ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳು ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳಬೇಕು ಹಾಗೆಯೇ ಜೀವನದಲ್ಲಿ ನಾವು ಎಂದೂ ಹಿಂದೇಟನ್ನು ಹಾಕದೇ ಧೈರ್ಯಶಾಲಿಗಳಾಗಿ ಬದುಕಬೇಕು. ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಕರ ಹಾಗೂ ಪೋಷಕರ ಜವಾಬ್ದಾರಿಯಾಗಿದೆ ಎಂದು ಬಸ್ರೂರು ಶ್ರೀ ಶಾರದ ಕಾಲೇಜಿನ ಉಪನ್ಯಾಸಕರಾದ ಅಕ್ಷಯ ಹೆಗ್ಡೆ ಮೊಳಹಳ್ಳಿ ತಿಳಿಸಿದರು.
ಅವರು ಇಲ್ಲಿನ ತೆಕ್ಕಟ್ಟೆಯ ವಿಶ್ವ ವಿನಾಯಕ ಸಿ.ಬಿ.ಎಸ್ಇ ಸ್ಕೂಲ್ನಲ್ಲಿ ಯು.ಕೆ.ಜಿ. ಮಕ್ಕಳ ಗ್ರಾಜ್ಯುಯೇಶನ್ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಪ್ರಾರಂಭಿಕ ಬೆಳವಣಿಗೆ ಹಾಗೂ ಕಲಿಕೆಯಲ್ಲಿ ಹೆತ್ತವರ ಪಾತ್ರ ಮಹತ್ತರವಾಗಿರುತ್ತದೆ. ಮಕ್ಕಳ ಸೂಕ್ಷ್ಮ ಮನಸ್ಸಿನ ಬೆಳವಣಿಗೆಗೆ ಉತ್ತಮ ವಾತಾವರಣ ಕಲ್ಪಿಸಿ ಕೊಡುವುದು ಪೋಷಕರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಶುಭ ಕೋರಿ ಪೋಷಕರ ಸಹಕಾರವನ್ನು ಸ್ಮರಿಸಿದರು
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಶಾಲಾ ಸಿಬಂದ್ದಿಯವರು ಉಪಸ್ಥಿತರಿದ್ದರು.
ಸೆಲ್ಫಿ ಕಾರ್ನರ್ ಹಾಗೂ ಎಲ್.ಕೆ.ಜಿ, ಯು.ಕೆ.ಜಿ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಗಳ ವಸ್ತು ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು.
ಪ್ರಾಂಶುಪಾಲ ನಿತಿನ್ ಡಿ ಆಲ್ಮೇಡಾ ಅವರು ಸ್ವಾಗತಿಸಿ ಪರಿಚಯಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿ, ವಿಲಾಸಿನಿ ಶೆಟ್ಟಿ ವಂದಿಸಿದರು.