ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾರ್ಕಳ ತಾಲೂಕಿನ ಅಜೆಕಾರು ಎಣ್ಣೆಹೊಳೆಯಲ್ಲಿ ಜನವರಿ ೨೫ರಂದು ನಡೆಯುವ ಪ್ರಪ್ರಥಮ ಹೋಬಳಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ಸಾಹಿತಿ, ಪ್ರಕಾಶಕ, ಸಂಘಟಕ ಮುನಿಯಾಲು ಗಣೇಶ ಶೆಣೈ ಅವರನ್ನು ಅವರ ಕಚೇರಿ ನಲಂದಾಕ್ಕೆ ತೆರಳಿ ಆಹ್ವಾನಿಸಲಾಯಿತು.
ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಆಹ್ವಾನ ಪತ್ರಿಕೆ ನೀಡಿ ಮತ್ತು ಕನ್ನಡದ ಶಾಲು ಹಾಕಿ ಅವರನ್ನು ಆಹ್ವಾನಿಸಿದರು. ಮುನಿಯಾಲು ಗಣೇಶ ಶೆಣೈ ಅವರು ಸದ್ದಿಲ್ಲದೆ ಸಾಹಿತ್ಯ ರಚನೆ ಮತ್ತು ಸೇವೆ ಮಾಡುತ್ತಾ ಬಂದಿದ್ದಾರೆ ಅವರು ಸಮ್ಮೇಳಾಧ್ಯಕ್ಷತೆ ವಹಿಸಿ ಕೊಂಡಿರುವುದು ನಮಗೆ ಬಹಳ ಸಂತೋಷ ತಂದಿದೆ. ಅವರಿಂದ ಇನ್ನಷ್ಟು ಸೇವೆ ಸಲ್ಲಲಿ ಎಂದು ಹಾರೈಸಿದರು.
ನಾನಿನ್ನು ಸಾಹಿತ್ಯ ವಿದ್ಯಾರ್ಥಿ, ನಾಲ್ಕಾರು ದೇಶ ಸುತ್ತಿದ ಮೇಲೆ ನಮ್ಮ ದೇಶದ ಆದಿವಾಸಿಗಳ ಪಾರಂಪರಿಕ ಜ್ಞಾನ ನೋಡಿ ಚಕಿತನಾಗಿ ಅವುಗಳ ಕುರಿತು ಅಧ್ಯಯನ ನಡೆಸುತ್ತಿದ್ದೇನೆ. ವೇದಿಕೆ ಹಂಚಿಕೊಳ್ಳುವುದು, ಪ್ರಶಸ್ತಿ ಪುರಸ್ಕಾರ ಗೌರವಗಳಿಗಿಂತ ಭಿನ್ನವಾದ ಸಂತೋಷವನ್ನು ನಾನು ಕೊಂಡಿದ್ದೇನೆ ಎಂದು ಶೆಣೈ ಅವರು ಪ್ರತಿಕ್ರಿಯಿಸಿದರು. ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ, ಅಜೆಕಾರು ಹೋಬಳಿ ಕಸಾಪ ಅಧ್ಯಕ್ಷ, ಹಿರಿಯ ಪತ್ರಕರ್ತ ಶೇಖರ ಅವರು ಉಪಸ್ಥಿತರಿದ್ದರು.