ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ: ತಾಲೂಕಿನ ಯಡ್ತಾಡಿ ನಿವಾಸಿ ಸೀತಾ ಬಾಯಿ ಅವರು ಪಕ್ಕದ ಮನೆಯ ಕಾರ್ಯಕ್ರಮಕ್ಕೆಂದು ರಸ್ತೆಯಲ್ಲಿ ನಡೆದುಕೊಂಡು ತೆರಳುತ್ತಿದ್ದ ವೇಳೆ ಅಲ್ತಾರು ಪಡುಮನೆ ಸಮೀಪ ಬೈಕ್ನಲ್ಲಿ ಬಂದ ಆರೋಪಿ 28 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು ಮಂದಾರ್ತಿ ಕಡೆಗೆ ಪರಾರಿಯಾಗಿದ್ದ ಘಟನೆ ಮಾ. 20ರಂದು ನಡೆದಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಾ. 21ರಂದು ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ. ಸಾಲಿಗ್ರಾಮ ಕಾರ್ಕಳ ಭಟ್ರಕಟ್ಟೆ ನಿವಾಸಿ ಮಂಜುನಾಥ ಮಯ್ಯ ಪೊಲೀಸರು ವಶಪಡಿಸಿಕೊಂಡ ಆರೋಪಿ.
ಕಳವು ನಡೆದ ಕೂಡಲೇ ಸ್ಥಳೀಯರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸುಮಾರು 20 ಕಿ.ಮೀ. ವ್ಯಾಪ್ತಿಯ ವಿವಿಧ ಕಡೆಗಳ ಸಿ.ಸಿ. ಕೆಮರಾಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಆಗ ಬೈಕ್ ಬಗ್ಗೆ ಮಾಹಿತಿ ದೊರೆತಿದೆ. ಅದರ ಆಧಾರದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯು ಈ ಹಿಂದೆ ಬಾರ್ಕೂರು ಚೌಳಿಕೆರೆ ಸಮೀಪ ವೃದ್ಧೆಯೊಬ್ಬರ ಕುತ್ತಿಗೆಯಿಂದ ಇದೇ ರೀತಿ ಚಿನ್ನವನ್ನು ಅಪಹರಿದ್ದ ಬಗ್ಗೆಯೂ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ತಾನೇ ಮಾಡಿರುವುದಾಗಿ ಆರೋಪಿಯು ಒಪ್ಪಿಕೊಂಡಿದ್ದು, ಆ ಚಿನ್ನವನ್ನು ಸಹಕಾರಿ ಸಂಘವೊಂದರಲ್ಲಿ ಅಡವಿರಿಸಿದ್ದಾಗಿ ತಿಳಿಸಿದ್ದ. ಪೊಲೀಸರು ಆ ಚಿನ್ನವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.