ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಳೆದ ಶತಮಾನದ ಆದಿಯಲ್ಲಿ ಸ್ವಪ್ರಯತ್ನ ಮತ್ತು ಪ್ರತಿಭೆಯಿಂದ ಅಖಿಲ ಭಾರತ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಾರತ ಸರ್ಕಾರದ ಪ್ರಥಮ ಎಮ್.ಆರ್.ಟಿ.ಪಿ ಕಮಿಷನರ್ ಆಗಿ ಉತ್ತಮ ಸೇವೆಗೈದ ಹಾಗೂ ತಾವು ಸೇವೆ ಸಲ್ಲಿಸಿದ ಎಲ್ಲಾ ಊರುಗಳಲ್ಲಿಯೂ ಕನ್ನಡ ಕರ್ನಾಟಕದ ಸಾಂಸ್ಕ್ರತಿಕ ಸಂಘಟನೆಗಳ ಮಂಚೂಣೆ ಸಂಘಟಕರಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ನಾರಾಯಣ ಪರಮೇಶ್ವರ ಭಟ್ಟರದು ಆದರ್ಶ ವ್ಯಕ್ತಿತ್ವ. ಎಂಭತ್ತೇಳನೇಯ ವಯಸ್ಸಿನಲ್ಲಿಯೂ ಧಾರವಾಡದಲ್ಲಿ ’ಅವನಿ’ ಸಾಂಸ್ಕ್ರತಿಕ ಸಂಸ್ಥೆ, ಹೆರಿಟೇಜ್ ಮ್ಯೂಸಿಯಂ, ಇನಾಟ್ಯಾಕ್ ಸಂಸ್ಥೆ, ಗ್ರಾಹಕ ಜಾಗೃತಿ ಸಂಘಟನೆಗಳ ಪ್ರೇರಕ ಶಕ್ತಿಯಾಗಿರುವ ಭಟ್ಟರು ಉಪ್ಪುಂದ ಮೂಲದವರು ಎಂಬುದು ಹೆಮ್ಮೆಯ ವಿಚಾರ ಎಂದು ಬೆಂಗಳೂರಿನ ಮಾಧ್ಯಮ ಭಾರತಿಯ ನಿರ್ದೇಶಕ ಎಂ ಜಯರಾಮ ಅಡಿಗರು ನುಡಿದರು.
ಉಪ್ಪುಂದ ಚಂದ್ರಶೇಖರ ಹೊಳ್ಳರು ಕಾಂತಾವರದ ನಾಡಿಗೆ ನಮಸ್ಕಾರ ಮಾಲಿಕೆಗಾಗಿ ಬರೆದ ಪುಸ್ತಕವನ್ನು ಭಟ್ಟರ ಹುಟ್ಟೂರಿನಲ್ಲಿ ಬಿಡುಗಡೆ ಮಾಡಿ ಸುವಿಚಾರ ವೇದಿಕೆಯ ಬಳಗದವರಿಗೆ ಉಚಿತ ಪುಸ್ತಕ ನೀಡುವ ಕಾರ್ಯಕ್ರಮದಲ್ಲಿ ಪುಸ್ತಕವು ಉತ್ತಮ ದಾಖಲೆಯಾಗಿ ಮೂಡಿ ಬಂದಿದೆ ಎಂದರು.
ತಿಂಗಳ ಕಾರ್ಯಕ್ರಮದಲ್ಲಿ ಅಂಬಾಗಿಲು ಧನ್ವಂತರಿ ಕ್ಲಿನಿಕನ ಡಾ|| ಗಣೇಶ ಭಟ್ಟ ರವರು ’ಪಂಚಕರ್ಮ ಚಿಕಿತ್ಸೆ’ಯ ಕುರಿತು ವಿವರವಾದ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ ಯು.ಸಿ ಹೊಳ್ಳರು ಡಾಕ್ಟರನ್ನು ಗೌರವಿಸಿದರು.
ನಿವೃತ್ತ ಹಿರಿಯ ಬ್ಯಾಂಕ್ ವ್ಯವಸ್ಥಾಪಕ ವೆಂಕಟರಮಣ ಭಟ್ಟರು ಎನ್.ಪಿ ಭಟ್ಟರರನ್ನು ಪರಿಚಯಿಸಿದರು. ಶ್ರೀಮತಿ ಆಶಾ ದಿನೇಶ್ ತಮ್ಮ ಜೀವನಾನುಭವದ ವಿವರಣೆಯನ್ನು ಪ್ರಸ್ತುತಪಡಿಸಿದರು. ಮಾತೃಮಂಡಳಿಯ ಸದಸ್ಯರಿಂದ ಪ್ರಾರ್ಥನೆ ನಡೆಯಿತು. ಬಿ. ಕೇಶವ ನಾಯಕ್ ಸ್ವಾಗತಿಸಿದರು. ಸಂದೇಶ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಸಂಚಾಲಕ ವಿ. ಹೆಚ್ ನಾಯಕ್ ವಂದನಾರ್ಪಣೆ ಗೈದರು.