ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತ್ತೀಚೆಗೆ ನಡೆದ ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳು ಅತ್ಯಂತ ದುರದೃಷ್ಟಕರ ಮತ್ತು ಯಾರೂ ಸಹಿಸಲಾಗದ್ದು. ಲಕ್ಷಾಂತರ ಶ್ರಮಜೀವಿ ವಿದ್ಯಾರ್ಥಿಗಳು ಈ ಲೋಪಗಳಿಂದಾಗಿ ಸಂಕಟ ಅನುಭವಿಸಿದ ಬಗ್ಗೆ ನಮಗೆ ತೀವ್ರ ನೋವು ಹಾಗೂ ಸಂವೇದನೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಸರ್ಕಾರವು ಈಗಾಗಲೇ ಪಾರದರ್ಶಕತೆ ತರಲು ಕಠಿಣ ಕಾನೂನುಗಳು ಹಾಗೂ ಸಮಗ್ರ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಹೀಗಿರುವಾಗ, ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಮಾಜಿ ಶಾಸಕರಾದ ಗೋಪಾಲ್ ಪೂಜಾರಿ ಅವರ ಹೇಳಿಕೆಯು ಕೇವಲ ಅಗ್ಗದ ಪ್ರಚಾರ ಹಾಗೂ ರಾಜಕೀಯ ಅವಕಾಶವಾದಿತನವಾಗಿದೆ ಎಂದು ಕರ್ನಾಟಕ ಬಿಜೆಪಿಯ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಹಾಗೂ ಮಾಧ್ಯಮ ವಕ್ತಾರ ರತನ್ ರಮೇಶ್ ಪೂಜಾರಿ ಟೀಕಿಸಿದ್ದಾರೆ.
ಕೇಂದ್ರ ಸರಕಾರ ನಾವು ವಿದ್ಯಾರ್ಥಿಗಳ ಪರವಾಗಿ ದೃಢವಾಗಿ ನಿಲ್ಲುತ್ತೇವೆ ಮತ್ತು ಈ ಕೃತ್ಯಕ್ಕೆ ಕಾರಣರಾದವರು ಕಾನೂನಿನ ಸಂಪೂರ್ಣ ಶಿಕ್ಷೆಯನ್ನು ಎದುರಿಸಲೇಬೇಕು.ಸೋರಿಕೆಯಲ್ಲಿ ಭಾಗಿಯಾದ ತಪ್ಪಿತಸ್ಥರು ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಈ ಸಮಸ್ಯೆಯ ಗಂಭೀರತೆಯನ್ನು ಮನಗಂಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಸರ್ಕಾರವು ಈಗಾಗಲೇ ಪಾರದರ್ಶಕತೆ ತರಲು ಕಠಿಣ ಕಾನೂನುಗಳು ಹಾಗೂ ಸಮಗ್ರ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರ ತನಿಖೆ ಜವಾಬ್ದಾರಿಯನ್ನು ಸಿಬಿಐಗೆ ವಹಿಸಿದೆ. ಹತ್ತು ವರ್ಷ ಸಜೆ, 10 ಕೋಟಿ ರೂಪಾಯಿಯ ದಂಡ ವಿಧಿಸಿ ಕಾನೂನು ತರಲಾಗಿದೆ. ಅಷ್ಟೇ ಅಲ್ಲದೆ ವಿಶ್ವ ಪ್ರಸಿದ್ಧ ತಂತ್ರಜ್ಞಾನ ಪರಿಣಿತರಾದ ನಂದನ್ ನೀಲಕಣಿ ಇವರ ನೇತೃತ್ವದಲ್ಲಿ ಹೈ ಪವರ್ಡ್ ಟಾಸ್ಕ್ ಫೋರ್ಸ್ ಕೂಡ ರಚಿಸಲಾಗಿದೆ.
