ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ತಾಲೂಕು ರೈತ ಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ರಾಜ್ಯ ಮಟ್ಟದ ಹೊನಲು ಬೆಳಕಿನ ಕಂಬಳೋತ್ಸವ ಮತ್ತು ರೈತರ ಸಮಾಗಮ ಕಾರ್ಯಕ್ರಮ ʼಬೈಂದೂರು ಕಂಬಳʼ ಜನವರಿ 7ರಂದು ನಡೆಯಲಿದ್ದು, ಕ್ಯಾರ್ತೂರಿನಲ್ಲಿ ಭರದ ತಯಾರಿ ನಡೆದಿದೆ.
ಗಂಗಾನಾಡು ಗ್ರಾಮದ ಕ್ಯಾರ್ತೂರು ಶ್ರೀ ನರಸಿಂಹ ದೇವಸ್ಥಾನದ ಪಕ್ಕದ ವಿಶಾಲ ಗದ್ದೆ ಆಯೋಜಿಸಲಾಗಿರುವ ಬೈಂದೂರು ಕಂಬಳ ನಡೆಯಲಿದ್ದು ಅದಕ್ಕಾಗಿ ಸಿದ್ದತೆ ನಡೆಸಲಾಗಿದೆ. ಸಂಜೆ 5ರಿಂದ ಮೆರವಣಿಗೆ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಂಬಳ ಜರುಗಲಿದೆ. ಕಂಬಳಕ್ಕಾಗಿಯೇ ಹೊಸತಾಗಿ ಎರಡು ಟ್ರ್ಯಾಕ್ ಇರುವ ಕಂಬಳಗದ್ದೆಯನ್ನು ನಿರ್ಮಾಣ ಮಾಡಲಾಗಿದೆ. ಕರ್ತೂರು ಪರಿಸರವನ್ನು ವಿದ್ಯುದಲಂಕಾರಗಳಿಂದ ಸಿಂಗರಿಸಲಾಗಿದ್ದು ಹಬ್ಬದ ಸಂಭ್ರಮ ಕಳೆಗಟ್ಟಿದೆ.
ಗ್ರಾಮೀಣ ಭಾಗದಲ್ಲಿಯೂ ಕಂಬಳವನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಿ ಅದ್ಧೂರಿಯಾಗಿ ರೈತರ ಹಬ್ಬವಾಗಿ ಆಚರಿಸಬೇಕು ಎಂಬ ಸದುದ್ದೇಶದೊಂದಿಗೆ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರು ಬೈಂದೂರು ಕಂಬಳದ ನೇತೃತ್ವ ವಹಿಸಿದ್ದು, ಇದಕ್ಕೆ ಬೈಂದೂರಿನ ಮರಾಠಿ ಹಾಗೂ ಗೊಂಡ ಸಮಾಜ, ಬೈಂದೂರು ತಾಲೂಕು ಸಾಂಪ್ರದಾಯಿಕ ಕಂಬಳ ಸಮಿತಿ ಹಾಗೂ ಕಂಬಳಾಭಿಮಾನಿಗಳು ಸಾಥ್ ನೀಡಿದ್ದಾರೆ.
ಕಂಬಳದೊಂದಿಗೆ ರೈತರನ್ನು ಒಗ್ಗೂಡಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ರೈತ ಸಂಘಗಳಿಗೆ ಹಾಗೂ ಕಂಬಳಕ್ಕೆ ಸರ್ವ ಪಕ್ಷಗಳ ಮುಖಂಡರನ್ನು ಕರೆಯಲಾಗುತ್ತದೆ. ಅಂದಾಜು 10 ಸಾವಿರಕ್ಕೂ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಆಕರ್ಷಕ ಬಹುಮಾನ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ ನೂರಾರು ಜೊತೆ ಕೋಣಗಳು ಕಂಬಳೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, ವಿಜೇತ ಕೋಣಗಳಿಗೆ ಆಕರ್ಷಕ ಬಹುಮಾನ ನೀಡಿ ಗೌರವಿಸಲಾಗುತ್ತದೆ. ಹಲಗೆ ವಿಭಾಗ ಹಾಗೂ ಹಗ್ಗ ಹಿರಿಯ ವಿಭಾಗದ ಪ್ರಥಮ ಸ್ಥಾನಿ ಕೋಣಗಳಿಗೆ ಒಂದು ಪವನ್ ಚಿನ್ನ ಹಾಗೂ ಟ್ರೋಫಿ, ದ್ವಿತೀಯ ಅರ್ಧ ಪವನ್ ಚಿನ್ನ ಹಾಗೂ ಟ್ರೋಫಿ, ಹಗ್ಗ ಕಿರಿಯ ವಿಭಾಗ ಹಾಗೂ ಸಬ್ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಅರ್ಧ ಪವನ್ ಚಿನ್ನ ಹಾಗೂ ಟ್ರೊಫಿ, ದ್ವಿತೀಯ ಕಾಲು ಪವನ್ ಚಿನ್ನ ಹಾಗೂ ಟ್ರೋಫಿ ನೀಡಿ ಗೌರವಿಸಲಾಗುತ್ತದೆ. ಅಲ್ಲದೇ ಕೋಣ ಓಡಿಸುವವರಿಗೆ ನಾನಾ ವಿಭಾಗದಲ್ಲಿ ಬಹುಮಾನ, ಉತ್ತಮ ವೇಷಭೂಷಣದೊಂದಿಗೆ ಅತಿಹೆಚ್ಚು ಕೋಣಗಳನ್ನು ತಂದವರಿಗೂ ವಿಶೇಷ ಬಹುಮಾನ ನೀಡಿ ಗೌರವಿಸಲಾಗುವುದು. ಸಾಧಕ ರೈತರನ್ನೂ ಕೂಡ ಸನ್ಮಾನಿಸಲಾಗುತ್ತದೆ.