ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಸಾಲಿಗ್ರಾಮ ಇದರ 16ನೇಯ ವಾರ್ಷಿಕ ಸಾಮಾನ್ಯ ಸಭೆಯು ಇತ್ತೀಚೆಗೆ ಸಾಲಿಗ್ರಾಮದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಸಂಘದ ಅಧ್ಯಕ್ಷ ಆನಂದ ಸಿ. ಕುಂದರ್ ಅಧ್ಯಕ್ಷತೆಯಲ್ಲಿ ಜರುಗಿತು.
ಗತ ವರ್ಷದಲ್ಲಿ ಸದಸ್ಯರಿಂದ ರೂ. 18.೦೦ ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿ ರೂ. 14.೦೦ ಕೋಟಿಗೂ ಅಧಿಕ ಸಾಲ ವಿತರಿಸಿದೆ. ಸದಸ್ಯರ ಮನ ಒಲಿಸೂವುದರ ಮೂಲಕ ಶೇ. 99.75 ರ ವಸೂಲಿ ಸಾಧಿಸಿದೆ. 2025-26ನೇ ಶೈಕ್ಷಣಿಕ ವರ್ಷದಲ್ಲಿ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶಾಲಾವಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಸದಸ್ಯರ ಮಕ್ಕಳನ್ನು ಪುರಸ್ಕರಿಸಿ ಅಭಿನಂದಿಸಲಾಯಿತು.
ಪಿ.ಯು.ಸಿ. ಅಂತಿಮ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ಹಾಗೂ ಜಿಲ್ಲೆಗೆ 3ನೇ ರಾಂಕ್ ಗಳಿಸಿದ ಸಂಘದ ಸದಸ್ಯರೋರ್ವರ ಪುತ್ರಿ ವಿದ್ಯಾರ್ಥಿನಿ ಸಾತ್ವಿಕ ಶ್ರೀಯಾನ್ ಅವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಇತ್ತೀಚಿಗೆ ನಿಧನರಾದ ಸಂಘದ ಸದಸ್ಯರೋರ್ವರು ಅವರ ಉತ್ತರಾಧಿಕಾರಿಗೆ ಸಂಘದಿಂದ ಲಭ್ಯವಿರುವ ರೂ.10,000/- ಮರಣನಿಧಿ ಮೊತ್ತವನ್ನು ಹಸ್ತಾಂತರಿಸಿ ಮೃತರ ಆತ್ಮಕ್ಕೆ ಗೌರವ ಸೂಚಿಸಲಾಯಿತು. ಸಂಘದ ಕಾರ್ಯ ಕ್ಷೇತ್ರದಲ್ಲಿ ಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥ ಪ್ರಶಂಸನೀಯ ಸೇವೆ ಸಲ್ಲಿಸುತ್ತಿರುವ ಹಿರಿಯ ನಾಗರಿಕರುಗಳನ್ನು ಗೌರವಿಸಿ ಅಭಿನಂದಿಸಲಾಯಿತು.
ಕಳೆದ ಸಾಲಿನಲ್ಲಿ ಗಳಿಸಿದ ನಿವ್ವಳ ಲಾಭ ರೂ.38.80 ಲಕ್ಷವನ್ನು ಉಪವಿಧಿಯಲ್ಲಿನ ಅವಕಾಶದಂತೆ ವಿಂಗಡಿಸಿ ಸದಸ್ಯರಿಗೆ ಶೇ. 25ರ ಪಾಲು ಲಾಭವನ್ನು ನೀಡಲಾಯಿತು. ಕಳೆದ 11 ವರ್ಷಗಳಿಂದ ಶೇ. 25ರ ಗರಿಷ್ಟ ಪಾಲು ಲಾಭ ನೀಡಿದ ಪ್ರಾಥಮಿಕ ರಂಗದಲ್ಲಿ ದಾಖಲೆ ನಿರ್ಮಿಸಿದ ಬಗ್ಗೆ ಸಭೆಯಲ್ಲಿ ಉಲ್ಲೇಖಿಸಲಾಯಿತು.
ಸಂಘದ ಅಧ್ಯಕ್ಷ ಆನಂದ್ ಸಿ ಕುಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಆರಂಭದಿಂದಲೂ ಪ್ರಜ್ಞಾವಂತ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ, ದಕ್ಷ ಆಡಳಿತ ಮಂಡಳಿಯ ಮಾರ್ಗದರ್ಶನ ಮತ್ತು ನಿಷ್ಟಾವಂತ ಸಿಬಂದಿಯವರ ಪ್ರಾಮಾಣಿಕ ಸೇವೆಯಿಂದ ಲಾಭದಲ್ಲಿ ಮುನ್ನಡೆಯುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಪ್ರಸ್ತುತ ಸಾಲಿನಲ್ಲಿ ಸಂಘಕ್ಕೆ ಸುಸ್ಸಜ್ಜಿತ ಕಟ್ಟಡ ನಿರ್ಮಿಸಿ ಮುಂದಿನ ಸಾಲಿನಿಂದ ವಾರ್ಷಿಕ ಸಾಮಾನ್ಯ ಸಭೆಯನ್ನು ಸಂಘದ ಕಟ್ಟಡದಲ್ಲಿಯೇ ಜರುಗಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು. ಸಂಘದ ವಿವಿಧ ಸೇವೆಗಳ ಸದುಪಯೋಗ ಪಡೆಯುವಂತೆ ಕರೆಯಿತ್ತರು.
ಸಭೆಯಲ್ಲಿ ಸಂಘದ ಎಲ್ಲಾ ನಿರ್ದೇಶಕರುಗಳಾದ ಸಂಜೀವ ಜಿ, ಮಂಜುನಾಥ ಎಸ್.ಕೆ, ಡಾ. ಕೆ. ಕೃಷ್ಣ ಕಾಂಚನ್, ಕೆ. ಶಂಕರ ಬಂಗೇರ, ವಸಂತ ಶೆಟ್ಟಿ, ವೈ ಕೃಷ್ಣಮೂರ್ತಿ ಐತಾಳ, ಸವಿತಾ ಎಸ್. ಪೂಜಾರಿ ಶಾಂತಾ ಭಟ್ಟ, ನಾಗರತ್ನ ಬಾಯರಿ, ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಜಿ.ಎಸ್. ಸೋಮಯಾಜಿ ಗತ ವರ್ಷದ ವರದಿ ಮಂಡಿಸಿದರು. ನಿರ್ದೇಶಕಿ ಶಾಂತಾ ಭಟ್ಟ ವಂದನಾರ್ಪಣೆ ಗೈದರು.
















