ಪೋಲಾಗುವ ನೀರನ್ನು ವ್ಯವಸ್ಥಿತವಾಗಿ ಭೂಮಿಯಲ್ಲಿ ಇಂಗಿಸಿ ವರ್ಷಪೂರ್ತಿ ನೀರು ಪಡೆಯುವ ತಂತ್ರಜ್ಞಾನ
ತೆರದ ಬಾವಿಗೆ ಮಳೆಕೊಯ್ಲು, ಕೊಳವೆ ಬಾವಿಗೆ ಜಲಮರುಪೂರಣ
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ, 2016 Apl 5th: ನೀರಿನ ಸಮಸ್ಯೆ ನೀಗಿಸಲು ಬಾವಿ, ಕೊಳವೆ ಬಾವಿಯನ್ನು ನಿರ್ಮಿಸಿದ್ದಾಯ್ತು. ಆದರೆ ಅದರಲ್ಲೂ ನೀರು ಬತ್ತುತ್ತಿದೆ! ನೀರು ಬೇಕಲ್ಲ ಇನ್ನೇನು ಮಾಡೊದು ಎಂದು ಯೋಚಿಸುತ್ತಾ ಕುಳಿತವರಿಗೊಂದು ಹೊಸತೊಂದು ಒರತೆ ಮೂಡಿದೆ. ಕಡಿಮೆ ಖರ್ಚಿನಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಕಾರ್ಯವನ್ನು ಕೈತ್ತಿಕೊಳ್ಳುವ ಮೂಲಕ ವರ್ಷಪೂರ್ತಿ ಹೇರಳ ನೀರು ಪಡೆಯಲು ತಂತ್ರಜ್ಞಾನವೊಂದು ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆಂಬಂತೆ (2016) ಅನುಷ್ಠಾನಗೊಂಡಿದೆ.
ತಾಲೂಕಿನ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಶೋಕ್ ಶೆಟ್ಟಿಗಾರ್ ಎಂಬುವವರು ತಮ್ಮ ಮನೆಯಲ್ಲಿ 620ಅಡಿ ಅಳ ಕೊರೆದಿರುವ ಬೋರ್ವೆಲ್ನ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೊಳವೆ ಬಾವಿ ಜಲಮರುಪೂರಣ (Borewell recharging) ತಂತ್ರಜ್ಞಾನದ ಮೊರೆಹೋಗಿದ್ದು, ಚಿತ್ರದುರ್ಗದ ಜಿಯೋ ರೈನ್ ವಾಟರ್ ಬೋರ್ಡ್ನ ಅಂತರ್ಜಲ ಮತ್ತು ಮಳೆನೀರು ಕೊಯ್ಲು ತಜ್ಞ ಎನ್. ಜೆ. ದೇವರಾಜ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಜಲಮರುಪೂರಣವನ್ನು ತಂತ್ರಾಂಶವನ್ನು ಕೈಗೆತ್ತಿಕೊಂಡಿದ್ದಾರೆ.
ಏನಿದು ಜಲಮರುಪೂರಣ?
ನೀರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಪೂರಕ ವ್ಯವಸ್ಥೆಯೇ ಜಲಮರುಪೂರಣ. ದಿನಗಳೆದಂತೆ ತಗ್ಗುತ್ತಿರುವ ಅಂತರ್ಜಲ ಮಟ್ಟದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಂತೆ ಮಾಡಲು, ಮಳೆಗಾಲದಲ್ಲಿ ಹರಿದುಹೋಗುವ ನೀರನ್ನು ವ್ಯವಸ್ಥಿತವಾಗಿ ಇಂಗುಗುಂಡಿಯ ಮೂಲಕ ಇಂಗಿಸಿ ವರ್ಷಪೂರ್ತಿ ಸಮೃದ್ಧ ನೀರು ಪಡೆಯುವ ತಂತ್ರಜ್ಞಾನವಿದು. ಕುಂದಾಪ್ರ ಡಾಟ್ ಕಾಂ ವರದಿ
ಕೊಳವೆ ಬಾವಿಗೆ ಜಲಮರುಪೂರಣ ಹೇಗೆ?
