ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಬುಧವಾರ ಆಗಮಿಸಿದ್ದ ಅವರು ಕುಂದಾಪುರ ಸಮೀಪದ ವಕ್ವಾಡಿ ನಿವಾಸಿ, ಬೆಂಗಳೂರು ಉದ್ಯಮಿ ವಿ.ಕೆ. ಮೋಹನ್ ಅವರ ಕುಟುಂಬ ಸದಸ್ಯ ವಿ.ಕೆ. ಹರೀಶ್ ನಿವಾಸಕ್ಕೆ ಭೇಟಿ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತುಳು ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ಬೆಳೆಯುತ್ತಿದೆ. ಚಾಲಿ ಪೋಲಿಲು ಚಿತ್ರ ಹಿಟ್ ಆಗಿದೆ. ಚಿತ್ರ ತಂಡವನ್ನು ಭೇಟಿ ಮಾಡಿ ಸಂತಸ ಹಂಚಿಕೊಂಡಿದ್ದೇನೆ. ಚಿತ್ರದ ಹಾಡುಗಳು ಸಖತ್ತಾಗಿವೆ. ಅವಕಾಶ ಸಿಕ್ಕಲ್ಲಿ ಕೋಸ್ಟಲ್ವುಡ್ನಲ್ಲಿ ನಟಿಸುವಾಸೆ ಇದೆ. ತುಳು ಹಾಡುಗಳು ನನಗೆ ಇಷ್ಟ. ತುಳು ಸಂಗೀತ ಕೇಳುವ ಹವ್ಯಾಸ ಇಟ್ಟುಕೊಂಡಿದ್ದೇನೆ. ಅವಕಾಶ ಸಿಕ್ಕರೆ ತುಳು ಹಾಡು ಹಾಡಬೇಕೆಂಬ ಅಸೆ ಎಂದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ತಿಳಿಸಿದ್ದಾರೆ.
ಕರಾವಳಿಗೂ, ನಮ್ಮ ಕುಟುಂಬಕ್ಕೂ ದೊಡ್ಡ ನಂಟಿದೆ. ತಂದೆಯವರು ಕರಾವಳಿ ಜನರ ಪ್ರೀತಿಗೆ ಪಾತ್ರರಾದವರು. ಚಿಕ್ಕವನಿದ್ದಾಗ ಅವರೊಂದಿಗೆ ಈ ಭಾಗದಲ್ಲಿ ಶೂಟಿಂಗ್ ವೇಳೆ ಭಾಗವಹಿಸಿದ್ದೆ. ವಕ್ವಾಡಿ ವಿ.ಕೆ. ಮೋಹನ್ ಕುಟುಂಬ ನಮಗೆ ಮನೆಯಿದ್ದಂತೆ. ಒಂದು ಮುತ್ತಿನ ಕಥೆ, ಶ್ರಾವಣ ಬಂತು, ಅನುರಾಗ ಅರಳಿತು, ಅಪೂರ್ವ ಸಂಗಮ ಮೊದಲಾದ ತಂದೆಯವರು ನಟಿಸಿದ ಸಿನಿಮಾಗಳು ಈ ಭಾಗದಲ್ಲಿ ಚಿತ್ರೀಕರಣಗೊಂಡಿದ್ದರಿಂದ ಇಲ್ಲಿನ ಪರಿಚಯ ಚೆನ್ನಾಗಿಯೇ ಇದೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು, ಕುಂಭಾಸಿ, ಉಡುಪಿ ಮೊದಲಾದ ಪುಣ್ಯಕ್ಷೇತ್ರಗಳಿಗೆ ವರ್ಷಕ್ಕೊಮ್ಮೆ ಭೇಟಿ ನೀಡಿ ದರ್ಶನ ಪಡೆಯುತ್ತೇನೆ. ಹಾಗಾಗಿ ಕರಾವಳಿ ನನಗೆ ಇಷ್ಟ ಎಂದರು.
ಕುಂದಾಪುರದಲ್ಲಿ ನನಗೆ ಅನೇಕ ಗೆಳೆಯರಿದ್ದಾರೆ. ಇಲ್ಲಿಯ ಜನ ಸಜ್ಜನರು. ಇಲ್ಲಿನ ನಾಟಿ ಕೋಳಿ ಸಾರು, ಮೀನು ಫ್ರೈ, ನೀರ್ದೋಸೆ, ಕುಂದಾಪುರ ಚಿಕನ್ ಸೂಪರ್. ಹಾಗೆನೇ ಇಲ್ಲಿನ ಪರಿಸರ ಕೂಡ ಅದ್ಭುತ. ಮನಸ್ಸಿಗೆ ತುಂಬ ಸಂತೋಷವನ್ನೀಯುತ್ತದೆ. ಕುಂದಾಪ್ರ ಭಾಷೆಯ ಬಿಲಿಂಡರ್ ಸಿನಿಮಾದ ಹಾಡು ನನಗೆ ಖುಷಿ ಕೊಟ್ಟಿದೆ. ಕುಂದಗನ್ನಡ ಭಾಷೆಯ ಸಿನಿಮಾಕ್ಕೆ ಕುಂದಾಪ್ರದ ಜನ ಅದ್ಭುತ ಪ್ರೋತ್ಸಾಹ ನೀಡಿದ್ದಾರೆ. ಅವಕಾಶ ಸಿಕ್ಕಲ್ಲಿ ಕುಂದಾಪ್ರ ಕನ್ನಡ ಭಾಷೆಯ ಚಿತ್ರದಲ್ಲಿ ನಟಿಸಬೇಕೆಂಬ ಆಸೆಯಿದೆ ಎಂದು ನಗು ಚೆಲ್ಲಿದರು.
