ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಅತ್ಯಂತ ಅರ್ಥವತ್ತಾಗಿ ಕೆಲಸ ಮಾಡಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಎಸ್. ಜನಾರ್ದನ್ ಮರವಂತೆ ಅವರು ಒಬ್ಬರು. ಮರವಂತೆಯನ್ನೇ ತನ್ನ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡು ರಾಜ್ಯ, ರಾಷ್ಟ್ರಕ್ಕೆ ಒ೦ದು ಮಾದರಿ ಗ್ರಾಮ ಪಂಚಾಯತ್ ಆಗಿ ಮುಂದಿಟ್ಟವರು. ಪಂಚಾಯತ್ ರಾಜ್ ವ್ಯವಸ್ಥೆಗೆ ದೊಡ್ಡ ಶಕ್ತಿಯಾಗಿದ್ದ ಜನಾರ್ದನ ಮರವಂತೆ ಅವರ ನಿಧನ ವ್ಯವಸ್ಥೆಗೆ ದೊಡ್ಡ ನಷ್ಟವಾಗಿದೆ. ಅವರ ಚಿಂತನೆಗಳು, ನಿಲುವು, ಯೋಜನೆಗಳು ಸದಾ ನೆನಪಿನಲ್ಲಿ ಉಳಿಯುವ೦ತೆ ಕಾರ್ಯ ಯೋಜನೆಯೊಂದನ್ನು ರೂಪಿಸೋಣ ಎ೦ದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ಲಕ್ಷ್ಮೀ ನರಸಿ೦ಹ ಕಲಾ ಮಂದಿರದಲ್ಲಿ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ರಿ., ಜನಪ್ರತಿನಿಧಿ ಪ್ರಕಾಶನ ಕುಂದಾಪುರ, ಸದ್ಭಾವನಾ ವೇದಿಕೆ ರಿ., ಕುಂದಾಪುರ, ನಮ್ಮಭೂಮಿ ಹಟ್ಟಿಯಂಗಡಿ ಇವರ ಆಶ್ರಯದಲ್ಲಿ ನಡೆದ ಪಂಚಾಯತ್ ರಾಜ್ ತಜ್ಞ, ಹಿರಿಯ ಪತ್ರಕರ್ತ ಎಸ್. ಜನಾರ್ದನ ಮರವಂತೆ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿದರು.

ಪಂಚಾಯತ್ ರಾಜ್ ತಜ್ಞ, ಹಿರಿಯ ನ್ಯಾಯವಾದಿ ಟಿ.ಬಿ.ಶೆಟ್ಟಿ ಮಾತನಾಡಿ, ಪಂಚಾಯತ್ ವ್ಯವಸ್ಥೆಯ ಕರ್ನಾಟಕ ಮಾತ್ರವಲ್ಲ ಇತರ ರಾಜ್ಯಗಳ ಪಂಚಾಯತ್ ರಾಜ್ ಕಾಯಿದೆಯನ್ನು ಅಧ್ಯಯನ ಮಾಡಿ, ಅಳವಾದ ಅನುಭವ ಹೊಂದಿರುವ ವ್ಯಕ್ತಿ ಎಸ್.ಜನಾರ್ದನ್ ಮರವ೦ತೆ ಆಗಿದ್ದರು. ಅವರಲ್ಲಿರುವ ಅನುಭವ ಯಾವ ಅಧಿಕಾರಿಗೂ ಇಲ್ಲ. ಅಪಾರವಾದ ಜ್ಞಾನಶಕ್ತಿಯನ್ನು ಹೊಂದಿದ್ದರು, ನೂರಾರು ಕಾಯ್ದೆಗಳ ಮಾಹಿತಿ ಹೊಂದಿದ್ದರು. ರಮೇಶ ಕುಮಾರ್ ಸಮಿತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಸ್ಥಾನವನ್ನು ತುಂಬಲು ಯಾವ ಕಾಲಕ್ಕೂ ಸಾಧ್ಯವಿಲ್ಲ ಎಂದರು.
ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿ, ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಗಾದೆಗೆ ಉತ್ತಮ ನಿದರ್ಶನ ಜನಾರ್ದನ ಮರವಂತೆ ಅವರು. ವಿದ್ಯಾಭ್ಯಾಸದ ನಡುವೆ ಪಂಚಾಯತ್ನಲ್ಲಿ ಸೇವೆ ಸಲ್ಲಿಸಿ ಮುಂದೆ ಪ್ರಾಧ್ಯಾಪಕರಾಗಿ ನಿವೃತ್ತರಾದ ಬಳಿಕವೂ ಪುನಃ ಪಂಚಾಯತ್ ರಾಜ್ ವ್ಯವಸ್ಥೆಗೆ ಆಗಮಿಸಿ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಿದರು. ಒಕ್ಕೂಟದ ಗೌರವಾಧ್ಯಕ್ಷರಾಗಿ ರಾಜ್ಯಮಟ್ಟದಲ್ಲಿ ಕುಂದಾಪುರ ಒಕ್ಕೂಟಕ್ಕೆ ವಿಶೇಷ ಘನತೆ ತಂದುಕೊಟ್ಟರು. ಪಂಚಾಯತ್ ರಾಜ್ ಕಾಯ್ದೆಯನ್ನು ಜನಾಧಿಕಾರದ ಮೂಲಕ ಸರಳವಾಗಿ, ಸಂಕ್ಷಿಪ್ತವಾಗಿ ಜನಸಾಮಾನ್ಯರಿಗೆ ತಲುಪಿಸಿದ ಹಿರಿಮೆ ಜನಾರ್ದನ ಮರವಂತೆ ಅವರಿಗೆ ಸಲ್ಲುತ್ತದೆ. ಪಂಚಾಯತ್ ರಾಜ್ ವಿಷಯಕ್ಕೆ ಸಂಬಂಧಿಸಿ ರಾಷ್ಟ್ರೀಯ, ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಹೋಗುವಾಗ ಅವರ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದೆ ಎಂದರು.
ಹಿರಿಯ ನ್ಯಾಯವಾದಿ, ಸಾಹಿತಿ ಎ.ಎಸ್.ಎನ್.ಹೆಬ್ಬಾರ್ ಮಾತನಾಡಿ, ಸಾಧನಾತ್ಮಕ ಚಿಂತನೆಯ ಹರಿಕಾರ ಎಸ್.ಜನಾರ್ದನ ಮರವಂತೆ. ಯಾವುದಕ್ಕೂ ಅವರು ನೋ ಎನ್ನುತ್ತಿರಲಿಲ್ಲ. ಎಲ್ಲದ್ದಕ್ಕೂ ಎಸ್. ಎನ್ನುತ್ತಿದ್ದರು. ಅದ್ಭುತ ಕಥೆಗಾರರೂ ಆಗಿದ್ದ ಅವರು ತಾಳಮದ್ದಲೆಯಲ್ಲಿ ಅರ್ಥವನ್ನು ಹೇಳಿದ್ದರು. ಕವನಗಳನ್ನು ಬರೆದಿದ್ದರು.ಸಾಕಷ್ಟು ಪ್ರಬಂಧಗಳನ್ನು ಬರೆದಿದ್ದರು. ಸಮಾಜಕ್ಕೆ ಸ್ಪಂದಿಸುವ ಸಹಕಾರ ಮನೋಭಾವದ ಶ್ರೇಷ್ಠ ವ್ಯಕ್ತಿ ಅವರಾಗಿದ್ದರು ಎಂದರು.
ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಅಗಲಿದ ಎಸ್.ಜನಾರ್ದನ್ ಮರವಂತೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪತ್ರಕರ್ತ ಶಶಿಧರ ಹೆಮ್ಮಾಡಿ, ಸದ್ಭಾವನಾ ವೇದಿಕೆಯ ಯಾಕೂಬ್ ಖಾದರ್ ಗುಲ್ವಾಡಿ, ಕಲಾಕ್ಷೇತ್ರದ ಅಧ್ಯಕ್ಷರಾದ ಬಿ.ಕಿಶೋರ್ ಕುಮಾರ್, ಕಾರ್ಮಿಕ ಮುಖಂಡರಾದ ಎಚ್.ನರಸಿಂಹ, ಹಿರಿಯ ಲೇಖಕಿ ಡಾ.ಪಾರ್ವತಿ ಜಿ.ಐತಾಳ್, ಸಹಕಾರಿ ಧುರೀಣ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಪಂಚಾಯತ್ ರಾಜ್ ತಜ್ಞ ಎಂ.ಎಲ್., ಡಾ.ಅತುಲ್ ಕುಮಾರ್ ಶೆಟ್ಟಿ ಚಿತ್ತೂರು, ನಮ್ಮ ಭೂಮಿ ಸ೦ಸ್ಥೆಯ ಸುರೇಶ, ಪ್ರಾಧ್ಯಾಪಕ ರಾಮಾಂಜಿ, ವಿಲ್ಪ್ರೇಡ್ ಡಿಸೋಜ, ಸಚ್ಚಿದಾನಂದ ಮೋಹನಚಂದ್ರ ಉಪ್ಪುಂದ, ಜತೀಂದ್ರ ಮರವಂತೆ ನುಡಿನಮನ ಸಲ್ಲಿಸಿದರು.
ಜನಪ್ರತಿನಿಧಿ ಪ್ರಕಾಶನದ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

















