ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳಿದಾಗ ಮಾತ್ರ ಸಂಪತ್ತು, ಯಶಸ್ಸು ಸಿಗುತ್ತದೆ. ಈ ನೆಲೆಯಲ್ಲಿ ಕ್ಲಬ್ಬಿನ ಎಲ್ಲಾ ಸಹೋದರಿಯರು ಊರಿಗೆ ಹಾಗೂ ಸಮಾಜಕ್ಕೆ ಮಾದರಿಯಾಗುವಂತಹ ಕೆಲಸಗಳನ್ನು ಮಾಡುವಂತಾದಾಗ ಮಾತ್ರ ಕತ್ತಲೆಯ ಒಳಗಿರುವ ಜ್ಞಾನ, ಭರವಸೆಗಳೆಂಬ ಬೆಳಕಿನ ಬೀಜದಂತೆ ಭವಿಷ್ಯದ ಬಾಳು ಬೆಳಗುತ್ತದೆ ಎಂದು ಇನ್ನರ ವೀಲ್ ಜಿಲ್ಲಾ 3182ರ ಡಿಸ್ಟ್ರಿಕ್ಟ್ ಚೇರ್ಮನ್ ಚಿತ್ರಾ ರಾವ್ ಹೇಳಿದರು.
ಬೈಂದೂರು ಇನ್ನರ್ ವೀಲ್ ಕ್ಲಬ್ ಘಟಕಕ್ಕೆ ಅಧಿಕೃತ ಭೇಟಿನೀಡಿ ಸಂಜೆ ರೋಟರಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಮಹಿಳೆಯರ ರಕ್ಷಣೆಯ ಬಗ್ಗೆ ಅಲ್ಲಲ್ಲಿ ಜಾಗೃತಿ ಸಮಾವೇಶ, ಕಷ್ಟದಲ್ಲಿರುವವರಿಗೆ, ನೊಂದವರಿಗೆ ತಕ್ಷಣ ಸ್ಪಂದಿಸುವ ಹಾಗೂ ಮಕ್ಕಳಿಗೆ ಪ್ರಕೃತಿ ರಕ್ಷಣೆ, ನೀರಿನ ಮಿತ ಬಳಕೆ ಮತ್ತು ಆರೋಗ್ಯದ ಬಗ್ಗೆ ಮಾರ್ಗದರ್ಶನ ನೀಡುವ ಶೈಕ್ಷಣಿಕ ಕಾರ್ಯಕ್ರಮ ನಡೆಸುವ ಮೂಲಕ ಮಾನವೀಯತೆಯ ಸೇವೆ ನಿಮ್ಮಿಂದಾಗಲಿ ಎಂದರು.
ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಆಶಾ ಕಿಶೋರ್ ಅಧ್ಯಕ್ಷತೆವಹಿಸಿ ಸ್ವಾಗತಿಸಿದರು. ಈ ಸಂದರ್ಭ ಉಪ್ಪಂದ ಜಿಎಸ್ಬಿ ಸಮಾಜದ ಶ್ರೀ ವೆಂಕಟರಮಣ ಮಹಿಳಾ ಚಂಡೆ ಬಳಗದ ಸದಸ್ಯೆಯರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಪ್ರೇಮಾ ಎಸ್. ವರದಿ ವಾಚಿಸಿದರು. ಶಾಂತಿ ಪಿರೇರಾ ನಿರೂಪಿಸಿ, ರೆಹನಾ ಅಂದೂಕಾ ವಂದಿಸಿದರು. ನಂತರ ಚಂಡೆವಾದನ ಹಾಗೂ ಕ್ಲಬ್ಬಿನ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.