ಕೇಂದ್ರದತ್ತ ಬೆರಳು ತೋರಿಸುವ ಮೊದಲು ಗೋಪಾಲ್ ಪೂಜಾರಿ ಅವರು ಈ ಮೂಲಭೂತ ಪ್ರಶ್ನೆಗೆ ಉತ್ತರಿಸಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾಲು ಸಾಲು ಪರೀಕ್ಷಾ ಅಕ್ರಮಗಳು ಮತ್ತು ಪತ್ರಿಕೆ ಸೋರಿಕೆಗಳು ನಡೆದು ಸಾವಿರಾರು ಯುವಕರ ಭವಿಷ್ಯ ಕತ್ತಲಾದಾಗ ಎಷ್ಟು ಮಂದಿ ಕಾಂಗ್ರೆಸ್ ಸಚಿವರು ಅಥವಾ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ್ದರು? ಈ ಹಿಂದೆ ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ ಮಂತ್ರಿ ಆಗಿದ್ದಾಗ ಕೇವಲ 1 ತಿಂಗಳ ಅವಧಿಯಲ್ಲಿ ಎರಡು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಇತ್ತೀಚೆಗಷ್ಟೇ ಮಧು ಬಂಗಾರಪ್ಪನವರು ಶಿಕ್ಷಣ ಮಂತ್ರಿಯಾಗಿದ್ದಾಗ ಎಸ್ ಎಸ್ ಎಲ್ ಸಿ ಪ್ರಿಪರೇಟರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಮೊನ್ನೆಯಷ್ಟೇ ಕಾಂಗ್ರೆಸ್ ಸರ್ಕಾರದ ಕೆಳಗಡೆ ಕೆಪಿಎಸ್ಸಿ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ರಾಜ್ಯಾದ್ಯಂತ ಹೋರಾಟಗಳಾಗಿತ್ತು. ಈ ಎಲ್ಲಾ ಅಕ್ರಮಗಳ ಹೊಣೆ ಹೊತ್ತು ಕಾಂಗ್ರೆಸ್ ಪಕ್ಷದ ಯಾವ ಸಚಿವರಾಗಲಿ ರಾಜಿನಾಮೆ ನೀಡಿದ ಉದಾಹರಣೆ ಇದೆಯೇ?
ಕರ್ನಾಟಕದಲ್ಲಿ ಸಾರ್ವಜನಿಕ ಪರೀಕ್ಷೆಗಳನ್ನು ನಡೆಸುವ ವಿಷಯದಲ್ಲಿ ಕಾಂಗ್ರೆಸ್ನ ಇತಿಹಾಸವು ಸಾಂಸ್ಥಿಕ ವೈಫಲ್ಯ, ಬೇಜವಾಬ್ದಾರಿ ಮತ್ತು ಶೂನ್ಯ ಹೊಣೆಗಾರಿಕೆಯಿಂದ ಕೂಡಿದೆ. ತಮ್ಮ ಆಡಳಿತಾವಧಿಯಲ್ಲಿ ರಾಜ್ಯಮಟ್ಟದ ಪರೀಕ್ಷೆಗಳು ಪದೇ ಪದೇ ಹಾದಿತಪ್ಪಿದಾಗ ಒಬ್ಬೇ ಒಬ್ಬ ಕಾಂಗ್ರೆಸ್ ನಾಯಕನೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿಲ್ಲ.
ತಮ್ಮದೇ ಪಕ್ಷದ ಕಪ್ಪು ಚರಿತ್ರೆಯನ್ನು ಮರೆತು, ವಿದ್ಯಾರ್ಥಿಗಳ ಭವಿಷ್ಯ ಮತ್ತು ಆತಂಕವನ್ನು ಇಟ್ಟುಕೊಂಡು ರಾಜಕೀಯ ಲಾಭ ಗಿಟ್ಟಿಸಲು ಯತ್ನಿಸುತ್ತಿರುವುದು ಕಾಂಗ್ರೆಸ್ನ ಕಪಟತನವನ್ನು ಎತ್ತಿ ತೋರಿಸುತ್ತದೆ. ಮೋದಿ ಸರ್ಕಾರವು ಬರಿ ಮಾತಿನಲ್ಲಿ ರಾಜಕೀಯ ಮಾಡದೆ, ಯುವಜನತೆಯ ಭವಿಷ್ಯಕ್ಕಾಗಿ ವ್ಯವಸ್ಥೆಯನ್ನು ಸರಿಪಡಿಸುವ ದೃಢ ನಿರ್ಧಾರಕ್ಕೆ ಬದ್ಧವಾಗಿದೆ ಎಂದು ಕರ್ನಾಟಕ ಬಿಜೆಪಿಯ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಹಾಗೂ ಮಾಧ್ಯಮ ವಕ್ತಾರ ರತನ್ ರಮೇಶ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















