ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಉಡುಪಿ ಜಿಲ್ಲಾ ಯುವ ವಿಭಾಗದ ನೂತನ ಜಿಲ್ಲಾಧ್ಯಕ್ಷರಾಗಿ ಮೀನುಗಾರರ ಸಮುದಾಯದ ಪ್ರಮುಖ ಯುವ ಮುಖಂಡರಾದ ಸುಬ್ರಹ್ಮಣ್ಯ ಮೊಗವೀರ ಅವರನ್ನು ನೇಮಕ ಮಾಡಿ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ರವಿ ಶೆಟ್ಟಿ ಬೈಂದೂರು ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಸುಬ್ರಹ್ಮಣ್ಯ ಮೊಗವೀರ ಅವರು ಮೀನುಗಾರರ ಸಮುದಾಯದಲ್ಲಿ ಅತ್ಯಂತ ಸಕ್ರಿಯವಾಗಿ ಗುರುತಿಸಿಕೊಂಡಿರುವ ಯುವ ಮುಖಂಡರಾಗಿದ್ದು, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನಲ್ಲಿ ಈಗಾಗಲೇ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅಪಾರ ಸಂಘಟನಾ ಅನುಭವ ಹೊಂದಿದ್ದಾರೆ. ಇವರ ಸುದೀರ್ಘ ಸೇವೆ ಹಾಗೂ ಸಂಘಟನಾ ಚತುರತೆಯನ್ನು ಗುರುತಿಸಿ, ಸಂಸ್ಥೆಯ ವೈಸ್ ಚೇರ್ಮನ್ ಹಾಗೂ ಮಹಿಳಾ ರಾಜ್ಯಾಧ್ಯಕ್ಷರಾದ ಪೂಜಾ ಶೆಟ್ಟಿ ಮತ್ತು ರಾಜ್ಯ ಸಮಿತಿಯ ಪ್ರಮುಖರು ಅವರ ಹೆಸರನ್ನು ಶಿಫಾರಸು ಮಾಡಿದ್ದರು.
ರಾಜ್ಯ ಸಮಿತಿಯ ಸೂಚನೆಯನ್ನು ಪರಿಗಣಿಸಿದ ರಾಜ್ಯಾಧ್ಯಕ್ಷರಾದ ಡಾ. ರವಿ ಶೆಟ್ಟಿ ಬೈಂದೂರು ಅವರು ಸುಬ್ರಹ್ಮಣ್ಯ ಮೊಗವೀರ ಅವರ ನೇಮಕಾತಿಗೆ ಅಂತಿಮ ಅನುಮೋದನೆ ನೀಡಿ ಈ ಆದೇಶ ಜಾರಿಗೊಳಿಸಿದ್ದಾರೆ.
ಸುಬ್ರಹ್ಮಣ್ಯ ಮೊಗವೀರ ಅವರ ನೇಮಕದಿಂದ ಉಡುಪಿ ಜಿಲ್ಲೆಯಲ್ಲಿ ಕಾರ್ಮಿಕ ಪರಿಷತ್ತಿನ ಯುವ ವಿಭಾಗವು ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿದ್ದು, ಜಿಲ್ಲೆಯ ಲಕ್ಷಾಂತರ ಸಣ್ಣ ಉದ್ದಿಮೆದಾರರು, ಶ್ರಮಿಕರು ಹಾಗೂ ಯುವ ಕಾರ್ಮಿಕರ ಜ್ವಲಂತ ಸಮಸ್ಯೆಗಳಿಗೆ ನ್ಯಾಯ ಒದಗಿಸಲು ಇವರ ನಾಯಕತ್ವವು ದೊಡ್ಡ ಶಕ್ತಿಯಾಗಲಿದೆ ಎಂದು ರಾಜ್ಯ ಸಮಿತಿ ವಿಶ್ವಾಸ ವ್ಯಕ್ತಪಡಿಸಿದೆ.
ನೂತನವಾಗಿ ಆಯ್ಕೆಯಾಗಿರುವ ಜಿಲ್ಲಾ ಯುವ ಅಧ್ಯಕ್ಷರಾದ ಸುಬ್ರಹ್ಮಣ್ಯ ಮೊಗವೀರ ಅವರಿಗೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಸಮಸ್ತ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಣ್ಣ ಉದ್ದಿಮೆದಾರರ ಒಕ್ಕೂಟವು ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸಿದೆ.
















