ ಉಪಸ್ಥಿತರಿದ್ದರು.
ಅಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿ, ವ್ಯವಸ್ಥಾಪಕ ರಾಘವೇಂದ್ರ ಪೂಜಾರಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣಿ ನಿರೂಪಿಸಿದರು.