ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮೃದ್ಧ ಬೈಂದೂರು ಪರಿಕಲ್ಪನೆಯ ಅರುಣಾಚಲಂ ಕಾಲುಸಂಕ ಯೋಜನೆಯಲ್ಲಿ ಡಾ. ಆರ್. ಅರುಣಾಚಲಂ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಸಂಸ್ಥೆಯ ಸಹಯೋಗದೊಂದಿಗೆ ಬೈಂದೂರು ಕ್ಷೇತ್ರದ ಶಂಕರನಾರಾಯಣ ಗ್ರಾಮದ ಕುಪ್ಪಾರು ಬಟ್ಟಿಹಕ್ಲು, ಜಡ್ಕಲ್ ಗ್ರಾಮದ ಬಸ್ರಿಬೇರು ಹಾಗೂ ಹೊಸಂಗಡಿ ಗ್ರಾಮದ ಅಯ್ಯಪ್ಪನಜೆಡ್ಡು ಕಕ್ಕನಪಾಲು ಇಲ್ಲಿ ನೂತನ ಕಾಲುಸಂಕದ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಡಾ. ಆರ್ ಅರುಣಾಚಲಂ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು, ಇದರ ಪ್ರವರ್ತಕರಾದ ಕ್ಯಾಪ್ಟನ್ ರಮೇಶ್ ಅರುಣಾಚಲಂ ಅವರ ಜೊತೆಗೂಡಿ ನೆರವೇರಿಸಿದರು.

ಶಂಕರನಾರಾಯಣ ಕುಪ್ಪಾರು ಕಾಲುಸಂಕ:
ಶಂಕರನಾರಾಯಣ ಗ್ರಾಮದ ಕುಪ್ಪಾರು ಬಟ್ಟಿ ಹಕ್ಲುವಿನಲ್ಲಿ ಡಾ. ಆರ್ ಅರುಣಾಚಲಂ ಸಂಸ್ಥೆಯ ಸಹಯೋಗದೊಂದಿಗೆ ನಿರ್ಮಿಸಿದ ಅರುಣಾಚಲಂ ಕಾಲುಸಂಕವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಅರುಣಾಚಲಂ ಅವರ ಕುಟುಂಬವು ಬೈಂದೂರಿನ ಜನತೆಯ ಮೇಲಿನ ಪ್ರೀತಿಯಿಂದ ತಮ್ಮ ಸ್ವಂತ ದುಡಿಮೆಯಿಂದ ನಿರ್ಮಿಸಿದ ಈ ಕಾಲುಸಂಕಕ್ಕೆ ಬೆಲೆ ಕಟ್ಟಲು ಅಸಾಧ್ಯ, ಬೈಂದೂರಿನ ಜನತೆ ನಿಮ್ಮನ್ನು ಈ ಸಮಾಜಮುಖಿ ಕಾರ್ಯಕ್ಕೆ ಸದಾ ಸ್ಮರಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಶಂಕರನಾರಾಯಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಪ್ಪಾರು ಶ್ರೀ ಸುಬ್ಬನಾಯಕ್ ಅವರ ಮನೆಯ ಹತ್ತಿರ ಲೋಕೋಪಯೋಗಿ ಇಲಾಖೆಯಿಂದ ₹8 ಲಕ್ಷ ಅನುದಾನದಡಿ ನಿರ್ಮಾಣಗೊಂಡ ಕಾಲುಸಂಕವನ್ನು ಶಾಸಕರು ಉದ್ಘಾಟಿಸಿದರು.
ಜೊತೆಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಮುಖರಾದ ರವಿ ಕುಲಾಲ್, ಸುಧಾಕರ್ ಕುಲಾಲ್, ಪಾಂಡುರಂಗ ನಾಯ್ಕ್, ಲತಾ ದೇವಾಡಿಗ,ವತ್ಸಲಾ ಶೆಟ್ಟಿ,ಡಾ. ಸಚ್ಚಿದಾನಂದ ವೈದ್ಯ ಭಾಗವಹಿಸಿದ್ದರು.
ಹೊಸಂಗಡಿ ಗ್ರಾಮದ ಅಯ್ಯಪ್ಪನಜಡ್ಡು ಕಕ್ಕನಪಾಲು ಕಾಲು ಸಂಕ ಉದ್ಘಾಟನೆ:
ಹೊಸಂಗಡಿ ಮತ್ತು ಸಿದ್ದಾಪುರ ಗ್ರಾಮವನ್ನು ಸಂಪರ್ಕಿಸುವ ಅಯ್ಯಪ್ಪನಜಡ್ಡು ಕಾಲುಸಂಕ ನಿರ್ಮಾಣಕ್ಕೆ ಕಳೆದ ಕೆಲವು ದಶಕಗಳಿಂದ ಬೇಡಿಕೆಯಿದ್ದು, ಇಂದು ಅರುಣಾಚಲಂ ಸಂಸ್ಥೆಯ ಮುಖಾಂತರ ಇಲ್ಲಿ ನೂತನವಾದ ಕಾಲುಸಂಕ ನಿರ್ಮಿಸುವುದರ ಮೂಲಕ ದಶಕಗಳ ಕನಸು ನನಸಾಯಿತು ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು. ಉದ್ಘಾಟನೆಯನ್ನು ಪೂರೈಸಿ ಮಾತನಾಡಿದ ಅರುಣಾಚಲಂ ಸಂಸ್ಥೆಯ ಪ್ರವರ್ತಕರಾದ ಕ್ಯಾಪ್ಟನ್ ರಮೇಶ್ ಅರುಣಾಚಲಂ ಅವರು ಶಾಸಕರ ನಿಸ್ವಾರ್ಥ ಸೇವೆ ಮತ್ತು ಬೈಂದೂರಿನ ಜನತೆ ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ಇಂದು ಈ ಕಾಲುಸಂಕವನ್ನು ನಿರ್ಮಿಸಲು ಪ್ರೇರಣೆಯಾಯಿತು ಎಂದು ಸಂತಸಪಟ್ಟರು.
