ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮಾಜದಲ್ಲಿ ಅತ್ಯಂತ ತಳಮಟ್ಟದಲ್ಲಿ ಜೀವನ ನಡೆಸುತ್ತಿರುವವರನ್ನು ಮುಖ್ಯವಾಹಿನಿಯಲ್ಲಿ ಗುರುತಿಸುವಂತೆ ಮಾಡುವ ಮೂಲಕ ಸಾಮಾಜಿಕ ಪರಿವರ್ತನೆ ತರುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಮುಖ ಪಾತ್ರವಹಿಸಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಯಡ್ತರೆ ಜೆಎನ್ಆರ್ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ವಲಯದ ಯಡ್ತರೆ, ಬೈಂದೂರು, ಪಡುವರಿ, ತಗ್ಗರ್ಸೆ ಕಾರ್ಯಕ್ಷೇತ್ರದ ಪ್ರಗತಿಬಂಧು ಸ್ವ-ಸಹಾಯ ಸಂಘದ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪ್ರದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಒಕ್ಕೂಟದ ಸದಸ್ಯರು ಒಗ್ಗಟ್ಟಾಗಿ ಯಾವುದೇ ಹೆಚ್ಚಿನ ಫಲಾಪೇಕ್ಷೆ ಇಲ್ಲದೇ ಕಾರ್ಯನಿರ್ವಹಿಸಿದರೆ ಇನ್ನಷ್ಟು ಅಭಿವೃದ್ಧಿ ಕಾಣಲು ಸಾಧ್ಯವಿದೆ. ರಾಜ್ಯಾದ್ಯಂತ ಶ್ರೀಕ್ಷೇತ್ರದ ಮೂಲಕ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತಂದು ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ, ಮಹಿಳೆಯರು ಆರ್ಥಿವಾಗಿ ಸ್ವಾವಲಂಬಿ ಜೀವನ ನಡೆಸುನ ವಾತಾವರಣ ನಿರ್ಮಾಣ, ಜನಜಾಗೃತಿ ವೇದಿಕೆಯ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣದಂತಹ ಮಹತ್ಕಾರ್ಯಗಳು ನಡೆಯುತ್ತಿದ್ದು, ಹತ್ತು-ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸುತ್ತಿರುವುದು ಶ್ಲಾಘನೀಯ ಎಂದರು.
ಯಡ್ತರೆ ಗ್ರಾಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಒಕ್ಕೂಟಗಳ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಜಿಪಂ ಸದಸ್ಯರಾದ ಶಂಕರ ಪೂಜಾರಿ, ಸುರೇಶ ಬಟವಾಡಿ, ಧ,ಗ್ರಾ.ಯೋ. ಪ್ರಾದೇಶಿಕ ನಿರ್ದೇಶಕ ಮಹಾವೀರ ಆಜ್ರಿ, ಯೋಜನಾಧಿಕಾರಿ ಅಮರಪ್ರಸಾದ ಶೆಟ್ಟಿ, ಬೈಂದೂರು ಗ್ರಾಪಂ ಅಧ್ಯಕ್ಷ ಜನಾರ್ದನ ಯು., ಪಡುವರಿ ಗ್ರಾಪಂ ಅಧ್ಯಕ್ಷೆ ದೀಪಾ ಶೆಟ್ಟಿ, ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಶ್ರೀನಿವಾಸ ಮದ್ದೋಡಿ, ವಲಯ ಒಕ್ಕೂಟದ ಅಧ್ಯಕ್ಷ ಮಂಜುನಾಥ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕ ಪ್ರಕಾಶ್ ಸ್ವಾಗತಿಸಿ, ನಾಗರತ್ನ ಪಿ. ವಂದಿಸಿದರು. ತ್ರಾಸಿ ವಲಯ ಮೇಲ್ವಿಚಾರಕ ಚಂದ್ರ ಮರಾಠೆ ನಿರೂಪಿಸಿದರು. ಮಧ್ಯಾಹ್ನ ಒಕ್ಕೂಟದ ಸದಸ್ಯೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.