ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಂದುಶ್ರೀ ಬಾಲಕ ಬಾಲಕಿಯರ ಭಜನಾ ತಂಡ ಗಂಗೊಳ್ಳಿ, ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ ಮತ್ತು ಇಂದುಶ್ರೀ ಮಹಿಳಾ ಸಂಘ ಗಂಗೊಳ್ಳಿ ಇವರ ಆಶ್ರಯದಲ್ಲಿ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಟ್ರಸ್ಟಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಆಶಯದಂತೆ ರಾಮನವಮಿ ಉತ್ಸವದ ಅಂಗವಾಗಿ ಗಂಗೊಳ್ಳಿಯ ಇಂದುಧರ ಸಭಾ ಭವನದಲ್ಲಿ ರಾಮಭಜನೆ, ಕುಣಿತ ಭಜನೆ ನಡೆಯಿತು.
ಸ.ವಿ.ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಜಿ.ವಿಶ್ವನಾಥ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಾಪಕ ನಾಗರಾಜ ಆಚಾರ್ಯ ಅವರು ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಚರಿತ್ರೆಯನ್ನು ವಿವರಿಸಿದರು. ರಾಮಾಯಣ ಕಥಾಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಾಪಕ ದೇವ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷೆ ಸುಮಿತ್ರಾ ಜಿ., ದೇವಸ್ಥಾನದ ಅಧ್ಯಕ್ಷ ಅರುಣ್ ಕುಮಾರ್ ಜಿ., ಉಪಾಧ್ಯಕ್ಷ ಗುರುರಾಜ್ ಬಿ., ಕಾರ್ಯದರ್ಶಿ ಶ್ರೀಕಾಂತ ಎನ್., ಅರ್ಚಕ ಶಿವ ಜಿ.ಟಿ., ವಸಂತಿ, ನೇತ್ರಾವತಿ ಶಿರೂರು, ಜಯಂತಿ ಜಿ.ಟಿ. ಇನ್ನಿತರರು ಉಪಸ್ಥಿತರಿದ್ದರು.
ಮಹಿಳಾ ಸಂಘದ ಕಾರ್ಯದರ್ಶಿ ನಾಗಿಣಿ ಸ್ವಾಗತಿಸಿದರು. ಸುಮಿತ್ರಾ ಜಿ. ಕಾರ್ಯಕ್ರಮ ನಿರ್ವಹಿಸಿದರು. ಗಂಗಾ ಜಿ.ಟಿ. ವಂದಿಸಿದರು.