ಗಂಗೊಳ್ಳಿ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣ ಕ್ರೀಡಾಂಗಣದಲ್ಲಿ ಶ್ರೀ ರಾಘವೇಂದ್ರ ಸ್ಪೋಟ್ಸ್ ಕ್ಲಬ್ ಗಂಗೊಳ್ಳಿ ಮತ್ತು ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ರಾಘವೇಂದ್ರ ಸ್ಪೋಟ್ಸ್ ಕ್ಲಬ್ನ 40ರ ಸಂಭ್ರಮಾಚರಣೆಯ ಪ್ರಯುಕ್ತ ಜರಗಿದ ರಾಜ್ಯ ಮಟ್ಟದ ಪುರುಷರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬೆಂಗಳೂರಿನ ಅಮಿತ್ ಮತ್ತು ಪ್ರವೀಣ್ ಜೋಡಿಯು ಪ್ರಥಮ ಸ್ಥಾನ ಪಡೆದು ಪ್ರತಿಷ್ಠಿತ ಎಸ್.ಆರ್.ಎಸ್.ಸಿ. ಟ್ರೋಫಿ-೨೦೧೫ ಮತ್ತು ನಗದನ್ನು ತನ್ನದಾಗಿಸಿಕೊಂಡಿದ್ದಾರೆ.
ಬೆಂಗಳೂರಿನ ಸುನೀಲ್ ಗ್ಲಾಡ್ಸನ್ ಮತ್ತು ವೈಭವ್ ಜೋಡಿಯು ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ವಿಮಲೇಶ್ ಮತ್ತು ಅಖಿಲ್ ಜೋಡಿಯು ತೃತೀಯ ಮತ್ತು ಚೇತನ್ ಮತ್ತು ದರ್ಶನ್ ಜೋಡಿಯು ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಎಚ್.ಗಣೇಶ ಕಾಮತ್ ಮತ್ತು ಮುಖ್ಯ ಅತಿಥಿ ಪಿ. ಜನಾರ್ದನ ಪೂಜಾರಿ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಆಟಗಾರರ ಪರವಾಗಿ ಅಮಿತ್, ಸುನೀಲ್ ಗ್ಲಾಡ್ಸನ್ ಮತ್ತು ವಿಮಲೇಶ್ ಅನಿಸಿಕೆ ಹಂಚಿಕೊಂಡರು. ಶ್ರೀ ರಾಘವೇಂದ್ರ ಸ್ಪೋಟ್ಸ್ ಕ್ಲಬ್ನ ಅಧ್ಯಕ್ಷ ಎಂ.ಜಿ.ರಾಘವೇಂದ್ರ ಭಂಡಾರ್ಕಾರ್, ಕಾರ್ಯದರ್ಶಿ ರಾಮನಾಥ ಚಿತ್ತಾಲ್ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಬಿ.ರಾಘವೇಂದ್ರ ಪೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೆ.ರಾಮನಾಥ ನಾಯಕ್ ವಂದಿಸಿದರು. ರಾಜ್ಯದ ವಿವಿಧೆಡೆಗಳಿಂದ ಸುಮಾರು ೩೦ ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು.