ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ತಾಲೂಕು ಕಚೇರಿಯಲ್ಲಿ ಬೈಂದೂರು ಹೋಬಳಿಗೆ ಸಂಬಂಧಿಸಿದಂತೆ 94 ಸಿ ಅಡಿ ಅರ್ಜಿ ಹಾಕಿರುವವರಿಗೆ ಶೀಘ್ರವಾಗಿ ಹಕ್ಕು ಪತ್ರ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಹಂತದಲ್ಲಿ ಇರುವ ಅರ್ಜಿಗಳಿಗೆ ಸಕಾರಾತ್ಮಕ ವರದಿ ಮಾಡಬೇಕು ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಅವರು ಇಲ್ಲಿನ ತಾಲೂಕು ಕಛೇರಿಯಲ್ಲಿ ಅರ್ಹ ಪಲಾಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿ, ತಾಲೂಕು ಕಚೇರಿಯಲ್ಲೂ ಹಲವು ಅರ್ಹ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು ಅದನ್ನು ಈ ಮಾಸಾಂತ್ಯದೊಳಗೆ ವಿಲೇಗೊಳಿಸಿ ಬೈಂದೂರು ಹೋಬಳಿಯಲ್ಲಿ ಶೂನ್ಯ ಅರ್ಹ 94 ಸಿ ಅರ್ಜಿ ಇರುವಂತೆ ಎಲ್ಲಾ ಹಂತದ ಅಧಿಕಾರಿಗಳು ಆಸಕ್ತಿ ವಹಿಸಿ ಶ್ರಮಿಸಬೇಕು ಎಂದರು.

ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜೊತೆ ಪ್ರತಿ ಪಂಚಾಯತ್ ಭೇಟಿ ನೀಡಿ ಅಲ್ಲಿನ ಜನರಿಂದಲೇ ಅಹವಾಲು ಪಡೆದು 94 ಸಿ ಗೆ ಸಂಬಂಧಿಸಿದಂತೆ ಯಾವೊಬ್ಬ ಅರ್ಹ ಫಲಾನುಭವಿಗಳು ಹಕ್ಕು ಪತ್ರ ವಂಚಿತರಾಗದೇ ಇರುವ ಬಗ್ಗೆ ಖಾತ್ರಿ ಪಡಿಸಿ ಅರ್ಹರಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಬೈಂದೂರು ತಾಲೂಕು ಉಪ ತಹಶೀಲ್ದಾರರಾದ ಗಿರಿಜಾ, ಲತಾ, ಕಂದಾಯ ನೀರಿಕ್ಷಕರಾದ ರವಿ ಶಂಕರ್ ಹಾಗೂ ಬೈಂದೂರು ತಾಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.