ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮನುಷ್ಯನಿಗಿರುವ ಶ್ರೇಷ್ಠ ಬಲವೆಂದರೆ ಬುದ್ದಿ ಬಲ, ಆ ಬುದ್ದಿಯ ವಿಕಾಸ ಆಗ ಬೇಕಾದರೂ, ವಿದ್ಯೆ ಅವಶ್ಯಕ, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಪ್ರಾಪ್ತ ಆಗಬೇಕು. ಪ್ರಪಂಚದಲ್ಲಿಯೇ ಅತ್ಯಂತ ವ್ಯವಸ್ಥಿತ ವಾಗಿರುವ ದೇಶ ನಮ್ಮದು. ಆಧ್ಯಾತ್ಮಿಕ ವಿಚಾರದಲ್ಲಿ ನಮ್ಮ ದೇಶ ಸರ್ವಶ್ರೇಷ್ಠ ದೇಶ. ಇದರೊಂದಿಗೆ ಆಧುನೀಕತೆ, ಸಾಧನೆ, ಎಲ್ಲ ವ್ಯವಸ್ಥೆಗಳಲ್ಲೂ ಸರ್ವ ಉತ್ಕೃಷ್ಟ ದೇಶ ಆಗಬೇಕಾದರೆ ಎಂದು ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾ ಸ್ವಾಮೀಜಿ ಹೆಮ್ಮಾಡಿಯಲ್ಲಿ ಹೇಳಿದರು.

ಅವರು ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ವತಿಯಿಂದ ಸುಳ್ಸೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಸತಿ ನಿಲಯಗಳನ್ನು ಗುರುವಾರ ಉದ್ಘಾಟಿಸಿ, ಆಶೀರ್ವಚನ ನೀಡಿ ಮಾತನಾಡಿದರು. ದೇಶದ ಮಕ್ಕಳಲ್ಲಿ ಅಗಾಧವಾದ ಪ್ರತಿಭೆಯಿದೆ. ಆದರೆ ಪ್ರತಿಭೆ ಹೊರ ಎರಲು, ಪ್ರಕಟವಾಗಲು ಕೊರತೆಯಿದೆ. ಅದನ್ನು ನೀಗಿಸುವ ಕೆಲಸ ಇಂತಹ ಕ್ಷಣ ಸಂಸ್ಥೆಗಳಿಂದ ಆಗಬೇಕು. ಮಕ್ಕಳ ಪ್ರತಿಭೆ ಹೊರಬಂದು, ಅದರಿಂದ ದೇಶ, ಸಮಾಜ, ರಾಜ್ಯ ಮಕ್ಕಳಿಗೂ ಉಪಯೋಗ ಆಗುವಂತಾಗಲಿ. ಭಗವಂತ ನಮಗೆ ಕೊಟ್ಟ ಉತ್ತಮ ಪ್ರತಿಭೆ ಉಪಯೋಗಿಸಿ, ಅದರಿಂದ ಸಮಾಜಕ್ಕೆ ಒಳ್ಳೆಯದು ಮಾಡಿ ಎಂದು ಹಾರೈಸಿದರು.
ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ಮೊಗವೀರ, ಕಾರ್ಯ ದರ್ಶಿ ಶ್ಯಾಮಲಾ ಗಣೇಶ್ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿ.ಪಂ. ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ನಾನಾ ರಂಗದ ಪ್ರಮುಖರು, ಜನತಾ ವಿದ್ಯಾಸಂಸ್ಥೆಗಳ ಬೋಧಕ- ಬೋಧಕೇತರ ವೃಂದದವರು, ಮಕ್ಕಳು, ಪೋಷಕರು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಶಂಕರಾಚಾರ್ಯರ ಕುರಿತು ವಿದ್ಯಾರ್ಥಿಗಳಾದ ಜನತಾ ಪಿಯು ಕಾಲೇಜಿನ ಸಿಂಚನಾ ಜಿ. ಭಟ್, ನ್ಯೂ ಆಂಗ್ಲ ಮಾಧ್ಯಮ ಶಾಲೆಯ ಸಮೃದ್ಧಿ ಶೆಟ್ಟಿ ಮಾತನಾಡಿದರು.
ವೇದ ಮೂರ್ತಿ ಬಡಾಕೆರೆ ಶೃಂಗೇರಿ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ್ ಅಡಿಗ ಪ್ರಸ್ತಾವಿಸಿದರು. ಉಪನ್ಯಾಸಕ ಉದಯ ನಾಯ್ಕ ಸ್ವಾಗತಿಸಿ, ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

















