ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಯಕ್ಷಗಾನ ನಮ್ಮ ನಾಡಿನ ಹೆಮ್ಮೆಯ ಕಲೆ ದಿವ್ಯ ಕಲೆ ರಂಗದಲ್ಲಿ ಪಾತ್ರ ನಿರ್ವಹಣೆ ಮಾಡಲು ಅವಿರತ ಶ್ರಮ ಅಗತ್ಯ. ಕಲಾವಿದರಿಗೆ ಅಭಿಮಾನಿಗಳ ಪ್ರೋತ್ಸಾಹವೇ ಶ್ರೀ ರಕ್ಷೆ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶದ ಜೊತೆಗೆ ಇಂತಹ ಪುರಸ್ಕಾರಗಳು ಈ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಮಾಡುವ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದು ಹಿರಿಯ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ ಹೇಳಿದರು.
ಅವರು ಕೋಟ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಳದ ಶ್ರೀ ಮನ್ಮಮಹಾರಥೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಬೆಂಗಳೂರಿನ ಯಕ್ಷದೇಗುಲ ತಂಡದ ರಾವಣ ವಧೆ ಪ್ರಸಂಗ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.
ಉದ್ಘಾಟನೆ ನೆರವೇರಿಸಿದ ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ. ಎಸ್. ಕಾರಂತ ಮಾತನಾಡಿ, ದೇವಾಲಯಗಳು ಸಮಾಜದ ಆತ್ಮ ಇದ್ದಂತೆ. ಆಧ್ಯಾತ್ಮಿಕ ಶ್ರದ್ಧೆಯನ್ನು ಹೆಚ್ಚಿಸುವುದರೊಂದಿಗೆ ಸಾಮರಸ್ಯವನ್ನು ಬೆಸೆಯುವ ಕೆಲಸ ಮಾಡಬೇಕು. ದೇವಳದ ಅಭಿವೃದ್ಧಿಗೆ ಸಹಾಯ ಮಾಡಿದವರನ್ನು ಹಾಗೂ ಸ್ಥಳೀಯ ಸಾಧಕರನ್ನು ಗುರುತಿಸಿ ಪುರಸ್ಕರಿಸುವುದು ಶ್ಲಾಘನೀಯ ಎಂದರು.
ಕಲಾ ಸಂಘಟಕ ಜನಾರ್ದನ ಹಂದೆ ಮಾತನಾಡಿ, ದೇವಾಲಯಗಳು ಕಲಾಪ್ರಕಾರಗಳಿಗೆ ವೇದಿಕೆಯನ್ನು ಕಲ್ಪಿಸುವ ಕೆಲಸ ಮಾಡಬೇಕು ಆಗ ಮಾತ್ರ ನಮ್ಮ ಹೆಮ್ಮೆಯ ಕಲೆ ಸಾಹಿತ್ಯ ಸಂಸ್ಕ್ರತಿಯ ಉಳಿವು ಸಾದ್ಯ ಎಂದರು. ಇದೇ ಸಂದರ್ಭದಲ್ಲಿ ದಾನಿಗಳಾದ ಜಯಲಕ್ಷ್ಮಿ ಮತ್ತು ಜಗದೀಶ್ ಹಾಗೂ ಉದಯ ಹಂದೆ ಬೆಂಗಳೂರು ಅವರನ್ನು ಸನ್ಮಾನಿಸಲಾಯಿತು.
ಸೂರ್ಯ ನಾರಾಯಣ ಹಂದೆ ಪ್ರಾಯೋಜಿತ ನಗದು ಪುರಸ್ಕಾರವನ್ನು ಯಕ್ಷಗಾನದ ಎರಡನೆ ವೇಷಧಾರಿಗಳಾದ ಬಳ್ಕೂರು ಕೃಷ್ಣ ಯಾಜಿ, ಥಂಡೀಮನೆ ಶ್ರೀಪಾದ ಭಟ್, ಪ್ರಸನ್ನ ಶೆಟ್ಟಿಗಾರ್ ಅವರಿಗೆ ನೀಡಲಾಯಿತು.
ನವೀನ ಸೋಮಯಾಜಿ ಪ್ರಾಯೋಜಿತ ದಿ. ನರಸಿಂಹ ಸೋಮಯಾಜಿ ಪ್ರಶಸ್ತಿಯನ್ನು ಕಲಾವಿದ ಉದಯ ಹೆಗಡೆ ಕಡಬಾಳ ಅವರಿಗೆ ನೀಡಲಾಯಿತು.
ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹೆಚ್ ಸುಜಯೀಂದ್ರ ಹಂದೆ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ತಾರಾನಾಥ, ಹೊಳ್ಳ ಪಿ. ಹೆಚ್. ಡಿ. ಪದವೀಧರ ಶಮಂತಕುಮಾರ್ ಕೆ. ಎಸ್. ಇವರನ್ನು ಗೌರವಿಸಲಾಯಿತು. ಬಾಲ್ ಸಾಧಕರಾದ ದೀರಜ್ ಐತಾಳ್ ಪ್ರಜ್ಞಾ ಹಂದಟ್ಟು ಅನುಶ್ರೀ ಅವರನ್ನು ಅಭಿನಂದಿಸಲಾಯಿತು.
ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ಅಮರ ಹಂದೆ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜಾರಾಮ ಹಂದೆ ವಿನಾಯಕ ವಿವಿದ್ಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವೆಂಕಟರಮಣ ಸೋಮಯಾಜಿ ಯಕ್ಷದೇಗುಲ ಸಂಚಾಲಕ ಸುದರ್ಶನ ಉರಾಳ, ಕಟ್ಟೆ ಗೆಳೆಯರು ಹಂದಟ್ಟು ಇದರ ಅಧ್ಯಕ್ಷರಾದ ಸುರೇಶ್ ಪೂಜಾರಿ ಉಪಸ್ಥಿತರಿದ್ದರು.
ಶಿಕ್ಷಕಿ ಆಶಾಕಿರಣ ಸನ್ಮಾನ ಪತ್ರ ವಾಚಿಸಿದರು. ಆಡಳಿತ ಮಂಡಳಿಯ ಸದಸ್ಯ ಆನಂದ ರಾಮ ಉರಾಳ ಸ್ವಾಗತಿಸಿ ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿದರು. ನಾಗೇಂದ್ರ ಐತಾಳ್ ವಂದಿಸಿದರು. ಮಂಜುನಾಥ ಉರಾಳ ಸಹಕರಿಸಿದರು.
ಬಳಿಕ ಬೆಂಗಳೂರಿನ ಯಕ್ಷ ದೇಗುಲದ ಮೋಹನ್ ಹೊಳ್ಳ ನಿರ್ದೇಶನದ ಸುದರ್ಶನ ಉರಾಳ ಸಂಯೋಜನೆಯ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ, ಶಿವಾನಂದ ಕೋಟ, ಸಂದೀಪ್ ಉರಾಳ, ಥಂಡಿಮನೆ ಶ್ರೀಪಾದ ಭಟ್, ಸುಜಯೀಂದ್ರ ಹಂದೆ, ಆದಿತ್ಯ ಭಟ್, ಮನೋಜ್ ಭಟ್, ನರಸಿಂಹ ತುಂಗ, ರಾಘವೇಂದ್ರ ತುಂಗ ಕೆ,ರಾಜು ಪೂಜಾರಿ, ನಾಗರಾಜ ಪೂಜಾರಿ ಇವರನ್ನೊಳಗೊಂಡ “ರಾವಣ ವಧೆ “ಪ್ರಸಂಗ ಸುಂದರವಾಗಿ ಮೂಡಿ ಬಂತು.















