ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಕೋವಿಡ್ -19 ವೈರಾಣು ಹರಡುವುದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಬಗ್ಗೆ ಕೈಗೊಳ್ಳಬೇಕಾದ ಅವಶ್ಯಕ ಕ್ರಮಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟವು ಕಾರ್ಯ ಪಡೆಯನ್ನು ರಚಿಸಿದ್ದು, ಸದರಿ ಕಾರ್ಯಪಡೆಯು ಮಾ. 19 ರಂದು ಸಭೆ ಸೇರಿ ಈ ಹಿಂದೆ ಪ್ರಕಟಿಸಲಾದ ಆದೇಶವನ್ನು ಮಾರ್ಚ್ 31 ರ ವರೆಗೆ ಕೆಲವು ಪರಿಷ್ಕರಣೆಯೊಂದಿಗೆ ವಿಸ್ತರಿಸಲು ತೀರ್ಮಾನಿಸಿರುತ್ತದೆ. ಜೊತೆಗೆ ಪರಿಷ್ಕೃತ ಆದೇಶದಲ್ಲಿ ಕೆಲವು ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದ್ದು / ಸಂಸ್ಥೆಗಳನ್ನು ಕೂಡ ಸಂಪೂರ್ಣವಾಗಿ ಬಂದ್ ಮಾಡಲು ತೀರ್ಮಾನಿಸಿರುತ್ತದೆ.
ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಪರಿಷ್ಕೃತ ನಿಯಮಗಳು ಅವಶ್ಯವೆಂದು ಮನಗಂಡು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು ಈ ಕೆಳಗಿನಂತೆ ಆದೇಶ ಹೊರಡಿಸಿರುತ್ತಾರೆ.
ಈ ಆದೇಶ ಮಾರ್ಪಾಡಾಗದ ಹೊರತಾಗಿ, ಈ ಹಿಂದಿನ ಆದೇಶವನ್ನು ಮುಂದುವರೆಸಿದ್ದು, ಆದೇಶದಲ್ಲಿ ತಿಳಿಸಲಾದಂತೆ ಏಪ್ರಿಲ್ 1 ರ ವರೆಗೆ ಎಲ್ಲಾ ನಿರ್ಬಂಧಿತ ಚಟುವಟಿಕೆ ಹಾಗೂ ಸಂಸ್ಥೆಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಈ ಆದೇಶ ಮಾರ್ಪಾಡಾಗದ ಹೊರತಾಗಿ, ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಚಟುವಟಿಕೆ ನಿರ್ಬಂಧ ಮತ್ತು ಸಂಸ್ಥೆಗಳನ್ನು ಮುಚ್ಚುವ ಬಗ್ಗೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಹೊರಡಿಸಲಾಗಿರುವ ಎಲ್ಲಾ ಆದೇಶಗಳನ್ನು ಮುಂದುವರಿಸಿದ್ದು, ಏಪ್ರಿಲ್ 1 ರ ವರೆಗೆ ಜಾರಿಯಲ್ಲಿರುತ್ತದೆ.
ಮಾ. 21 ರ ಸಂಜೆ 4 ಗಂಟೆಯಿಂದ ಅನ್ವಯವಾಗುವಂತೆ ರಾಜ್ಯದಲ್ಲಿ ಎಲ್ಲಾ ಬಾರ್ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಈ ನಿಯಮ ಕೇವಲ ಮದ್ಯ ಖರೀದಿಗೆ ಅವಕಾಶವಿರುವ ಮದ್ಯದ ಅಂಗಡಿಗಳಿಗೆ ಅನ್ವಯವಾಗುವುದಿಲ್ಲ. ರೆಸ್ಟೋರೆಂಟ್ / ಉಪಹಾರ ಗೃಹ / ಹೋಟೆಲ್/ ಕೆಫೆಗಳಲ್ಲಿ ಊಟ ಮಾಡುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ ಅಡುಗೆ ಮನೆಗಳು ತೆರೆದಿದ್ದು, ಗ್ರಾಹಕರು ಆಹಾರವನ್ನು ಖರೀದಿಸಿ, ಕೇವಲ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಸಣ್ಣ-ಸಣ್ಣ ಅಂಗಡಿಗಳಲ್ಲಿ, ಉಪಹಾರ ದರ್ಶಿನಿಗಳಲ್ಲಿ ಗ್ರಾಹಕರ ನಡುವೆ ಕನಿಷ್ಟ 6 ಅಡಿಗಳ ಅಂತರ ಕಾಯ್ದುಕೊಳ್ಳಲು ಕ್ರಮ ವಹಿಸಲು ನಿರ್ದೇಶಿಸಲಾಗಿದ್ದು, ಈ ನಿಯಮ ಮಾರ್ಚ್ 21 ರ ಸಂಜೆ 4 ಗಂಟೆಯಿಂದ ಜಾರಿಯಲ್ಲಿರುತ್ತದೆ.
ಧಾರ್ಮಿಕ ಸಮೂಹಗಳು, ಜಾತ್ರೆಗಳು, ಉರುಸ್ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಉತ್ಪಾದನಾ ವಲಯದಲ್ಲಿರುವ ಕೈಗಾರಿಕೆಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ವಿಧಿಸಲಾಗಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉತ್ಪಾದನಾ ಕಾರ್ಯಕ್ಕಾಗಿ ಕೆಲವೇ ಕೆಲವು ಸಾಮಾಜಿಕ ಸಂಪರ್ಕ ಕೇಂದ್ರಗಳನ್ನು ಬಳಸಿಕೊಂಡು ಕೈಗಾರಿಕಾ ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು.
ಕೋವಿಡ್-19 ರ ನಿಯಂತ್ರಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಮತ್ತು ಇತರೆ ಅಗತ್ಯ ಸೇವೆಗಳಲ್ಲಿ ತೊಡಗಿಕೊಂಡಿರುವ ಸಿಬ್ಬಂದಿಗಳಿಗೆ ಯಾವುದೇ ರೀತಿಯ ರಜೆಯನ್ನು ನೀಡುವಂತಿಲ್ಲ. ಈ ಆದೇಶವು ವೈದ್ಯಕೀಯ, ಶುಶ್ರೂಷಕ, ಅರೆ ವೈದ್ಯಕೀಯ ವಿದ್ಯಾರ್ಥಿಗಳಿಗೂ ಅನ್ವಯವಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.