ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಹಿರಿಯ ಶಿಲ್ಪಿಗಳಾದ ಉಡುಪಿ ಹೆರ್ಗದ ನಾರಾಯಣ ಆಚಾರ್ಯ ಅವರನ್ನು ಅವರ ನಿವಾಸದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಪತ್ರಕರ್ತರ ವೇದಿಕೆ ಸಂಯುಕ್ತವಾಗಿ ಆಯೋಜಿಸಿದ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಸನ್ಮಾನಿಸಿದರು.
ಹಿರಿಯರು ಹಾಗೂ ಎಲೆಯ ಮರೆಯ ಕಾಯಿಯಂತೆ ಇರುವ ಪ್ರತಿಭಾವಂತರನ್ನು ಗುರುತಿಸುವ ಕೆಲಸ ನಿರಂತರವಾಗಿ ನಡೆಯುತ್ತಿರಲಿ. ನಾಡಿಗೆ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಹೊಸ ಕಲ್ಪನೆಯನ್ನು ನೀಡಿದ ಶೇಖರ ಅಜೆಕಾರು ಸದಾ ಹೊಸತನದ ಹುಡುಕಾಟದಲ್ಲಿರುವವರು ಎಂದು ಹರಿಕೃಷ್ಣ ಪುನರೂರು ಹೇಳಿದರು.
ಅವರು ಪ್ರಸಕ್ತ ಸಾಲಿನ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಅವರು ಅಧ್ಯಕ್ಷತೆ ವಹಿಸಿದ್ದರು. ಗುಲಾಬಿ ನಾರಾಯಣ ಆಚಾರ್ಯ, ಉದ್ಯಮಿ ಫೆರಲಾಯ್ ಭಾಸ್ಕರ ಆಚಾರ್ಯ, ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಪರ್ಕಳ ಸುಬ್ರಾಯ ಆಚಾರ್ಯ, ಖ್ಯಾತ ಕಲಾವಿದ ಪಿ. ಎನ್. ಆಚಾರ್ಯ, ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ. ನರಸಿಂಹ ಪಂಚನಬೆಟ್ಟು, ಗೋಪಾಲಾಚಾರ್ಯ, ವೆಂಕಟ್ರಮಣ ಆಚಾರ್ಯ, ರಾಘವೇಂದ್ರ ಪ್ರಭು ಕರ್ವಾಲೊ, ನರಸಿಂಹ ಮೂರ್ತಿ ರಾವ್ ಸಹಿತ ಗಣ್ಯರು ಉಪಸ್ಥಿತರಿದ್ದು ಅಭಿನಂದಿಸಿದರು. ಸಂಘಟಕ, ಸಮಿತಿಯ ರಾಜ್ಯಾಧ್ಯಕ್ಷ ಡಾ. ಶೇಖರ ಅಜೆಕಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಕಾರ್ಯಕಾರಣಿ ಸದಸ್ಯ ಸಂತೋಷ ಜೈನ್ ಎಣ್ಣೆಹೊಳೆ ವಂದಿಸಿದರು. ಮಕ್ಕಳು ಕುಟುಂಬಿಕರು ಬಂಧುಗಳು ಉಪಸ್ಥಿತರಿದ್ದರು.