ಕುಂದಾಪುರ: ಕೃಷಿ ಅಭಿವೃದ್ಧಿಗೋಸ್ಕರ ಮಾಡಿಕೊಂಡ ಸಾಲ ಮರುಪಾವತಿ ಹೆಸರಿನಲ್ಲಿ ಲೇವಾದೇವಿದಾರರು ಪೀಡನೆ ನೀಡುತ್ತಿರುವುದಾಗಿ ಅಮಾಸೆಬೈಲು ಗ್ರಾಮದ ತೊಂಬಟ್ಟುವಿನ ಕೃಷಿಕ ಶ್ರೀನಿವಾಸ ಪೂಜಾರಿ ಸಂಜೆ ಅಮಾಸೆಬೈಲು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾಯಿ, ತಂದೆ ಮತ್ತು ನನ್ನ ಹೆಸರಿನಲ್ಲಿರುವ ಜಮೀನಿನಲ್ಲಿ ಕೃಷಿ ಅಭಿವೃದ್ಧಿ ಮಾಡುವ ಸಲುವಾಗಿ ಮಾಸಿಕ ಬಡ್ಡಿ ಸಹಿತ ಪಾವತಿಯಂತೆ ಸಾಲ ಪಡೆದುಕೊಂಡಿದ್ದೆ. ಈವರೆಗೆ 5.45 ಲಕ್ಷ ರೂ. ಮರುಪಾವತಿ ಮಾಡಿರುತ್ತೇನೆ. ಆದರೆ ಲೇವಾದೇವಿದಾರರು ಬಡ್ಡಿ ರೂಪದಲ್ಲಿ ಇನ್ನೂ 1.80 ಲಕ್ಷ ರೂ. ನೀಡುವಂತೆ ಪೀಡಿಸುತ್ತಿದ್ದಾರೆ. ನನ್ನ ಹತ್ತಿರ ಹಣವಿಲ್ಲದೆ ಬಡಕೃಷಿಕನಾಗಿದ್ದು , ನನಗೆ ಸಾಲ ಕೊಟ್ಟವರು ಜು. 18ರಿಂದ ಈ ತನಕ ಆಗಾಗ್ಗೆ ಮನೆಗೆ ಬಂದು ಕಿರುಕುಳ ನೀಡುತ್ತಿರುವುದಲ್ಲದೆ ದೂರವಾಣಿ ಮೂಲಕವೂ ಪೀಡಿಸುತ್ತಿದ್ದಾರೆ. ಸದ್ರಿ ಲೇವಾದೇವಿದಾರರು ಯಾವುದೇ ಪರವಾನಗಿ ಇಲ್ಲದೆ ವ್ಯವಹಾರ ನಡೆಸುತ್ತಿರುವುದು ತಿಳಿದುಬಂದಿದೆ. ನನ್ನ ಸಾಲಕ್ಕೆ ಬೇಕಾದ ಎಲ್ಲ ದಾಖಲೆಗಳನ್ನು ನೀಡಿದ್ದೇನೆ. ಆದರೂ ಮೀಟರ್ ಬಡ್ಡಿ ರೂಪದಲ್ಲಿ ಹಣ ನೀಡಬೇಕೆಂದು ಪೀಡಿಸುತ್ತಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.