ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿ ಬೈಂದೂರು ರೈತ ಸಂಘ ನಡೆಸುತ್ತಿರುವ ಪ್ರತಿಭಟನೆ ಮುನ್ನೂರು ದಿನ ಪೂರೈಸಿದೆ.ಇದುವರಗೆ ನ್ಯಾಯ ದೊರೆಯದ ಹಿನ್ನಲೆಯಲ್ಲಿ ರೈತರು ಅಣಕು ಶವಯಾತ್ರೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬೈಂದೂರು ಪಟ್ಟಣ ಪಂಚಾಯತ್ ಎದುರು ಅಣಕು ಶವ ಇಟ್ಟು ಮೆರವಣಿಗೆ ಮೂಲಕ ತಾಲೂಕು ಆಡಳಿತ ಕಛೇರಿ ತರಲಾಯಿತು.

ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ ಶೆಟ್ಡಿ ಮಾತನಾಡಿ ಕಳೆದ ಮುನ್ನೂರು ದಿನಗಳಿಂದ ರೈತರು ಬದುಕುಗಾಗಿ ಊರಿನ ಕಾಳಜಿಗಾಗಿ ಕೆಲಸಕಾರ್ಯ ಬಿಟ್ಟು ಧರಣಿ ನಡೆಸುತ್ತಿದ್ದಾರೆ. ಸರಕಾರದ ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಸಚಿವರು ಮನಸ್ಸು ಮಾಡಿದರೆ ಶೀಘ್ರ ನ್ಯಾಯ ನೀಡಬಹುದು ಆದರೆ ಬೈಂದೂರಿನಲ್ಲಿ ಜನಪ್ರತಿನಿಧಿಗಳು ರೈತರ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದಾರೆ.
ರೈತರ ಹೋರಾಟ ನ್ಯಾಯಯುತವಾಗಿದೆ ಅ.3ರಿಂದ ಸಾವಿರಾರು ರೈತರು ಅಮರಣಾಂತ ಉಪವಾಸ ಸತ್ಯಾಗ್ರಹ ಕೈ ಗೊಳ್ಳುತ್ತೇವೆ ಎಂದರು ಈ ಸಂಧರ್ಭದಲ್ಲಿ ಯುವ ರೈತರ ಘಟಕದ ಅಧ್ಯಕ್ಷರಾಗಿ ಆಕಾಶ ಪೂಜಾರಿ ಎಳಜಿತ್ ಅವರನ್ನು ನೇಮಿಸಲಾಯಿತು.
ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರೈತರ ಹೆಸರಿನಲ್ಲಿ ಗೆದ್ದವರು ರೈತರ ಪರ ಧ್ವನಿ ಎತ್ತುವುದಿಲ್ಲ.ಬೈಂದೂರಿನ ಇತಿಹಾಸದಲ್ಲಿ ಇದು ಕರಾಳವಾಗಿದೆ ಸಂಬಂಧಪಟ್ಟ ಜನಪ್ರತಿನಿಧಿಗಳು ರೈತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.
ರೈತ ಮುಖಂಡ ಅರುಣ್ ಕುಮಾರ ಶಿರೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೀರಭದ್ರ ಗಾಣಿಗ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ ಪೂಜಾರಿ, ಪದ್ಮಾಕ್ಷ ದೇವಪ್ಪ, ಮರಾಠೀ ಸುಭಾಶ್ ಗಂಗಾನಾಡು, ವಾಸು ಮರಾಠಿ ಹೊಸೂರು, ಕ್ರಷ್ಣ ದೇವಾಡಿಗ, ಕೇಶವ ಪೂಜಾರಿ ಮುಂತಾದವರು ಹಾಜರಿದ್ದರು.
















