ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಜು.07: ಅಂಗಾಂಗ ದಾನವು ಯುವಜನರಿಗೆ ಮಾತ್ರ ಸೀಮಿತ ಎಂಬುದು ಸಮಾಜದಲ್ಲಿರುವ ಸಾಮಾನ್ಯ ಕಲ್ಪನೆ. ಆದರೆ ಕರಾವಳಿ ಕರ್ನಾಟಕದ 76 ವರ್ಷದ ಮಹಿಳೆಯೊಬ್ಬರು ಆ ನಂಬಿಕೆಯನ್ನು ಸುಳ್ಳೆಂದು ಸಾಬೀತುಪಡಿಸಿ, ಜೀವ ಉಳಿಸಲು ವಯಸ್ಸು ಎಂದಿಗೂ ಅಡ್ಡಿಯಲ್ಲ ಎಂಬ ಸ್ಪೂರ್ತಿದಾಯಕ ಸಂದೇಶವನ್ನು ಸಾರಿದ್ದಾರೆ.
ಗಂಗೊಳ್ಳಿಯ ನಿವಾಸಿಯಾಗಿದ್ದ 76 ವರ್ಷದ ಜೆನ್ನಿ ಡಿ’ಸೋಜಾ ಎಂಬುವವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾದ ಬಳಿಕ, ಅವರ ಕುಟುಂಬವು ಅತ್ಯಂತ ಮಾನವೀಯ ಹಾಗೂ ಮಾದರಿಯಾದ ನಿರ್ಧಾರ ಕೈಗೊಂಡು ಅವರ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿತು.
ಹಠಾತ್ ತಲೆಸುತ್ತು ಕಾಣಿಸಿಕೊಂಡು ಕೆಲವೇ ಗಂಟೆಗಳಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ಅವರನ್ನು ತುರ್ತಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆಗಳಲ್ಲಿ ಅವರಿಗೆ ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆಗಿರುವುದು ದೃಢಪಟ್ಟಿತು. ವೈದ್ಯರ ತಂಡವು ಅವರನ್ನು ಉಳಿಸಲು ಎಲ್ಲ ರೀತಿಯ ಚಿಕಿತ್ಸಾ ಪ್ರಯತ್ನಗಳನ್ನು ನಡೆಸಿದರೂ ಫಲಕಾರಿಯಾಗಲಿಲ್ಲ. ನಿಗದಿತ ವೈದ್ಯಕೀಯ ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್ಗಳಂತೆ ನಡೆಸಲಾದ ಎಲ್ಲ ಪರೀಕ್ಷೆಗಳ ಬಳಿಕ, ಅವರನ್ನು ಮೆದುಳು ನಿಷ್ಕ್ರಿಯಗೊಂಡ (Brain Dead) ರೋಗಿ ಎಂದು ಅಧಿಕೃತವಾಗಿ ಪ್ರಮಾಣೀಕರಿಸಲಾಯಿತು.
ತಮ್ಮ ಆತ್ಮೀಯರನ್ನು ಕಳೆದುಕೊಂಡ ದುಃಖದ ನಡುವೆಯೂ, ಜೆನ್ನಿ ಡಿ’ಸೋಜಾ ಅವರ ಕುಟುಂಬವು ಅತ್ಯಂತ ಮಾನವೀಯ ಮತ್ತು ಸ್ಪೂರ್ತಿದಾಯಕ ನಿರ್ಧಾರ ಕೈಗೊಂಡಿತು. ವೈದ್ಯರ ಸಲಹೆಯ ಮೇರೆಗೆ ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದ ಕುಟುಂಬವು, ಜೀವ ಉಳಿಸಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸಿತು. ಈ ಮಹತ್ತರ ನಿರ್ಧಾರದ ಫಲವಾಗಿ, ಅವರ ಯಕೃತ್ತು (ಲಿವರ್)ಅನ್ನು ಯಕೃತ್ತಿನ ವೈಫಲ್ಯದಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಹೊಸ ಬದುಕಿನ ಆಶಾಕಿರಣವಾಯಿತು. ಅವರ ನೇತ್ರಗಳು ದೃಷ್ಟಿಹೀನರಿಗೆ ಬೆಳಕನ್ನು ನೀಡಲಿದ್ದು, ಚರ್ಮವು ಸುಟ್ಟ ಗಾಯಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ನೆರವಾಗಲಿದೆ.
