ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಅಧ್ಯಕ್ಷತೆಯಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕ್ಷೇತ್ರ ವ್ಯಾಪ್ತಿಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಪ್ರವರ್ಗ ಎ, ಬಿ ಹಾಗೂ ಸಿ ವರ್ಗದ ದೇವಸ್ಥಾನಗಳ ಮುಖ್ಯಸ್ಥರುಗಳೊಂದಿಗೆ ದೇವಸ್ಥಾನಗಳ ಜಲ ಮೂಲಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಕ್ಷೇತ್ರ ವ್ಯಾಪ್ತಿಯ ದೇವಸ್ಥಾನಗಳ ವಾಪ್ತಿಯಲ್ಲಿ ಬರುವ ಎಲ್ಲಾ ಕೆರೆಗಳ ಅನ್ವೇಷಣೆಯೊಂದಿಗೆ ದೇವಸ್ಥಾನ, ಊರಿನ ಹಾಗೂ ಸರಕಾರದ ಸಹಕಾರದೊಂದಿಗೆ ಹಾಗೂ ಸರಕಾರೇತರ ಸಂಸ್ಥೆಗಳ ಸಹ ಭಾಗಿತ್ವದಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸುವುದರ ಮೂಲಕ ಗ್ರಾಮಗಳ ಜಲ ಮೂಲಗಳನ್ನು ಬಲ ಪಡಿಸುವ ಉದ್ದೇಶದೊಂದಿಗೆ ಈ ಸಭೆಯನ್ನು ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಅವಶ್ಯಕ ಇರುವ ದೇವಸ್ಥಾನಗಳ ಸಂಬಂಧಪಟ್ಟ ಎಲ್ಲಾ ಕೆರೆಗಳ ಸರ್ವೇ ಮೂಲಕ ಕೆರೆಗಳ ಅನ್ವೇಷಣೆ ಹಾಗೂ ಅಭಿವೃದ್ಧಿಗೆ ರೂಪು ರೇಷೆ ಹಾಕಿ ಕೊಳ್ಳಲಾಗುವುದು ಎಂದರು.

ದೇವಸ್ಥಾನಗಳ ಹೆಸರಿಗೆ ಆರ್ ಟಿಸಿ ದಾಖಲೆ ವರ್ಗಾವಣೆಗೆ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಶಾಸಕರಿಂದ ಸೂಚನೆ:
ಹಲವು ದಶಕಗಳಿಂದ ಕ್ಷೇತ್ರದ ದೇವಸ್ಥಾನಗಳ ಅನುಭೋಗದಲ್ಲಿ ಸರಕಾರಿ ಜಾಗಗಳಿದ್ದರೂ ದೇವಸ್ಥಾನದ ಹೆಸರಿಗೆ ಮಾಲಿಕತ್ವ ದಾಖಲೆ ಇಲ್ಲದೇ ಇರುವುದರಿಂದ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುತ್ತಿದೆ. ಹಾಗಾಗಿ ದೇವಸ್ಥಾನಕ್ಕೆ ಸಂಬಂಧ ಪಟ್ಟ ಜಾಗಗಳಿಗೆ ಆರ್ ಟಿ ಸಿ ಕಾಲಂ ನಂಬ್ರ 9 ರಲ್ಲಿ ನಮೂದು ಮೂಲಕ ಮಾಲೀಕತ್ವವನ್ನು ಒದಗಿಸಲು ಕ್ರಮ ವಹಿಸುವುದರೊಂದಿಗೆ ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ ಬೇಕಾದ ಪೂರಕ ವಾತಾವರಣ ಕಲ್ಪಿಸಿ ಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಉಡುಪಿ ಜಿಲ್ಲೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಟಿ. ಎನ್ ಮಂಜುಳಾ ಹಾಗೂ ಕ್ಷೇತ್ರದ ಪ್ರವರ್ಗ ಎ, ಬಿ ಹಾಗೂ ಸಿ ದೇವಸ್ಥಾಗಳ ಮುಖ್ಯಸ್ಥರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.










