ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮಕ್ಕಳಲ್ಲಿ ಪರಿಸರ ಪ್ರಜ್ಞೆ ಜಾಗೃತಗೊಳಿಸುವ ಕಾರ್ಯ ನಿಜಕ್ಕೂ ಅರ್ಥಪೂರ್ಣ ಕಾರ್ಯ ಎಂದು ಪಂಚವರ್ಣ ನಿರಂತರ ಪರಿಸರಸ್ನೇಹಿ ಅಭಿಯಾನವನ್ನು ಶಿಕ್ಷಣ ತಜ್ಞ ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ. ಜಗದೀಶ ನಾವಡರು ಮುಕ್ತ ಕಂಠದಿಂದ ಶ್ಲಾಘಿಸಿದರು.
ಅವರು ಭಾನುವಾರ ಕೋಟದ ಹಂದಟ್ಟು ಪರಿಸರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇವರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಪೇತ್ರಿ ಅನ್ನಪೂರ್ಣ ನರ್ಸರಿ ಇವರ ಸಹಯೋಗದೊಂದಿಗೆ 305ನೇ ವಾರದ ಪರಿಸರಸ್ನೇಹಿ ಹಸಿರು ಹೆಜ್ಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಿಡ ಮರಗಳ ಬಗ್ಗೆ ಮಕ್ಕಳಿಗೆ ನಮ್ಮ ಹಿಂದಿನ ಹಿರಿಯರು ತಿಳಿ ಹೇಳುವ ಕಾರ್ಯ ಮಾಡಿದ್ದರು ಆದರೆ ಇದೀಗ ಅದರ ಬಗ್ಗೆ ಅರಿವು ಕ್ಷೀಣಿಸಿದೆ ಈ ದಿಸೆಯಲ್ಲಿ ಪೋಷಕರು ಅದರ ಬಗ್ಗೆ ಜಾಗೃತಗೊಳಿಸುವ ಕಾರ್ಯ ಮಾಡಲಿ ಪರಿಸರ ಸಮತೋಲನದಿಂದ ಇದ್ದರೆ ವಾತಾವರಣದಲ್ಲಿ ವೈಪರೀತ್ಯಗಳು ಇನ್ನಿಲ್ಲದಂತ್ತಾಗುತ್ತದೆ.ಪಂಚವರ್ಣ ಸಂಘಟನೆ ನಿತ್ಯ ನಿರಂತರವಾಗಿ ಪರಿಸರದ ಬಗೆಗಿನ ಕಾಳಜಿ ಕಾರ್ಯಕ್ರಮಗಳು ಇತರ ಎಲ್ಲಾ ಸಂಘಗಳಿಗೂ ಮಾದರಿಯಾಗಲಿ ಎಂದರು.
ಅಭಿಯಾನದಲ್ಲಿ ಉಪಸ್ಥಿತರಿದ್ದ ಮಕ್ಕಳಿಗೆ ಪೋಷಕರಿಗೆ ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ ಪ್ರತಿಜ್ಞಾ ವಿಧಿ ಭೋದಿಸಿದರು. ಹಲವಾರು ಮನೆಗಳಿಗೆ ಮುಂಜಾನೆ ತೆರಳಿದ ಪಾರಿಜಾತ, ಇತರ ಗಿಡ ನೆಟ್ಟು ಅದರ ಮಹತ್ವದ ಬಗ್ಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಯಶೋಧ ಹಂದಟ್ಟು, ಕೋಟತಟ್ಟು ಪಂಚಾಯತ್ ಮಾಜಿ ಸದಸ್ಯ ಪ್ರಕಾಶ್ ಹಂದಟ್ಟು, ಗ್ರಾಮದ ಪ್ರಮುಖರಾದ ಆನಂದ್ ಪೂಜಾರಿ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಜೊತೆಕಾರ್ಯದರ್ಶಿ ಶಕೀಲ ಎನ್ ಪೂಜಾರಿ ಸ್ವಾಗತಿಸಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿ, ಇಂಡಿಕಾ ಕಲಾ ಬಳಗದ ಪ್ರಭಾಕರ್ ಮಣೂರು ವಂದಿಸಿದರು.

















