ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ರಾಮೀಣ ಭಾಗದ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸ್ಪಂದಿಸುವ ಜೊತೆಗೆ ಸರಕಾರದ ಯೋಜನೆಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಹೇಳಿದರು.
ಅವರು ಶನಿವಾರ ಜಡ್ಕಲ್ ಗ್ರಾಮದ ಬಿಸಿನಪಾರೆಯ ಶ್ರೀ ಮೂಕಾಂಬಿಕಾ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಸರಕಾರದ ಸೌಲಭ್ಯಗಳಿಂದ ವಂಚಿತರಾದ ವಿಕಲಚೇತನರು, ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ಸಮಸ್ಯೆ ಪರಿಹಾರಕ್ಕೆ ಈ ಅಭಿಯಾನದಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು.

ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರಕಾರ ಕೈಗೊಂಡ ಈ ಅಭಿಯಾನ ಕೋವಿಡ್ ಎರಡನೇ ಅಲೆಯ ಬಳಿಕ ಮತ್ತೆ ಜಡ್ಕಲ್ ಗ್ರಾಮದಿಂದ ಆರಂಭಗೊಳ್ಳುತ್ತಿದ್ದು, ಕಂದಾಯ ಇಲಾಖೆಯ ಸಮಸ್ಯೆಗಳು, ಕೃಷಿ ಸಂಬಂಧಿತ ಯೋಜನೆಗಳ ಮಾಹಿತಿ ಸೇರಿದಂತೆ ಸರಕಾರದ ಉತ್ತಮ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲಾಗುತ್ತದೆ ಎಂದರು.
ಜಡ್ಕಲ್ ಗ್ರಾಮ ಜಿಲ್ಲಾ ಕೇಂದ್ರದಿಂದ ದೂರವಿರುವುದರಿಂದ ಈ ಗ್ರಾಮ ಆಯ್ದುಕೊಳ್ಳಲಾಗಿದೆ ಜೊತೆಗೆ ಜಡ್ಕಲ್ ಗ್ರಾಮ ಪಂಚಾಯತಿ ಈಗಾಗಲೇ ಉತ್ತಮ ಕೆಲಸ ಮಾಡುತ್ತಿದ್ದು ಅವರಿಗೆ ಜಿಲ್ಲಾಡಳಿತದಿಂದ ಬೆಂಬಲ ನೀಡುವ ಉದ್ದೇಶ ನಮ್ಮದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ., ಬೈಂದೂರು ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್., ಬೈಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭಾರತಿ, ಜಡ್ಕಲ್ ಗ್ರಾಪಂ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಲಕ್ಷ್ಮಣ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್, ಸಂಧ್ಯಾ ರಮೇಶ್, ಶೇಖರ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.

ಡಿಸಿಗೆ ಅದ್ದೂರಿ ಸ್ವಾಗತ:
ಜಡ್ಕಲ್ ಗ್ರಾಪಂಗೆ ಬೆಳಿಗ್ಗೆ 10ಗಂಟೆಗೆ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಗ್ರಾಮದ ಮಹಿಳೆಯರು ಪುಪ್ಪವೃಷ್ಟಿಯ ಮೂಲಕ ಸ್ವಾಗತಿಸಿದರು. ಜಡ್ಕಲ್ ಗ್ರಾಪಂ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ ಡಿಸಿ ಅವರನ್ನು ಬರಮಾಡಿಕೊಂಡರು. ಗ್ರಾಪಂನಲ್ಲಿ ಕೆಲ ಸಮಸ್ಯೆ ಕಳೆದ ಡಿಸಿ ಜಡ್ಕಲ್ ಹಾಗೂ ಮುದೂರು ಗ್ರಾಮದ ಬಗ್ಗೆ ಹಾಗೂ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಅಲ್ಲಿಂದ ಸುವರ್ಣ ಮಹೋತ್ಸವ ಆಚರಿಸಿಕೊಂಡ ಸೆಳ್ಕೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕೆಲ ಸಮಯ ಕಳೆದರು. ಜೊತೆಗೆ ಗ್ರೂಪ್ ಪೋಟೋ ತೆಗೆಸಿಕೊಂಡರು.
ಪ್ರತಿ ವಿದ್ಯಾರ್ಥಿಯೊಂದಿಗೂ ವೈಯಕ್ತಿಕವಾಗಿ ಮಾತನಾಡಿದ ಅವರು ಕೊರೋನಾ ಜಾಗೃತಿಯ ಬಗ್ಗೆ ಎಚ್ಚರಿಕೆ ನೀಡಿದ್ದಲ್ಲದೇ ಮಕ್ಕಳ ಓದು, ಆನ್ಲೈನ್ ಶಿಕ್ಷಣದ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ವಿದ್ಯಾರ್ಥಿಯೋರ್ವ ಶಾಲೆಯಲ್ಲಿ ಶಿಕ್ಷಕರ ಕೊರತೆಯ ಬಗ್ಗೆ ಡಿಸಿಯವರ ಗಮನ ಸೆಳೆದಿದ್ದು, ಸ್ಥಳದಲ್ಲಿದ್ದ ಬಿಇಓ ಅವರಿಗೆ ಸಮಸ್ಯೆ ಪರಿಹರಿಸಲು ಸೂಚಿಸಿದರು. ಮುಂದೆ ಜೀವನದಲ್ಲಿ ಏನಾಗುತ್ತಿರಿ ಎಂಬ ಜಿಲ್ಲಾಧಿಕಾರಿಯವರ ಪ್ರಶ್ನೆಗೆ ವಿದ್ಯಾರ್ಥಿಯೋರ್ವ ಸೈನಕನಾಗುತ್ತೇನೆ ಎಂದು ಉತ್ತರಿಸಿದ. ಇದಕ್ಕೆ ಖುಷಿಪಟ್ಟ ಅವರು ಜೊತೆಯಲ್ಲಿದ್ದ ಎಡಿಸಿ ಸದಾಶಿವ ಪ್ರಭು ಹಾಗೂ ಎಸಿ ರಾಜು ಅವರನ್ನು ತೋರಿಸಿ ಇವರು ಕೂಡ ನಿವೃತ್ತ ಯೋಧರಾಗಿದ್ದು, ಸೈನಿಕರಾಗಲು ಮಾಹಿತಿ ಅಗತ್ಯವಿದ್ದ ಪಡೆದುಕೊಳ್ಳಬಹುದು ಎಂದರು. ಶಾಲಾ ಕಛೇರಿಗೆ ಭೇಟಿ ನೀಡಿದ ಡಿಸಿ ಅವರಿಗೆ ಶಿಕ್ಷಕರು ಸ್ಮರಣ ಸಂಚಿಕೆ ನೀಡಿದರು. ಡಿಸಿ ಅವರು ಲಾಗ್ಬುಕ್ನಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದರು. ಬಳಿಕ ಆರೋಗ್ಯ ಕೇಂದ್ರ, ವಿಕಲಚೇತನರ ಯೋಜನೆಯ ಕಾರ್ಯಾಲಯಗಳಿಗೆ ಭೇಟಿ ನಿಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಇದನ್ನೂ ಓದಿ:
► ಉಡುಪಿ ಜಿಲ್ಲಾಧಿಕಾರಿಗಳ ನಡೆ, ಜಡ್ಕಲ್ ಗ್ರಾಮದ ಕಡೆ. ಜನರ ಅಹವಾಲು ಆಲಿಸಿದ ಡಿಸಿ ಕೂರ್ಮರಾವ್ ಎಂ. – https://kundapraa.com/?p=53686 .