ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಈ ಜೀವಜಗತ್ತಿಗೆ ಚೈತನ್ಯ ತುಂಬುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯವು ಸಮುದಾಯದ ಸಂವೇದನೆಯನ್ನು ಅರ್ಥ ಮಾಡಿಕೊಂಡು ಸ್ಪಂದಿಸುತ್ತಾ ಬಂದಿದೆ ಎಂದು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಡೀನ್ ಆಗಿರುವ ವಿಕ್ರಮ ವಿಸಾಜಿ ಹೇಳಿದರು.
ಅವರು ಗುರುವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಯ್ಕೆದಾರರ ಅನಿಸಿಕೆ ನೆಲೆಯಲ್ಲಿ ಮಾತನಾಡಿದರು.
ಸಾಹಿತ್ಯವು ಸಾಮಾಜಿಕ ಮತ್ತು ಸಾಂಸ್ಕೃತಿಕ ಜನಜೀವನ, ಸ್ಥಿತಿ -ಗತಿ, ನಿಸರ್ಗ, ಜೀವನವನ್ನು ಕುರಿತು ಆಳವಾಗಿ ಸಂಯಮದಿಂದ ಗಮನಿಸುತ್ತದೆ. ಸಾಹಿತ್ಯವು ವ್ಯವಸ್ಥೆಯ ಆಂತರ್ಯವನ್ನು ಅರ್ಥ ಮಾಡಿಕೊಳ್ಳುತ್ತದೆ. ಅಂತಹ ಸೃಜನಾತ್ಮಕ ಅರ್ಥೈಸುವಿಕೆಯನ್ನು ಶ್ರೀಧರ ಬಳಗಾರ ಅವರ ‘ಮಾರ ಮಿಂದನು’ ಕಥಾ ಸಂಕಲನದ ಕಥಾವಸ್ತುವಿನಲ್ಲಿ ಕಾಣಬಹುದು.
ಕಥಾಸಂಕಲನದಲ್ಲಿರುವ ಹಲವು ಕಥೆಗಳು ಈ ಸಾಮಾಜಿಕ ಬದುಕಿನ ಸ್ಥಿತ್ಯಂತರಗಳನ್ನು ಬಹಳ ಪ್ರಬುದ್ಧವಾಗಿ ಮನಸ್ಸಿಗೆ ತಟ್ಟುತ್ತದೆ. ಕಥೆಯ ಸೃಷ್ಟಿಯಲ್ಲಿ ಅಂತರಂಗವು ಸಮುದಾಯಕ್ಕೆ ಮತ್ತು ಅದರ ಬದಲಾವಣೆಗೆ ತೆರೆದುಕೊಳ್ಳುವ ಪರಿ ನಿಜಕ್ಕೂ ಬರಹಗಾರನ ಸಂವೇದನೆ ಮತ್ತು ಅಂತರ್ಯದ ಕಾಳಜಿ ಮತ್ತು ಸ್ಪಂದನೆಯನ್ನು ಹೇಳುತ್ತದೆ ಎಂದು ಹೇಳಿದರು.
ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪಡೆದ ‘ಮಾರ ಮಿಂದನು’ ಕಥಾ ಸಂಕಲನದ ಕರ್ತೃ ಬರಹಗಾರ ಶ್ರೀಧರ ಬಳಗಾರ ಮಾತನಾಡಿ, ಸ್ವಪ್ನ ಶಿಲ್ಪಿ ಹೆಸರೆ ಹೇಳುವಂತೆ ಕೆಲವರು ಕಂಡು ಕನಸನ್ನು ಶಿಲ್ಪವಾಗಿಸುತ್ತಾರೆ. ಅಂತಹವರಲ್ಲಿ ಡಾ. ಹೆಚ್. ಶಾಂತಾರಾಮ್ ಒಬ್ಬರು. ಅವರು ಹೆಸರಿನಲ್ಲಿ ಕೊಡಮಾಡುವ ಈ ಪ್ರಶಸ್ತಿ ಕೃತಿ ಬಯಸುವ ಆಶಯಕ್ಕೆ ಸಂದ ಗೌರವಾಗಿದೆ ಎಂದು ಹೇಳಿದರು.
ಪ್ರಶಸ್ತಿಯು ಈ ಕೃತಿ ಕೇಳುವಂತಹ ಇವತ್ತಿನ ಬಿಕ್ಕಟ್ಟಿನ ಪರಿಸ್ಥಿತಿ, ರಾಜಕೀಯ ಸವಾಲುಗಳು, ಆಧುನಿಕ ಸವಾಲುಗಳ ತಲ್ಲಣಗಳ ಘನಸ್ಪಂದನೆಯಾಗಿದೆ. ಸಾಹಿತ್ಯ ವಲಯದಲ್ಲಿ ಕುಂದಾಪುರ ದೊಡ್ಡ ಹೆಸರು. ಇಲ್ಲಿ ಸಾಹಿತ್ಯದ ಅನನ್ಯ ಪರಂಪರೆ ಇದೆ. ಅದಕ್ಕೆ ಪೂರಕವಾಗಿ ಈ ಸಂಸ್ಥೆ ಸಾಹಿತ್ಯದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದಿದೆ. ಉಡುಪಿ ಜಿಲ್ಲೆ ಶಿಕ್ಷಣ ಮತ್ತು ಸಾಹಿತ್ಯ ಇವೆರಡನ್ನೂ ತನ್ನೊಳಗೆ ಇರಿಸಿಕೊಂಡು ಬೆಳೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷ ಕೆ. ಶಾಂತರಾಮ್ ಪ್ರಭು ಯುವ ಮನಸ್ಸುಗಳು ಸಹ ಸಾಹಿತ್ಯ ಕೃಷಿ ಮಾಡಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ದೇವದಾಸ ಕಾಮತ್ , ಆಡಳಿತ ಮಂಡಳಿಯ ಕಾರ್ಯದರ್ಶಿ ಯು.ಎಸ್.ಶೆಣೈ, ಸಮಿತಿಯ ಸದಸ್ಯರಾದ ಜಾನಕಿ ಬ್ರಹ್ಮಾವರ ಮತ್ತು ವಸಂತ ಬನ್ನಾಡಿ ಉಪಸ್ಥಿತರಿದ್ದರು.
ಡಾ. ಹೆಚ್. ಶಾತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿಯ ಸಂಚಾಲಕರಾದ ಡಾ. ರೇಖಾ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರುಗಳಾದ ಸುಮಲತಾ ಸುರೇಶ್ ಮತ್ತು ಅರ್ಚನಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಮಂಜುನಾಥ ಕಾರ್ಯಕ್ರಮ ನಿರೂಪಿಸಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರೋಜ ಎಮ್. ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸತ್ಯನಾರಾಯಣ ವಂದಿಸಿದರು.
















