ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಡಿ ಕನ್ಯಾಣ ಮಹಾಸತೀಶ್ವರೀ ಮಾಸ್ತಿ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ದೇವಳದ ಹೆಬ್ಬಾಗಿಲು ಮತ್ತು ರಾಜಗೋಪುರ ಕಟ್ಟಡಗಳ ಶಿಲಾನ್ಯಾಸ ಕಾರ್ಯಕ್ರಮವು ಮಂಗಳವಾರ ಸಂಪನ್ನಗೊಂಡಿತು.
ಶಿಲಾನ್ಯಾಸದ ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ಶ್ರೀಧರ ಪುರಾಣಿಕ್ ಅವರ ನೇತೃತ್ವದಲ್ಲಿ ಜರುಗಿದವು.
ಈ ಸಂದರ್ಭದಲ್ಲಿ ಮಹಾಸತೀಶ್ವರೀ ಮಾಸ್ತಿ ಅಮ್ಮನವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಡಳಿತ ಸಮಿತಿಯ ಅಧ್ಯಕ್ಷರಾದ ಜಯಂತ್ ಅಮೀನ್, ಉದ್ಯಮಿಗಳಾದ ಶಿವ.ಎಸ್.ಕರ್ಕೇರ, ನರಸಿಂಹ ಪೂಜಾರಿ ಸಾಲಿಗ್ರಾಮ, ದೇವಳದ ಅರ್ಚಕರು ಸೇರಿದಂತೆ ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕೈಜೋಡಿಸಲು ಆಡಳಿತ ಮಂಡಳಿ ಕರೆ
ದೇಗುಲದ ಅಭಿವೃದ್ಧಿಗೆ 2014ರಲ್ಲಿ ನಾಡೋಜ ಜಿ. ಶಂಕರ್ ಹಾಗೂ ಆನಂದ ಸಿ. ಕುಂದರ್ ಅವರ ಮಾರ್ಗದರ್ಶನ ಮತ್ತು ಭಕ್ತಾಭಿಮಾನಿಗಳ ಸಹಕಾರದೊಂದಿಗೆ ನೂತನ ಗರ್ಭಗುಡಿ ಸಂರಚನೆಗೊಂಡು ಪುನರ್ ಪ್ರತಿಷ್ಠಾ ಮಹೋತ್ಸವ ಅದ್ದೂರಿಯಾಗಿ ಜರುಗಿದೆ. ಇದೀಗ ದೇವಳದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಸರಿ ಸುಮಾರು 2 ಕೋಟಿಗೂ ಮಿಕ್ಕಿದ ವೆಚ್ಚದಲ್ಲಿ ಅನ್ನಛತ್ರ, ಸಭಾಭವನ, ಹೆಬ್ಬಾಗಿಲು, ರಾಜಗೋಪುರ ಮತ್ತು ದೇವಳದ ಸುತ್ತಲೂ ಮೇಲ್ಚಾವಣಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು 2027ರ ಜನವರಿ 14ರ ಮಕರ ಸಂಕ್ರಮಣದ ಶುಭದಿನದಂದು ಬ್ರಹ್ಮಕಲಶೋತ್ಸವ ಆರಂಭವಾಗಿ ಜ. 21ರಂದು ಸಮಾಪ್ತವಾಗಲಿದೆ.
ದೇಗುಲದ ಈ ಜೀರ್ಣೋದ್ಧಾರ ಕಾರ್ಯಕ್ಕೆ ಭಗವದ್ಭಕ್ತರು ಕೈಜೋಡಿಸಲು ದೇಗುಲದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
















