ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅರಣ್ಯ ಇಲಾಖೆ ಕುಂದಾಪುರ ಪ್ರಾದೇಶಿಕ ವಿಭಾಗದಿಂದ ಸೇವೆಯಿಂದ ನಿವೃತ್ತರಾದ ಕುಂದಾಪುರ ವಿಭಾಗದ ವಲಯ ಅರಣ್ಯಾಧಿಕಾರಿ ಶಿವರಾಮ ಆಚಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಇಲ್ಲಿನ ರೋಟರಿ ಭವನದಲ್ಲಿ ಜರುಗಿತು.
1986ರಲ್ಲಿ ಮಡಿಕೇರಿ ವಿಭಾಗದ ಕುಶಲನಗರದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಆರಂಭಿಸಿದ ಶಿವರಾಮ ಆಚಾರ್ ಅವರು 1996ರಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಪದೋನ್ನತಿ ಹೊಂದಿದರು. ಬಳಿಕ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತಿಗೆ ಮೊದಲು ಕುಂದಾಪುರ ವಲಯದಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ. ಬಿಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್, ಮ್ಯಾನೇಜರ್ ಉದಯ್ ಕುಮಾರ್ ಅತಿಥಿಗಳಾಗಿದ್ದರು. ವಲಯ ಅರಣ್ಯಾಧಿಕಾರಿಗಳಾದ ಪ್ರಭಾಕರ ಕುಲಾಲ್, ಸಂದೇಶ್ ಕುಮಾರ್, ಸಿದ್ದೇಶ್ ಸೇರಿದಂತೆ ವಿವಿಧ ವಲಯಗಳ ಅರಣ್ಯಾಧಿಕಾರಿಗಳು, ಗೇರು ಅಭಿವೃದ್ಧಿ ನಿಗಮದ ಸಿಬ್ಬಂದಿಗಳು, ಉಪವಲಯ ಅರಣ್ಯಾಧಿಕಾರಿಗಳ ಸಂಘ, ಅರಣ್ಯ ರಕ್ಷಕ – ವೀಕ್ಷಕ ಸಂಘ, ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸೇವಾ ನಿವೃತ್ತಿ ಹೊಂದಿದ ಶಿವರಾಮ ಆಚಾರ್ ಅವರ ಪತ್ನಿ ಶಿಕ್ಷಕಿ ಶೋಭಾ ಶಿವರಾಮ ಆಚಾರ್ ದಂತಿಗಳನ್ನು ಸನ್ಮಾನಿಸಿ ಬಿಳ್ಕೊಡಲಾಯಿತು.
ಕುಂದಾಪುರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯಕ್ ಸ್ವಾಗತಿಸಿ, ವೇಣೂರು ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ವಂದಿಸಿದರು. ವಂಡ್ಸೆ ವಲಯದ ಉಪ ಅರಣ್ಯಾಧಿಕಾರಿ ಸಂಗೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.