ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ರೈತ ಕಾಯಕ ಪ್ರಸ್ತುತ ಹಿರಿಯ ಜೀವಿಗಳಲ್ಲಿ ಕಾಣುತ್ತಿದ್ದೇವೆ ಆದರೆ ಯುವ ಸಮುದಾಯ ಕೃಷಿ ಕ್ಷೇತ್ರಕ್ಕೆ ಧುಮುಕಬೇಕು ಎಂದು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ. ಕೆ. ಕೃಷ್ಣ ಕಾಂಚನ್ ಹೇಳಿದರು.
ಅವರು ಮಂಗಳವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಗೆಳೆಯರ ಬಳಗ ಕಾರ್ಕಡ, ಸ್ನೇಹಕೂಟ ಮಣೂರು, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ ಇವರ ಸಹಯೋಗದೊಂದಿಗೆ 50ನೇ ರೈತರೆಡೆಗೆ ನಮ್ಮ ನಡಿಗೆ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ವಿದ್ಯಾಕ್ಷೇತ್ರ ಸಾಕಷ್ಟು ಮುಂದುವರಿಯುವ ಕಾಲದಲ್ಲಿ ಕೃಷಿ ಕ್ಷೇತ್ರವು ಅದೇ ರೀತಿಯಲ್ಲಿ ಮುಂದುವರಿಯಬೇಕು, ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಸಾಕಷ್ಟು ಮುಂಚೂಣಿಗೆ ಬರುವುದನ್ನು ಕಾಣುತ್ತಿದ್ದೇವೆ ಅದೇ ರೀತಿ ರೈತ ಕಾಯಕ ಇಲ್ಲದಿದ್ದರೆ ಬದುಕು ಬರಡಾಗುವುದರಲ್ಲಿಅನುಮಾನವೇ ಇಲ್ಲ ಎಂದು ನೋವು ವ್ಯಕ್ತಪಡಿಸಿದರು.
ಕೆ.ಎಂ.ಎಫ್ ನಿರ್ದೇಶಕ ಶಿವಮೂರ್ತಿ ಕೆ. ಮಾತನಾಡಿ, ಜೈ ಜವಾನ್ ಜೈ ಕಿಸಾನ್ ಎಂಬ ಧ್ಯೇಯೋಕ್ತಿ ಬಾಯಲ್ಲಿ ಇದ್ದರೆ ಸಾಲದು ಅದರ ನೈಜ ಅನುಷ್ಠಾನದ ಬಗ್ಗೆ ಚಿಂತಿಸುವ ಅಗತ್ಯತೆ ಇದೆ ಎಂದು ಸಭೆಯಲ್ಲಿ ಪ್ರತಿಪಾದಿಸಿದರು.
ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ ವಹಿಸಿದ್ದರು. ಪ್ರಾರಂಭದಲ್ಲಿ ಗೋ ಪೂಜೆ ನೆರವೆರಿಸಲಾಯಿತು. ರೈತ ಪುರಸ್ಕಾರವನ್ನು ಕೋಟತಟ್ಟು ಪಡುಕರೆಯ ಕೇರ್ಜುಮನೆ ಚಂದ್ರ ಪೂಜಾರಿ ಅವರಿಗೆ ನೀಡಲಾಯಿತು.
ಪ್ಲಾಸ್ಟಿಕ್ ಮುಕ್ತ ಜಾಗೃತಿಯ ಅನುಷ್ಠಾನಕ್ಕಾಗಿ ಬೆಂಗಳೂರಿನ ಕ್ಯಾಪ್ಸ್ ಫೌಂಡೇಶನ್ ಕೊಡ ಮಾಡಿದ ಬಟ್ಟೆ ಚೀಲಗಳನ್ನು ಸಭೆಯಲ್ಲಿ ನೀಡಿ ಜಾಗೃತಿ ಮೂಡಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಿದ್ಧಿ ಶ್ರೀನಿವಾಸ ಪೂಜಾರಿ, ವಡ್ಡರ್ಸೆ ಗ್ರಾಮಪಂಚಾಯತ್ ಸದಸ್ಯ ಕೋಟಿ ಪೂಜಾರಿ, ಶ್ರೀನಿಧಿ ಫ್ರೆಂಡ್ಸ್ ಅಧ್ಯಕ್ಷ ಚಂದ್ರ ಪುತ್ರನ್, ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಉಪಸ್ಥಿತರಿದ್ದರು.
ಪಂಚವರ್ಣ ಯುವಕ ಮಂಡಲದ ಸಲಹಾ ಸಮಿತಿಯ ಅಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ, ಸಂಯೋಜಿಸಿದರು. ಸದಸ್ಯೆ ಗೀತಾ ಶಿವರಾಂ ಸನ್ಮಾನಪತ್ರ ವಾಚಿಸಿದರು. ಮಹಿಳಾ ಮಂಡಲದ ಸಂಚಾಕಿ ಸುಜಾತ ಬಾಯರಿ ನಿರೂಪಿಸಿ, ಸದಸ್ಯೆ ಶ್ಯಾಮಲ ಸಿ. ಪುತ್ರನ್ ವಂದಿಸಿದರು.
















