ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸರಕಾರಿ ಸೇವೆಯಲ್ಲಿ ತನ್ನ ನೈಜತೆಯನ್ನು ಪ್ರದರ್ಶಿಸಿದ ಜಾನಕಿ ಟೀಚರ್ ಜನಸ್ನೇಹಿ ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಹೇಳಿದರು.
ಅವರು ಕೋಟತಟ್ಟು ಪಡುಕರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ತನ್ನ ಸೇವಾ ನಿವೃತ್ತಿ ಹೊಂದಿದ ಜಾನಕಿ ಟೀಚರ್ ಸಾರ್ವಜನಿಕ ಅಭಿನಂದನೆ, ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದರು. ಪ್ರಸ್ತುತ ಕಾಲಘಟ್ಟದಲ್ಲಿ ಸರಕಾರಿ ಸೇವೆಯಲ್ಲಿ ಜನಪರ ಕಾಳಜಿ ಅಪರೂಪ ಆದರೆ ಜಾನಕಿ ಟೀಚರ್ ಸೇವಾ ಅವಧಿಯಲ್ಲಿ ಸರಕಾರ ಶಾಲೆಯನ್ನು ಬಹು ಎತ್ತರಕ್ಕೆ ಕೊಂಡ್ಯೊಯ್ದಿದ್ದಾರೆ.ಇಂತಹ ಶಿಕ್ಷಕರು ಬೆರಳೆಣಿಕೆಯಲ್ಲಿ ಕಾಣಲು ಸಾಧ್ಯ,ಶಿಕ್ಷಕಿ ಅನ್ನುವುದಕ್ಕಿಂತ ಮಾತೃ ಹೃದಯಿಯಾಗಿ ನಗುಮೊಗದ ಶೈಕ್ಷಣಿಕ ಸೇವೆಯನ್ನು ನೀಡಿದ್ದಾರೆ ಎಂದರು.

ಪ್ರಸಿದ್ಧ ಮನೋವೈದ್ಯ ಡಾ.ಪ್ರಕಾಶ್ ತೋಳಾರ್ ಮಾತನಾಡಿ ಶಿಕ್ಷಣ ವ್ಯವಸ್ಥೆಯಲ್ಲಿ ನಿಸ್ವಾರ್ಥ ಸೇವೆ ಅಪರೂಪ ಆದರೆ ಜಾನಕಿ ಟೀಚರ್ ಮಕ್ಕಳ ಮನಸ್ಸು ಗೆದ್ದ ಬಲು ಅಪರೂಪದ ಶಿಕ್ಷಕರಾಗಿದ್ದಾರೆ,ಸರಕಾರಿ ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ಇಂತಹ ಶಿಕ್ಷಕಿ ಮಾದರಿಯಾಗಿದ್ದಾರೆ ಎಂದರು.
ಸನ್ಮಾನಗಳ ಮಹಾಪೂರ
ಬಿಳ್ಕೋಡುಗೆ ಸಮಾರಂಭದಲ್ಲಿ ಜಾನಕಿ ಟೀಚರ್ ಸ್ಥಳೀಯವಾಗಿ ಕೆಲ ಅಂಗನವಾಡಿಗಳು, ಶಾಲೆಯ ದಾಸೋಹದಲ್ಲಿ ಕಾರ್ಯನಿರ್ವಹಿಸುವವರು, ಊರ ಗ್ರಾಮಸ್ಥರು,ಕ್ಷೇ ತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ, ಶಾಲಾ ಶಿಕ್ಷಕರ ವೃಂದ, ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರ ವೃಂದ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘ, ಸ್ಥಳೀಯ ಸಂಘಸಂಸ್ಥೆಗಳು ಜಾನಕಿ ನಾಗರಾಜ್ ಭಟ್ ದಂಪತಿಗಳಿಗೆ ಗೌರವಾಭಿಂದನೆ ಸಲ್ಲಿಸಿದರು.
ಪ್ರೀತಿಯ ಟೀಚರ್ಗೆ ಮಕ್ಕಳ ಉಡುಗೊರೆ:
ಸಭೆ ಪ್ರಾರಂಭವಾಗುತ್ತಿದ್ದಂತೆ ಶಾಲಾ ಮಕ್ಕಳ ಕೈಯಲ್ಲಿ ವಿವಿಧ ರೀತಿಯ ಗಿಫ್ಟ್ ಪ್ಯಾಕ್ ರಾರಾಜಿಸುತ್ತಿತ್ತು. ವೇದಿಕೆಯಲ್ಲಿದ್ದ ಗಣ್ಯರು ಅಭಿನಂದಿಸಿದ ಮರುಕ್ಷಣ ಮಕ್ಕಳು ಪ್ರೀತಿಯ ಟೀಚರತ್ತ ಸಾಲು ಸಾಲಾಗಿ ಗಿಫ್ಟ್ ಹಿಡಿದು ಟೀಚರ್ಗೆ ಉಡುಗೊರೆಯಾಗಿ ನೀಡಿ ಕಾಲಿಗೆ ಬಿದ್ದು ನಮಸ್ಕರಿಸಿ ಕ್ಷಣ ವೇದಿಕೆಯಲ್ಲಿದ್ದ ಗಣ್ಯರನ್ನು ಭಾವುಕರನ್ನಾಗಿಸಿತು.
ಸಭೆಯಲ್ಲಿ ಮುಖ್ಯ ಅಭ್ಯಾಗತರಾಗಿ ಕೆ.ಎಂ.ಎಫ್ ನಿರ್ದೇಶಕ ಶಿವಮೂರ್ತಿ ಕೆ, ಕೋಟದ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಕರ್ನಾಟ ರಾಜ್ಯ ರಾಥಮಿಕ ಶಿಕ್ಷಕರ ಸಂಘದ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಕೋಟತಟ್ಟು ಗ್ರಾ.ಪಂ ನಿಕಟಪೂರ್ವ ಸದಸ್ಯರಾದ ವಿದ್ಯಾ ಸಾಲಿಯಾನ್, ಅಶ್ವಿನಿ ದಿನೇಶ್, ರಾಬರ್ಟ್ ಡಿಸೋಜ,ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಸುರೇಶ್ ಕುಂದರ್, ಶಿಕ್ಷಣ ಇಲಾಖೆಯ ಇಸಿಓ ಅನ್ನಪೂರ್ಣೇಶ್ವರಿ, ಕಾರ್ಕಡ ಕ್ಲಸ್ಟರ್ ಮಾಲತಿ, ಹಂಗಾರಕಟ್ಟೆ ಕ್ಲಸ್ಟರ್ ಮಾಲಿನಿ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್.,ತಾಲೂಕು ಅಧ್ಯಕ್ಷ ಸಾಧು ಸೇರಿಗಾರ್, ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಸುಲೇಮಾನ್ ಸಾಹೇಬ್ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಗೀತಾ ಪರಿಚಯಿಸಿದರು. ಶೈಲಜಾ ಸನ್ಮಾನ ಪತ್ರ ವಾಚಿಸಿದರು. ಸಂಗೀತಾ ಕೋಟ್ಯಾನ್ ಸ್ವಾಗತಿಸಿ, ಪ್ರಭಾರ ಮುಖ್ಯ ಶಿಕ್ಷಕ ಗಣೇಶ್ ಆಚಾರ್ ನಿರೂಪಿಸಿ, ವಂದಿಸಿದರು.

