ಈ ಸಂದರ್ಭದಲ್ಲಿ ಪ್ರಮುಖರಾದ ಪ್ರದೀಪ್ ಹೆಗ್ಡೆ, ಶಾಂತಿ ನಾಯ್ಕ್, ಶಾರದಾ ಗೊಲ್ಲ, ಭೋಜರಾಜ್ ಶೆಟ್ಟಿ, ಸಂತೋಷ್ ಪೂಜಾರಿ, ರವಿ ಶೆಟ್ಟಿ, ಕೃಷ್ಣ ಪೂಜಾರಿ, ಸುರೇಶ ಹೆಬ್ಬಾರ್ ಭಾಗವಹಿಸಿದ್ದರು.
ಜಡ್ಕಲ್ ಗ್ರಾಮದ ಬಸ್ರಿಬೇರುವಿನಲ್ಲಿ ಕಾಲು ಸಂಕ ಉದ್ಘಾಟನೆ:
ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಜಡ್ಕಲ್ ಗ್ರಾಮದ ಬಸ್ರಿಬೇರುವಿನಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ನೂತನವಾಗಿ ನಿರ್ಮಿಸಿದ ಅರುಣಾಚಲಂ ಕಾಲುಸಂಕವನ್ನು ಉದ್ಘಾಟಿಸಿದರು. ಶಾಲಾ ಮಕ್ಕಳು, ಕೃಷಿಕರು, ಹಿರಿಯ ನಾಗರಿಕರು ಹಲವಾರು ವರ್ಷಗಳಿಂದ ತೊರೆಗಳನ್ನು ದಾಟಲು ಕಷ್ಟ ಪಡುತ್ತಿದ್ದು, ಇಂದು ಅವರ ಸಂತಸದಲ್ಲಿ ನಾವು ಭಾಗಿಯಾಗಿರುವುದು ನಿಜಕ್ಕೂ ನಮ್ಮ ಸೌಭಾಗ್ಯ ಎಂದು ಚತುರ್ ರಮೇಶ್ ಅರುಣಾಚಲಂ ಹರ್ಷಪಟ್ಟರು.
ಉದ್ಘಾಟನೆಯ ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ. ಅತುಲ್ ಕುಮಾರ್ ಶೆಟ್ಟಿ, ಬಾಲಚಂದ್ರ ಭಟ್, ಚಂದ್ರಶೇಖರ್ ಶೆಟ್ಟಿ ಚಿತ್ತೂರ್, ಗಣೇಶ್ ಶೆಟ್ಟಿ ಜಡ್ಕಲ್, ಭಾರತಿ ಶೆಟ್ಟಿ, ತಂಗಪ್ಪಣ್ಣ, ನಕ್ಷತ್ರ ಭೋವಿ,ಲಕ್ಷ್ಮಣ್ ಶೆಟ್ಟಿ, ನಾರಾಯಣ ಶೆಟ್ಟಿ, ನಾಗೇಶ್ ನಾಯ್ಕ್, ವಿದ್ಯಾವತಿ ಭಾಗವಹಿಸಿದ್ದರು.
ಒಟ್ಟು ಬೈಂದೂರು ಕ್ಷೇತ್ರದ 4 ಕಡೆಗಳಲ್ಲಿ ನೂತನ ಕಾಲುಸಂಕದ ಉದ್ಘಾಟನೆಯು ನಡೆದ್ದಿದು ಮುಂದಿನ ದಿನಗಳಲ್ಲಿ 50 ಕಾಲುಸಂಕ ಪೂರೈಸುವ ಗುರಿ ಇದೆ ಎಂದು ಶಾಸಕರು ಮಾಧ್ಯಮ ಮಿತ್ರರಿಗೆ ತಿಳಿಸಿದರು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಗಣ್ಯರಾದ ಅರುಣಾಚಲಂ ಸಂಸ್ಥೆಯ ಸಂತೋಷ್ ಗೌಡ, ಶಶಿಕಾಂತ್,ಅನುದೀಪ್ ಹೆಗ್ಡೆ ಪ್ರವೀಣ್ ಶೆಟ್ಟಿ ಕೊಡ್ಲಾಡಿ, ವಿದ್ಯಾಧರ್ ಶೆಟ್ಟಿ, ಬಾಲಚಂದ್ರ ಭಟ್, ವೇಣುಗೋಪಾಲ್ ಶೆಟ್ಟಿ ಆಜ್ರಿ,ಪ್ರಾಣೇಶ್ ಯಡಿಯಾಳ್, ಗಿರೀಶ್ ಭೋವಿ ಹಾಜರಿದ್ದರು.
















