ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿಕ್ಷಣ, ಉದ್ಯೋಗ ಎಲ್ಲದರಿಂದ ಬದುಕು ಸಾಗಿಸುವ ಪಥದಲ್ಲಿ ಆರೋಗ್ಯದ ಸಂಪಾದನೆಯನ್ನು ಮರೆಯುವಂತಿಲ್ಲ. ಇಂದಿನ ಒತ್ತಡದ ಬದುಕಲ್ಲಿ ಆರೋಗ್ಯ ಅತೀ ಅವಶ್ಯ, ಆ ಸಂಪತ್ತಿಗೆ ಯೋಗ ಸರ್ವ ಶ್ರೇಷ್ಠ ಮಾರ್ಗವಾಗಿದ್ದು ಇದರ ಪಾಲನೆಯಿಂದ ಮಾನಸಿಕ ದೈಹಿಕ ಕ್ಷಮತೆ ವೃದ್ಧಿಯಾಗುತ್ತದೆ. ಮಾತ್ರವಲ್ಲ ಕ್ಯಾನ್ಸರ್ ನಂತಹ ಘನ ಕಾಯಿಲೆಯಿಂದಲೂ ದೂರ ಉಳಿಯಲು ಸಾಧ್ಯವಿದೆ ಎಂದು ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಣಾಧಿಕಾರಿ ಬಾರ್ಕೂರು ಶಂಕರನಾರಾಯಣ ಶಾಸ್ತ್ರಿ ಹೇಳಿದರು.
ಇತ್ತೀಚೆಗೆ ಉಪ್ಪುಂದ ಶ್ರೀಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಸಭಾ ಭವನದಲ್ಲಿ ಜರುಗಿದ ಎಸ್ ಎಸ್ ಎಲ್ ಸಿ ೭೯/೮೦ರ ಬ್ಯಾಚಿನ ವಿದ್ಯಾರ್ಥಿಗಳ ಸವಿ ಸವಿ ನೆನಪು ಸಮ್ಮೇಳನ ಉದ್ಘಾಟಿಸುತ್ತಾ ಮಾತನಾಡಿದ ಅವರು ಹಳೆಯ ನೆನಪು ಹೊಸ ಹೆಜ್ಜೆಗೆ ಶಕ್ತಿಯನ್ನು ತುಂಬುವ ಸಾಮರ್ಥ್ಯಹೊಂದಿರುತ್ತದೆ ಆ ಶಕ್ತಿಯನ್ನು ವಯೋವೃದ್ಧ ಗುರುಗಳಿಗೆ ನೀಡಿ ನಮ್ಮ ಆತ್ಮಾವಲೋಕನ ನಾವು ಮಾಡಿಕೊಳ್ಳುವಂತೆ ಮಾಡಿದ್ದೀರಿ ಎಂದರು.
೩೭ ವರ್ಷದ ಬಳಿಕ ಪುನಃ ಒಂದಾದ ಈ ಪುನರ್ಮಿಲನದ ಸಭೆಯ ಅಧ್ಯಕ್ಷತೆ ವಹಿಸಿದ ನಿವೃತ್ತ ಹಿರಿಯ ಶಿಕ್ಷಕ ಎಸ್ ಎಸ್ ಪುರಾಣಿಕ ಉಪ್ಪುಂದ ಮಾತನಾಡುತ್ತಾ ವೃಕ್ಷ ವೃದ್ಧಿಸಲು ಫಲವತ್ತಾದ ಭೂಮಿಯೂ ಕಾರಣವಾಗುತ್ತದೆ ಅಂತಹ ಫಲವತ್ತಾದ ಮಣ್ಣಲ್ಲಿ ಹುಟ್ಟಿ ಊರಿಗೂ ನಾಡಿಗೂ ಖ್ಯಾತಿ ತರುವಂತೆ ಗುರುವಂದನೆ ನೀಡಿದ ವಿನಮೃ ಶಿಷ್ಯರಿಂದ ಉಪ್ಪುಂದ ಊರು ಧನ್ಯವಾಗಿದೆ. ಈ ಪರಿಪಾಠ ಮುಂದಿನ ಪೀಳಿಗೆಯವರಿಗೂ ಆದರ್ಶವಾಗಲಿ ಎಂದರು.
ನಿವೃತ್ತ ಮುಖ್ಯೋಪಾಧ್ಯಯರಾದ ಪುಂಡಲೀಕ ಹೆಬ್ಬಾರ ನಾಗೂರು, ಆನಂದ ಶೆಟ್ಟಿ ಖಂಬದಕೋಣೆ, ಭಾಸ್ಕರ್ ಐತಾಳ ಉಪ್ಪಿನಕುದ್ರು ಗೌರವ ಅತಿಥಿಗಳಾಗಿದ್ದರು. ನಿವೃತ್ತ ಸಹಾಯಕ ದುರ್ಗಯ್ಯ ದೇವಾಡಿಗ ಬೈಂದೂರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಆಗಮಿಸಿದ ಎಲ್ಲ ಗುರುವರ್ಯರನ್ನೂ ಮೈಸೂರು ಪೇಟ, ಶಾಲು, ಸನ್ಮಾನ ಪತ್ರ, ಹಣ್ಣು ಹಂಪಲು ನೀಡಿ ವಿದ್ಯಾರ್ಥಿವೃಂದದವರಿಂದ ಗುರುವಂದನೆ ಅರ್ಪಿಸಲಾಯಿತು.
ದೂರದ ಬೀದರ, ಧಾರವಾಡ, ಬೆಂಗಳೂರು, ಶೃಂಗೇರಿ ಮೊದಲಾದ ನಗರದಿಂದ ಒಂದಾದ ೪೦ ವಿದ್ಯಾರ್ಥಿಗಳು ತಮ್ಮ ತಮ್ಮ ಸವಿ ನೆನಪು ಹಾಗೂ ಅನಿಸಿಕೆ ಹಂಚಿಕೊಂಡರು. ಪ್ರಾಯೋಜಕರಾದ ಭುಜಂಗ ಶೆಟ್ಟಿ ಧಾರವಾಡ, ಮೋಹನ್ ಶೆಟ್ಟಿ ಬೀದರ್, ರವೀಂದ್ರ ಶೆಟ್ಟಿ ಧಾರವಾಡ ಬಾಬು ಶೆಟ್ಟಿ ಬೆಂಗಳೂರು ಉಪಸ್ಥಿತರಿದ್ದರು.
ಚಂದ್ರ ದೇವಡಿಗ ಸ್ವಾಗತಿಸಿ, ಗಣೇಶ್ ರಾವ್ ಪ್ರಾರ್ಥಿಸಿದರು. ಮಂಜುನಾಥ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿ ರವೀಂದ್ರ ಶೆಟ್ಟಿ ವಂದಿಸಿ ಸಂಘಟಕ ಓಂಗಣೇಶ್ ಉಪ್ಪುಂದ ನಿರೂಪಿಸಿದರು.