ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜೂ.16: ತಾಲೂಕಿನ ಕುಂದಾಪುರ ರೈಲ್ವೆ ನಿಲ್ದಾಣದ ಸಮೀಪದ ಕಳಂಜೆ ಎಂಬಲ್ಲಿ ಬೆಳಿಗ್ಗೆ 8:30ರ ಸುಮಾರಿಗೆ ಕೊಂಕಣ್ ರೈಲ್ವೆ ಮಾರ್ಗದ ಹಳಿಗಳ ಮೇಲೆ ಮರ ಬಿದ್ದು ವಿದ್ಯುತ್ ತಂತಿಗಳು ತುಂಡಾಗಿದ್ದರಿಂದ ಎಲ್ಲಾ ರೈಲುಗಳು 4 ಗಂಟೆಗೂ ಹೆಚ್ಚು ಕಾಲ ವಿಳಂಬ ಸಂಚಾರ ಮಾಡಿದ ಘಟನೆ ಸೋಮವಾರ ನಡೆದಿದೆ.
ಕಳಂಜೆ ಬಳಿ ಮರ ಬಿದ್ದು ರೈಲ್ವೆ ವಿದ್ಯುತ್ ತಂತಿಗಳು ತುಂಡಾಗಿದ್ದವು. ಇಲಾಖೆಯಿಂದ ಮರವನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಯಿತಾದರೂ ಮಳೆಯ ನಡುವೆ ವಿದ್ಯುತ್ ತಂತಿಗಳನ್ನು ಜೋಡಿಸುವ ಕಾರ್ಯ ವಿಳಂಬವಾಗಿತ್ತು. ಈ ನಡುವೆ ಮಧ್ಯಾಹ್ನ 12:30ರ ವೇಳೆಗೆ ರೈಲ್ವೆ ಹಳಿಗಳು ಕ್ಲೀಯರ್ ಮಾಡಿದ್ದರಿಂದ ಡಿಸೆಲ್ ಇಂಜಿನ್ ಬಳಸಿ ಬೈಂದೂರು ಕಡೆಯಿಂದ ಬಂದ ರೈಲನ್ನು ಕುಂದಾಪುರ ಕಡೆಗೂ, ಕುಂದಾಪುರ ಕಡೆಯಿಂದ ಬಂದ ರೈಲನ್ನು ಸೇನಾಪುರದ ತನಕ ಎಳೆದೊಯ್ಯಲಾಯಿತು. ಅಲ್ಲಿಂದ ಮುಂದೆ ವಿದ್ಯುತ್ ಇಂಜಿನ್ ಮೂಲಕ ರೈಲನ್ನು ಮುನ್ನಡೆಸಲಾಯಿತು. ಅಷ್ಟರಲ್ಲಾಗಲೇ ಎಲ್ಲಾ ರೈಲುಗಳನ್ನು ನಾಲ್ಕು ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿದ್ದವು. ಸಂಜೆ ವೇಳೆಗೆ ತುಂಡಾಗಿದ್ದ ವಿದ್ಯುತ್ ತಂತಿಯನ್ನೂ ದುರಸ್ತಿಪಡಿಸಿ ಕ್ಲಿಯರೆನ್ಸ್ ನೀಡಲಾಗಿದೆ.