ನನ್ನ ಮುಂದಿನ ರಾಜ್ಕುಮಾರ್ ಚಿತ್ರದಲ್ಲಿ ತಂದೆಯವರ ಛಾಯೆಯಿಲ್ಲ. ಕೇವಲ ಹೆಸರು ಮಾತ್ರ ರಾಜಕುಮಾರ್ ಅಂತಿದೆ. ಕಥೆ ಕಾದು ನೋಡಿ. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ ಎಂದ ಅವರು, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಿದೇಶಕರು ನೀಡಿದ ಹೊಸ ಚಿತ್ರವೊಂದಕ್ಕೆ ನಿರ್ಮಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈಗಾಗಲೆ ನಮ್ಮ ಬ್ಯಾನರ್ನಡಿ 90ಕ್ಕೂ ಹೆಚ್ಚು ಚಿತ್ರಗಳು ನಿರ್ಮಾಣಗೊಂಡಿದೆ. ಉತ್ತಮ ಚಿತ್ರ ನೀಡಿದ ಸಂತೃಪ್ತಿ ನಮಗಿದೆ ಎಂದರು.
ಅಣ್ಣಂದಿರರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಅವರೊಡಗೂಡಿ ಸಿನಿಮಾ ಮಾಡಬೇಕೆಂಬ ಅಭಿಲಾಷೆಯಿದೆ. ಆದರೆ ಕಾಲ ಇನ್ನೂ ಕೂಡಿಬಂದಿಲ್ಲ. ಮೂವರು ಸೇರಿ ನಟಿಸಲು ಬೇಕಾದ ಉತ್ತಮ ಕಥೆ ಸಿಕ್ಕಿಲ್ಲ. ಅದಕ್ಕಾಗಿ ಕಾಯುತ್ತಿದ್ದೇವೆ. ಅವಕಾಶ ಸಿಕ್ಕರೆ ಖಂಡಿತವಾಗಿಯೂ ಚಿತ್ರ ಮಾಡುತ್ತೇವೆ. ರಾಕಿಂಗ್ ಸ್ಟಾರ್ ಯಶ್ ಜತೆಗೆ ನಟಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಇಲ್ಲಿಯ ತನಕ ಯಾವ ಮಾತೂ ಬಂದಿಲ್ಲ. ಬಂದರೆ ನೋಡೋಣ ಎಂದರು.
ವಕ್ವಾಡಿಗೆ ಭೇಟಿ: ದಂಪತಿ ಸಮೇತ ವಕ್ವಾಡಿಯ ವಿ.ಕೆ. ಮೋಹನ್ ಕುಟುಂಬಿಕರಾದ ವಿ.ಕೆ. ಹರೀಶ್ ಅವರ ನಿವಾಸಕ್ಕೆ ಭೇಟಿ ನೀಡಿದ ಪುನೀತ್ ಮಧ್ಯಾಹ್ನದ ಭೋಜನ ಸವಿದರು. ಅವರ ಇಷ್ಟದ ನಾಟಿ ಕೋಳಿ ಸಾಂಬಾರು, ನೀರುದೋಸೆ, ಕೊಟ್ಟೆ ಕಡಬು, ಮೀನು ಫ್ರೈ ಸೇರಿದಂತೆ ರಸಂ ಇನ್ನಿತರ ಅಡುಗೆ ಮಾಡಲಾಗಿತ್ತು. ಅಶ್ವಿನಿ ಪುನೀತ್ ರಾಜ್ಕುಮಾರ್, ವಿನಯ ರಾಘವೇಂದ್ರ, ಗೆಳೆಯರಾದ ಸಂದೀಪ್ ರೆಡ್ಡಿ, ಶುಭಕರ, ದ್ವಾರಕಾನಾಥ್, ವಿ.ಕೆ. ಮೋಹನ್, ವಿ.ಕೆ. ಹರೀಶ್ , ಹಿರಿಯ ವಕೀಲ ರವಿಕಿರಣ್ ಮುರ್ಡೇಶ್ವರ ಉಪಸ್ಥಿತರಿದ್ದರು.