ಇಂಗುಗುಂಡಿಯ ಮೂಲಕವೇ ಕೊಳವೆ ಬಾವಿಗೆ ಜಲಮರುಪೂರಣ ಮಾಡಬೇಕಿದೆ. ಇಂಗುಗುಂಡಿಯನ್ನು ರಚಿಸಲು ಕೊಳವೆ ಬಾವಿಯ ಪೈಪ್ ಸುತ್ತ ಆಳ ಮತ್ತು ಅಗಲವಾಗಿ ಹತ್ತು ಅಡಿ ಗುಂಡಿಯನ್ನು ತೋಡಬೇಕು. ಕೊಳವೆ ಬಾವಿಯ ಪೈಪ್ಗೆ ನಾಲ್ಕು ಫೀಟ್ ವರೆಗೆ ಚಿಕ್ಕ ಚಿಕ್ಕ ರಂದ್ರ ಕೊರೆದು ಅದರ ಸುತ್ತ ಅಕ್ವಾ ಮೆಷ್, ನೈಲಾನ್ ಮೆಷ್ ಹಾಗೂ ಸ್ಯಾಂಡ್ ಫಿಲ್ಟರ್ ಬಲೆಯನ್ನು ಕಸ ಕಡ್ಡಿ, ಮರಳು ಒಳಸೇರದಂತೆ ಭದ್ರಪಡಿಸಬೇಕು. ಎರಡನೇ ಹಂತದಲ್ಲಿ ತೋಡಿರುವ ಇಂಗುಗುಂಡಿಗೆ ಮೊದಲು ೫೦ ಪ್ರತಿಶತದಷ್ಟು ದಪ್ಪ ಶಿಲೆಗಲ್ಲನ್ನು ಕ್ರಮವಾಗಿ ಜೋಡಿಸಿ ಅದರ ಮೇಲೆ 40ಎಂ.ಎಂ ಜಲಿ, 20 ಎಂಎಂ ಜಲ್ಲಿಕಲ್ಲನ್ನು ಸಮನಾಗಿ ಹಾಕಿ ಬಳಿಕ ಒಂದು ಇಂಚು ಎತ್ತರಕ್ಕೆ ಇದ್ದಿಲು ಹಾಕಬೇಕು. ಇದ್ದಿಲಿನ ಮೇಲೆ ಐಡಿಪಿಇ ಮ್ಯಾಟ್ ಹಾಕಿ ೨ ಫೀಟ್ ವರೆಗೆ ಮರಳು ಹಾಕಿದರೆ ಗುಂಡಿ ನೆಲಕ್ಕೆ ಸಮನಾಗಿ ಮುಚ್ಚಿಕೊಳ್ಳುತ್ತದೆ. ಇಂಗುಗುಂಡಿಯ ಸುತ್ತ ಒಂದು ಫೀಟ್ ಎತ್ತರಕ್ಕೆ ಪ್ಯಾರಾಫೀಟ್ ಗೋಡೆಯಲ್ಲಿ ಕಟ್ಟಿ ನೀರು ಓಳಭಾಗಕ್ಕೆ ಹರಿಯುವಷ್ಟು ಜಾಗ ಬಿಡಬೇಕು. ಇಂಗುಗುಂಡಿಯ ಸಮೀಪ ಅಥವಾ ಸ್ಥಳಾವಕಾಶ ಇರುವಲ್ಲಿ ಶುದ್ದ ನೀರು ಇಂಗುಗುಂಡಿಗೆ ಹರಿಯವಂತೆ ಮಾಡಲು ಸೋಸುಗುಂಡಿ ತೋಡಿ ಅಲ್ಲಿಂದ ನೀರು ಇಂಗುಗುಂಡಿಗೆ ಹರಿಯುವಂತೆ ಮಾಡಿದರೆ ಸೋಸಿದ ನೀರು ಇಂಗುಗುಂಡಿಯಲ್ಲಿ ಶೇಖರಣೆಗೊಳ್ಳುತ್ತದೆ. ಮಿಕ್ಕ ನೀರು ಹೊರಕ್ಕೆ ಹರಿದು ಹೋಗುತ್ತದೆ. ಕುಂದಾಪ್ರ ಡಾಟ್ ಕಾಂ ವರದಿ
ತಂತ್ರಜ್ಞಾನ ಹೊಸತಲ್ಲ. ಖರ್ಚು ಹೆಚ್ಚಿಲ್ಲ. ಜಿಲ್ಲೆಯಲ್ಲಿ ಅನುಷಾನ ವಿರಳ:
ಇಂಗುಗುಂಡಿಗಳನ್ನು ತೋಡಿ ಜಲಮರುಪೂರಣ ಮಾಡುವ ವ್ಯವಸ್ಥೆ ಹೊಸತಲ್ಲದಿದ್ದರೂ ಉಡುಪಿ ಜಿಲ್ಲೆಯಲ್ಲಿ ಇದರ ಅನುಷ್ಠಾನವಾದದ್ದು ತೀರಾ ಕಡಿಮೆ. ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಸಮರೋಪಾದಿಯಲ್ಲಿ ಜಲಮರುಪೂರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಿದೆ ಮಾತ್ರವಲ್ಲದೇ ಕರಾವಳಿ ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆಯನ್ನು ತಗ್ಗಿಸಲು ಸಿಹಿನೀರಿನ ಒರತೆಯನ್ನು ಹೆಚ್ಚಿಸುವುದೊಂದೆ ಪರಿಹಾರ. ಭೂಮಿಯಲ್ಲಿ ಮಣ್ಣಿನ ವಲಯ, ಶೀತಲ ವಲಯ ಹಾಗೂ ಟೊಳ್ಳು ವಲಯ ಎಂಬ ಮೂರು ಪದರಗಳಿರುತ್ತವೆ. ಆದರೆ ಕರಾವಳಿ ಭಾಗದಲ್ಲಿ ಟೊಳ್ಳು ವಲಯ ಇಲ್ಲದಿರುವುದರಿಂದ ಮಳೆಯಾದರೂ ನೀರಿನ ಸಮಸ್ಯೆ ಅತಿಯಾಗಿ ಕಾಡುತ್ತಿರುತ್ತದೆ. ಆದ್ದರಿಂದ ಜಲಮರುಪೂರಣ ವ್ಯವಸ್ಥೆ ಕರಾವಳಿಗರ ನೀರಿನ ಸಮಸ್ಯೆಗೆ ಪರಿಹಾರವಾಗಬಲ್ಲದು ಎನ್ನತ್ತಾರೆ ತಜ್ಞರು. ಮನೆಯವರೇ ಶ್ರಮದಾನ ಮಾಡಿ, ಇರುವ ಸಾಮಾಗ್ರಿಗಳನ್ನು ಬಳಸಿಕೊಂಡು ಮಾಡಬಹುದಾಗಿದ್ದರಿಂದ ಖರ್ಚು ಕಡಿಮೆ. ಲಾಭ ಹೆಚ್ಚು. ಕರಾವಳಿಗರು ಕೊಳವೆ ಬಾವಿಗಿಂತ ಪ್ರಾಮುಖ್ಯತೆ ನೀಡುವುದಕ್ಕಿಂತ ಬಾವಿಯನ್ನು ಉಳಿಸಿಕೊಳ್ಳುವುದು ಮೇಲು. ಮಳೆ ನೀರು ಕೊಯ್ಲು ಪದ್ಧತಿಯನ್ನು ಸುಲಭವಾಗಿ ಅಳವಡಿಸಿಕೊಂಡು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ. ಕುಂದಾಪ್ರ ಡಾಟ್ ಕಾಂ ವರದಿ.
* ನೀರು ಮನುಷ್ಯನ ಮೂಲಭೂತ ಅಗತ್ಯಗಳಲ್ಲೊಂದು. ಈವರೆಗೆ ರಾಜ್ಯದ 20,000ಕ್ಕೂ ಅಧಿಕ ಬೋರ್ವೆಲ್ಗಳಿಗೆ ಮರುಪೂರಣ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಚಿತ್ರದುರ್ಗ ಮಾಡೆಲ್ ಎಂದೇ ಪ್ರಸಿದ್ಧವಾಗಿರುವ ಸುಲಭ ತಂತ್ರಜ್ಞಾನದಿಂದ ಉತ್ತಮ ಫಲಿತಾಂಶ ದೊರೆತಿದ್ದು ವರ್ಷಪೂರ್ತಿ ಕುಡಿಯುವ ನೀರು ಪಡೆಯಬಹುದಾಗಿದೆ. ಅಂತರ್ಜಲವನ್ನು ಹೆಚ್ಚಿಸಿಕೊಳ್ಳಲು ಜಲಮರುಪೂರಣ, ಮಳೆಕೊಯ್ಲು ಸರಳ ಮಾರ್ಗವಾಗಿದ್ದು, ಸಮರೋಪಾದಿಯಲ್ಲಿ ಇದರ ಅನುಷ್ಠಾನವಾಗಬೇಕಿದೆ. – ಎನ್. ಜೆ. ದೇವರಾಜ್ ರೆಡ್ಡಿ, ಕೃಷಿ ಪಂಡಿತ್ ಪ್ರಶಸ್ತಿ ವಿಜೇತ ಮಳೆ ನೀರು ಕೊಯ್ಲು ತಜ್ಞ