ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೈಲ್ವೆ ಸುರಂಗದಲ್ಲಿ ಕಲ್ಲು ಕುಸಿದು ಬಿದ್ದು ಸಂಪೂರ್ಣ ನುಜ್ಜುಗೊಜ್ಜಾಗಿ ಎಳಲಾಗದ ಸ್ಥಿತಿಯಲ್ಲಿ 24 ವರ್ಷಗಳಿಂದ ಹಾಸಿಗೆಯಲ್ಲಿ ಮಲಗಿಯೇ ಇರುವ ಕಾವ್ರಾಡಿ ಗ್ರಾಮದ ಸಾರ್ಕಲ್ಲು ಜಯರಾಮ ಶೆಟ್ಟಿಯವರಿಗೆ ಬೆಂಗಳೂರು ಬಂಟರ ಸಂಘದ ಕಾರ್ಯಕಾರಿ ಸಮಿತಿ ಮಾನವೀಯ ಸ್ಪಂದನೆ ನೀಡಿದೆ.
ಬೆಂಗಳೂರಿನಿಂದ ಆಗಮಿಸಿದ ಬೆಂಗಳೂರು ಬಂಟರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರ ತಂಡ ರೂ.55,000 ಚೆಕ್ನ್ನು ಜಯರಾಮ ಶೆಟ್ಟಿಯವರಿಗೆ ನೀಡಿತು. ಬ್ಯಾಂಕಿನಲ್ಲಿ ಸುಸ್ತಿ ಇರುವ ಜಯರಾಮ ಶೆಟ್ಟರ ಸಾಲದ ಮೊತ್ತದ ಪಾವತಿಯ ಬಗ್ಗೆಯೂ ಕೂಡಾ ಗಮನ ಹರಿಸುವುದಾಗಿ ತಿಳಿಸಿದರು. ಸಮಾಜ ವ್ಯಕ್ತಿಯೊಬ್ಬರು ಆಸಹಾಯಕವಾಗಿ ಹಾಸಿಗೆ ಹಿಡಿದಿರುವುದು ಮಾದ್ಯಮಗಳ ಮೂಲಕ ತಮ್ಮ ಗಮನಕ್ಕೆ ಬಂದಿದ್ದು, ಅಸಹಾಯಕರಿಗೆ ಸ್ಪಂದಿಸುವುದು ಸಂಘದ ಪ್ರಮುಖ ಧ್ಯೇಯವಾಗಿದ್ದು ಸ್ಪಂದಿಸುವ ಕೆಲಸ ಮಾಡಿದ್ದೇವೆ ಎಂದು ಬಂಟರ ಸಂಘದ ಕಾರ್ಯಕಾರಿಣಿ ತಿಳಿಸಿದೆ.
ಈ ಸಂದರ್ಭದಲ್ಲಿ ಬೆಂಗಳೂರು ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಜಪ್ತಿ ಸಂತೋಷಕುಮಾರ್ ಶೆಟ್ಟಿ, ಖಜಾಂಚಿ ಆನಂದರಾಮ ಶೆಟ್ಟಿ ಬಗ್ವಾಡಿ, ಸಮಾಜಸೇವಾ ವಿಭಾಗದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಶಿರಿಯಾರ, ವೈದ್ಯಕೀಯ ವಿಭಾಗದ ಅಧ್ಯಕ್ಷ ಡಾ|ಜಗದೀಶ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ಪ್ರೇಮ್ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.