ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಾವುದೇ ರೋಟೆರಿಯನ್ಗಳ ಕುಟುಂಬ ಮತ್ತು ವೃತ್ತಿಯ ನಡುವೆ ಉತ್ತಮ ಪ್ರಗತಿಯಿದ್ದರೇ ಇದ್ದರೆ ರೋಟರಿಯೂ ಸರಿಯಾದ ದಾರಿಯಲ್ಲಿ ನಡೆಯುತ್ತದೆ. ಕುಟುಂಬವೂ ರೋಟರಿಯಲ್ಲಿ ಭಾಗಿಯಾದಾಗ ಯೋಜಿತ ಕಾರ್ಯದಲ್ಲಿ ಪೂರ್ಣಪ್ರಮಾಣದ ರೋಟರಿಯ ಸೇವಾ ಕಾರ್ಯ ಯಶಸ್ಸು ಕಾಣಲು ಸಾಧ್ಯವಿದೆ. ಇಂದು ಆತ್ಮವಿಶ್ವಾಸ ಕುಗ್ಗದೆ ಸಮುದಾಯ ಬೆಳೆಯುವಂತೆ ಮಾಡುವ ಕಾರ್ಯ ಸಂಸ್ಥೆಗಳ ಮೂಲಕ ಆಗಬೇಕಿದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಹೆಚ್. ಎಲ್. ರವಿ ಹೇಳಿದರು.
ಅವರು ಬೈಂದೂರು ರೋಟರಿ ಭವನದಲ್ಲಿ ಜರುಗಿದ ರೋಟರಿ ಕ್ಲಬ್ ಬೈಂದೂರು ಪದಪ್ರದಾನ ಸಮಾರಂಭದಲ್ಲಿ ನೂತನ ಅದ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದರು. ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಕೊಂಡಿರುವ ೪ ಜನರಿಂದ ಆರಂಭಗೊಂಡ ಮಾಡಿದ ರೋಟರಿ ಇಂದು ವಿಶ್ವದಾದ್ಯಂತ ೧೨ ಲಕ್ಷ ರೊಟೇರಿಯನ್ಗಳನ್ನು ಹೊಂದಿದೆ. ಒಳ್ಳೆಯ ಕೆಲಸವನ್ನು ಮಾಡಬೇಕು ಎಂದು ರೋಟರಿ ಫೌಂಡೇಶನ್ ಹೇಳುತ್ತದೆ. ಶಿಕಾಗೋನಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಿಸುವುದರಿಂದ ಆರಂಭಗೊಂಡ ರೋಟರಿ ಸೇವೆ, ಅಂಗವಿಕಲತೆ ಹಾಗೂ ಪೊಲೀಯೋ ರೋಗದ ಬಗ್ಗೆ ವಿಶೇಷ ಮುತುವರ್ಜಿ ವಹಿಸಿತ್ತು. ಇಂದು ಭಾರತವನ್ನು ಪೋಲಿಯೋ ಮುಕ್ತಗೊಳಿಸಿದ ಹೆಮ್ಮೆ ರೋಟರಿ ಸಂಸ್ಥೆಯದ್ದು ಎಂದರು.
ನೂತನ ಅಧ್ಯಕ್ಷ ಹೆಚ್. ಕೃಷ್ಣಪ್ಪ ಶೆಟ್ಟಿ, ನೂತನ ಕಾರ್ಯದರ್ಶಿ ಡಾ. ಪ್ರವೀಣಕುಮಾರ್ ಶೆಟ್ಟಿ ಪ್ರಮಾಣವಚನ ಸ್ವೀಕರಿಸಿದರು. ವಲಯ ೧ರ ಸಹಾಯಕ ಗವರ್ನರ್ ಕೃಷ್ಣ ಕೆ. ಕಾಂಚನ್ ಬಿಂದುವಾಣಿ ಬುಲೆಟಿನ್ ಬಿಡುಗಡೆಗೊಳಿಸಿದರು. ರೋಟರಿ ಮಾಜಿ ಗವರ್ನರ್ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಲಯ ಸೇನಾನಿ ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.
ರೋಟರಿ ಬೈಂದೂರು ನಿಕಟಪೂರ್ವಾಧ್ಯಕ್ಷ ಅಧ್ಯಕ್ಷ ಮಂಜುನಾಥ ಶೆಟ್ಟಿ ಸ್ವಾಗತಿಸಿದರು. ಪ್ರಸಕ್ತ ಸಾಲಿನ ರೋಟರಿ ಕಾರ್ಯದರ್ಶಿ ಡಾ. ಪ್ರವೀಣಕುಮಾರ್ ಶೆಟ್ಟಿ ವಂದಿಸಿದರು. ನಿಕಟಪೂರ್ವ ಕಾರ್ಯದರ್ಶಿ ಸುಧಾಕರ ಪಿ ಬೈಂದೂರು ವರದಿ ವಾಚಿಸಿದರು.