ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ, ನಿವೇಶನ ರಹಿತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ನಾಡ ಗ್ರಾಮ ಪಂಚಾಯತ್ ಕಛೇರಿ ಎದುರು ದಿನಾಂಕ : ೨೨ ಸೆಪ್ಟೆಂಬರ್ ೨೦೧೬ ರಂದು ನಿವೇಶನ ರಹಿತ ಅರ್ಜಿದಾರರು ಭೂಮಿ ಹಕ್ಕು ಪತ್ರಕ್ಕಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು. ನಾಡ ಗುಡ್ಡೆಯಂಗಡಿ ರಾಮಕೃಪಾ ಸಭಾಭವನದಲ್ಲಿ ಪೂರ್ವಬಾವಿ- ಜರಗಿದ ನಿವೇಶನ ರಹಿತರ ಸಮಾವೇಶವನ್ನು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿ ಮಾತನಾಡುತ್ತಾ- ನಿವೇಶನ ರಹಿತರ ಅಂತಿಮ ಪಟ್ಟಿ ೩೨೦ ಫಲಾನುಭವಿಗಳನ್ನು ನಾಡ ಗ್ರಾಮ ಪಂಚಾಯತ್ ವತಿಯಿಂದ ಗುರುತಿಸಿ ವರ್ಷ ಕಳೆದರೂ ಈ ತನಕ ಗುರುತಿಸಿರುವ ಸರಕಾರಿ ಜಮೀನು ಹಕ್ಕು ಪತ್ರ ವಿತರಣೆ ಮಾಡದ ಗ್ರಾಮ ಪಂಚಾಯ್ತಿ ಆಡಳಿತ ನೀತಿಯನ್ನು ತೀವ್ರವಾಗಿ ಖಂಡಿಸಿದರು.
ನಾಡ ಗ್ರಾಮದ ಮುಖ್ಯ ಬೀದಿಯಲ್ಲಿ ನಿವೇಶನ ರಹಿತರು ಮೆರವಣಿಗೆ ಮೂಲಕ ಘೋಷಣೆ ಕೂಗುತ್ತಾ – ನಾಡ ಗ್ರಾಮ ಪಂಚಾಯತ್ ಕಛೇರಿ ಎದುರು ಪ್ರತಿಭಟನೆ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ, ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಸ್ಥಳ ಸ.ನಂ. ೨೬೦/೧ ವಿಸ್ತೀರ್ಣ ೧೧.೫೯ ಎಕ್ರೆ, ಸ.ನಂ. ೩೧೯.೩ ವಿಸ್ತೀರ್ಣ ೫.೫೭ ಎಕ್ರೆ, ಸ.ನಂ. ೩೧೯.೨ ವಿಸ್ತೀರ್ಣ ೪.೬೯ ಎಕ್ರೆ, ಸ.ನಂ. ೩೨೦/೧ ವಿಸ್ತೀರ್ಣ ೫೫ ಎಕ್ರೆ, ೨೬೦/೧ ೩೬.೫೧ ಎಕ್ರೆ, ಹಾಗೂ ಬಡಾಕೆರೆ ಗ್ರಾಮದಲ್ಲಿ ಸ.ನಂ. ೧೨೧ ರಲ್ಲಿ ವಿಸ್ತೀರ್ಣ ೪.೬೬ ಎಕ್ರೆ, ಸ.ನಂ. ೧೪೬ ರಲ್ಲಿ ವಿಸ್ತೀರ್ಣ ೧೧.೦ ಎಕ್ರೆ ಲಭ್ಯವಿದ್ದರೂ ಸ್ಥಳೀಯಾಡಳಿತ ಬಡನಿವೇಶನ ರಹತರ ಪರ ಭೂಮಿ ಹಕ್ಕು ಪತ್ರ ಮಂಜೂರಾತಿಗೆ ಕ್ರಮ ವಹಿಸದಿರುವ ಬಗ್ಗೆ ತೀವ್ರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಿವೇಶನ ರಹಿತ ಹೋರಾಟ ಸಮಿತಿ ಮುಖಂಡರು ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಜತೆ ತೀವ್ರ ವಾಗ್ವಾದ-ಮಾತಿನ ಚಕಮಿ ನಡೆಸಿದರು. ಪೊಲೀಸ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ವಾತಾವರಣ ತಿಳಿಗೊಳಿಸಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು.
ಮಾಜಿ ಪಂಚಾಯತ್ ಸದಸ್ಯ ಫಿಲಿಪ್ಡಿ’ಸಿಲ್ವ ಕೃಷಿ ಕೂಲಿಕಾರರ ಸಂಘದ ಮುಖಂಡರಾದ ರಾಜೀವ ಪಡುಕೋಣೆ, ನಾಗರತ್ನ ನಾಡ, ಮನೋರಮಾ ಭಂಡಾರಿ, ಶ್ರೀಮತಿ ಆಚಾರ್, ರಾಜೇಶ್ ಪಡುಕೋಣೆ, ಶೀಲಾವತಿ, ಸುಬ್ರಹ್ಮಣ್ಯ ಆಚಾರ್, ಲಯೆನ್ಸ್ ರಬೆಲ್ಲ ಪರಮೇಶ್ವರ ಪ್ರತಿಭಟನಾ ಹೋರಾಟದ ನೇತೃತ್ವ ವಹಿಸಿದ್ದರು.