ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವೃಕ್ಷ, ನದಿತಟ, ಬನ, ಗುಡ್ಡ-ಬೆಟ್ಟಗಳಲ್ಲಿ ದೈವ-ದೇವರುಗಳು ನೆಲೆಸಿರುವ ಕಾರಣ ನಮ್ಮ ಹಿಂದಿನವರು ಪ್ರಕೃತಿಯನ್ನು ದೇವರೆಂದು ನಂಬಿ ಆರಾಧಿಸುಕೊಂಡು ಬಂದರು. ಮುಂದಿನ ಪೀಳಿಗೆಗೆ ಅನುಕೂಲವಾಗಲೆಂದು ಹಾಗೂ ಪರಿಸರ ಪ್ರಜ್ಞೆ ಮೂಡಿಸುವ ಸಲುವಾಗಿ ದೈವ, ದೇವರ ಆಲಯಗಳನ್ನು ಇಂತಹ ಪರಿಸರದಲ್ಲಿ ನಿರ್ಮಾಣ ಮಾಡಿದ್ದಾರೆ. ಆದರೆ ಇಂದು ಮಾನವನ ಸ್ವಯಂಕೃತ ಅಪರಾಧಗಳಿಂದ ಪ್ರಕೃತಿ ಮುನಿದು ಕಾಲಕಾಲಕ್ಕೆ ಆಗಬೇಕಿದ್ದ ಮಳೆ-ಬೆಳೆ ಕೂಡಾ ವೈಪರಿತ್ಯಕ್ಕೆ ಮುಟ್ಟುವ ಸ್ಥಿತಿ ಬಂದೊದಗಿದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.
ಉಪ್ಪುಂದ ಜನತಾ ಕಾಲೋನಿಯ ಶ್ರೀ ಜೈನ ಬೊಬ್ಬರ್ಯ ಮತ್ತು ಪರಿವಾರ ದೈವಗಳ ದೈವಸ್ಥಾನದ ನೂತನ ಹೆಬ್ಬಾಗಿಲು ಉದ್ಘಾಟಿಸಿ ಅನಂತರ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ವೈಜ್ಞಾನಿಕವಾಗಿ ಜಗತ್ತು ಮುಂದುವರಿದಿದ್ದು, ನಾವುಗಳು ಅದನ್ನು ಅಂಗೈಯಲ್ಲಿ ನೋಡಬಹುದಾಗಿದೆ. ದುರದೃಷ್ಟವಶಾತ್ ಹಿಂದಿನ ಗುಲಾಮಗಿರಿಯ ವ್ಯಾಮೋಹ ನಮ್ಮಲ್ಲಿ ಇನ್ನೂ ಹೋಗಲಿಲ್ಲ. ಈ ಗುಂಗಿನಿಂದ ಹೊರಬಂದು ನಮ್ಮ ಕರ್ತವ್ಯ, ಸುತ್ತಮುತ್ತಲಿನವರ ಸಹಕಾರ ಹಾಗೂ ಕೃತಜ್ಞತಾಭಾವದಿಂದ ಎಲ್ಲರೊಡನೆ ಮಾನವೀಯ ಸಂಬಂಧಗಳಿಂದ ಸ್ವಾಭಾವಿಕವಾಗಿ ಬದುಕುವುದರಿಂದ ಎತ್ತರಕ್ಕೆ ಬೆಳೆಯಲು ಸಾಧ್ಯ. ನಿಜ ಅರ್ಥದಲ್ಲಿ ಇದುವೇ ಧರ್ಮ ಎಂದರು.
ಇಂದಿನ ಕಾಲಘಟ್ಟದಲ್ಲಿ ಅವಿಭಕ್ತ ಕುಟುಂಬಗಳಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸತೊಡಗಿದ್ದು, ಇದರಿಂದ ಕೌಟುಂಬಿಕ ಜೀವನ ಹಾಳಾಗಿ ಕೆಲವು ಸಂಸಾರಗಳು ಛಿದ್ರವಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಇದು ಉತ್ತಮ ಬೆಳವಣಿಗೆಯಲ್ಲ. ಇದರಿಂದ ಕುಟುಂಬದಲ್ಲಿ ಸಾಮರಸ್ಯ ನಾಶವಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯಗಳು ಸ್ವಾಭಾವಿಕ. ಹಿರಿಯರು, ಬಲ್ಲವರು ಅದನ್ನು ಹೆಚ್ಚು ಭಿನ್ನವಾಗುವುದಕ್ಕೆ ಅವಕಾಶ ಕೊಡಬಾರದು ಎಂದರು.
ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿಜೂರು ಜಯರಾಮ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಜಿಪಂ ಮಾಜಿ ಸದಸ್ಯ ಎಸ್. ಮದನ್ಕುಮಾರ್ ಧಾರ್ಮಿಕ ಸಭೆ ಉದ್ಘಾಟಿಸಿದರು. ಈ ಸಂದರ್ಭ ದೈವಸ್ಥಾನಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘದ ಅಧ್ಯಕ್ಷ ನವೀನ್ಚಂದ್ರ ಉಪ್ಪುಂದ, ಮುಂಬೈ ಉದ್ಯಮಿ ಗೋವಿಂದ ಪೂಜಾರಿ. ನಾಗರಬಲ್ಲೆ ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ರಾಮಚಂದ್ರ ಖಾರ್ವಿ, ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕುಮಾರ್ ಖಾರ್ವಿ ಬಿಎಚ್ಕೆ, ಡಾ. ವಿದ್ಯಾಧರ್ ಶೆಟ್ಟಿ ಉಪಸ್ಥಿತರಿದ್ದರು.
ದೈವಸ್ಥಾನದ ಆರಾಧನಾ ಸಮಿತಿ ಅಧ್ಯಕ್ಷ ವೆಂಕಟರಮಣ ಖಾರ್ವಿ ಸ್ವಾಗತಿಸಿ, ಈಶ್ವರ ಖಾರ್ವಿ ವಂದಿಸಿದರು. ಸುಧಾಕರ ದೇವಾಡಿಗ ನಿರೂಪಿಸಿದರು. ಬಳಿಕ ಉಡುಪಿ ಸೃಷ್ಠಿ ಕಲಾಕುಠೀರ ಇಲ್ಲಿನ ಸದಸ್ಯೆಯರಿಂದ ಡಾ. ಮಂಜರಿ ಚಂದ್ರ ನಿರ್ದೇಶನದಲ್ಲಿ ಭರತನಾಟ್ಯ, ಜಾನಪದ ನೃತ್ಯ ವೈವಿಧ್ಯ ಹಾಗೂ ನೃತ್ಯ ರೂಪಕ ಪ್ರದರ್ಶನಗೊಂಡಿತು.