ಈ ಘಟನೆಯು ಅಂಗಾಂಗ ದಾನದ ಕುರಿತು ಸಮಾಜದಲ್ಲಿರುವ ಹಲವು ತಪ್ಪು ಕಲ್ಪನೆಗಳನ್ನು ದೂರ ಮಾಡುವಂತಿದೆ. ಅಂಗಾಂಗ ದಾನ ಮಾಡಲು ವಯಸ್ಸು ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದೆ. ಒಬ್ಬ ವ್ಯಕ್ತಿಯು ಎಷ್ಟು ವರ್ಷ ಬದುಕಿದ್ದಾರೆ ಎಂಬುದಕ್ಕಿಂತ, ತಮ್ಮ ಅಂತಿಮ ಕ್ಷಣದಲ್ಲೂ ಮತ್ತೊಬ್ಬರ ಬದುಕಿಗೆ ಆಶಾಕಿರಣವಾಗುವ ಮನಸ್ಸು ಹೊಂದಿರುವುದೇ ಹೆಚ್ಚು ಮಹತ್ವದ್ದಾಗಿದೆ. ಈ ಅಂಗಾಂಗ ದಾನ ಪ್ರಕ್ರಿಯೆಯು ಕರ್ನಾಟಕ ಸರ್ಕಾರದ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಜೀವಸಾರ್ಥಕತೆಯ ಸಹಯೋಗದೊಂದಿಗೆ ಯಶಸ್ವಿಯಾಗಿ ನೆರವೇರಿತು.
ತಮ್ಮ ಅಪಾರ ದುಃಖದ ನಡುವೆಯೂ ಅಂಗಾಂಗ ದಾನಕ್ಕೆ ಸಮ್ಮತಿ ನೀಡಿ ಮಾನವೀಯತೆಯ ಅತ್ಯುನ್ನತ ಉದಾಹರಣೆಯನ್ನು ನೀಡಿದ ಅವರ ಕುಟುಂಬಕ್ಕೆ ಆಸ್ಪತ್ರೆಯು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ. ಅಲ್ಲದೆ, ಈ ಅಂಗಾಂಗ ದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಲು ಶ್ರಮಿಸಿದ ವೈದ್ಯಕೀಯ ತಂಡ, ಅಂಗಾಂಗ ಕಸಿ ಸಂಯೋಜಕರು ಹಾಗೂ ಸಂಬಂಧಿತ ಸಿಬ್ಬಂದಿಯ ಸೇವೆಯನ್ನು ಆಸ್ಪತ್ರೆಯು ಪ್ರಶಂಸಿಸಿದೆ.
“ನಾವು ಸಾಮಾನ್ಯವಾಗಿ ಅಂಗಾಂಗ ದಾನವನ್ನು ಯುವಜನರಿಗೆ ಮೀಸಲಾದದ್ದು ಎಂದು ಭಾವಿಸುತ್ತೇವೆ. ಎಪ್ಪತ್ತಾರು ವರ್ಷದ ಪ್ರೀತಿಪಾತ್ರರನ್ನು ಹೊಂದಿರುವ ಈ ಕುಟುಂಬವು ನಮಗೆ ಬೇರೆಯದೇ ಪಾಠ ಕಲಿಸಿದೆ. ತಮ್ಮ ಜೀವನದ ಅತ್ಯಂತ ಕರಾಳ ಸಮಯದಲ್ಲಿ, ಅವರು ಇತರರಿಗೆ ಜೀವ ನೀಡಲು ಆಯ್ಕೆ ಮಾಡಿಕೊಂಡರು. ಕರುಣೆ ಅಥವಾ ದಾನಕ್ಕೆ ವಯಸ್ಸು ಅಡ್ಡಿಯಲ್ಲ. ಅವರ ಸ್ಮರಣೆಯು ಇನ್ನೂ ನೂರು ಕುಟುಂಬಗಳು ಹೌದು ಎಂದು ಹೇಳಲು ಕಾರಣವಾಗಲಿ” ಎಂದು ಹೇಳಿದರು. – ಡಾ. ಸುಧಾಕರ್ ಕಂಟಿಪುಡಿ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾ ಅಧಿಕಾರಿ
















