ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ – 2025 ಕೈಗೊಂಡು ಎಲ್ಲಾ ವರ್ಗದವರಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಒದಗಿಸುವುದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಉದ್ದೇಶವಾಗಿದೆ. ಎಲ್ಲಾ ಕಾಲದಲ್ಲಿಯೂ ಎಲ್ಲಾ ವರ್ಗದ ಸಮುದಾಯಗಳಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಸರ್ಕಾರದ ಪ್ರಮುಖ ಧ್ಯೇಯವಾಗಿದೆ.
ಸಂವಿಧಾನದ 341ನೇ ವಿಧಿಯ ಅಡಿಯಲ್ಲಿ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳನ್ನು ಗುರುತಿಸಲಾಗಿರುತ್ತದೆ. ಮೀಸಲಾತಿಯ ಪ್ರಯೋಜನವು ಎಲ್ಲಾ ಜಾತಿಗಳಿಗೆ ಸಮಾನವಾಗಿ ತಲುಪುವಂತೆ ಮಾಡಲು ಪರಿಶಿಷ್ಟ ಜಾತಿಗಳ ವರ್ಗಿಕರಣಕ್ಕಾಗಿ ಹಲವಾರು ವರ್ಷಗಳಿಂದ ಬೇಡಿಕೆಯಿರುತ್ತದೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಭಾರತದ ಸಂವಿಧಾನದ ಅನುಚ್ಛೇದ 15(4) ಮತ್ತು 16(4) ರ ಅಡಿಯಲ್ಲಿ ಶಿಕ್ಷಣ ಮತ್ತು ರಾಜ್ಯ ಸರ್ಕಾರದ ಅಧೀನದ ಸೇವೆಗಳಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸುವ ಬಗ್ಗೆ ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿಗಳ ಒಳ ವರ್ಗಿಕರಣ ಮಾಡಬಹುದಾಗಿದೆ ಎಂದು State of Punjab and Others v/s Devinder Singh and Others ಪ್ರಕರಣದಲ್ಲಿ ದಿನಾಂಕ: 01-08-2024 ರಂದು ತೀರ್ಪು ನೀಡಿರುತ್ತದೆ.
ಅದರಂತೆ, ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಗಳ ವಿವಿಧ ಉಪ ಗುಂಪುಗಳಲ್ಲಿ ಪ್ರಾತಿನಿಧ್ಯತೆ ಕುರಿತು Emperical Data ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ (ಉಪ ವರ್ಗೀಕರಣ) ಬಗ್ಗೆ ವರದಿ ಸಲ್ಲಿಸಲು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಡಾ. ಹೆಚ್. ಎನ್. ನಾಗಮೋಹನ್ ದಾಸ್ ಇವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ಸರ್ಕಾರವು ರಚಿಸಿದೆ.
ಈ ನಿಟ್ಟಿನಲ್ಲಿ ಸರ್ಕಾರವು 2024ನೇ ಡಿಸೆಂಬರ್ 13ರಂದು ಸೂಕ್ತ ನಿಯಮ ಹಾಗೂ ಮಾರ್ಗಸೂಚಿಗಳನ್ನು ಸಹ ನಿಗದಿಪಡಿಸಿ ಆದೇಶ ಹೊರಡಿಸಲಾಗಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಲಭ್ಯವಿರುವ ದತ್ತಾಂಶ ಮತ್ತು 2011ರ ಜನಗಣತಿಯನ್ನು ಪರಿಗಣಿಸಿ, ವೈಜ್ಞಾನಿಕವಾಗಿ ತರ್ಕಬದ್ಧ ಒಳ ಮೀಸಲಾತಿ (ಉಪ-ವರ್ಗೀಕರಣ) ಮತ್ತು ಪರಿಶಿಷ್ಟ ಜಾತಿಗಳಲ್ಲಿ ಸಮಾನ ಜಾತೀಯ (Homogeneous) ಉಪ-ಜಾತಿಗಳ ಗುಂಪುಗಳನ್ನು ಒಟ್ಟುಗೂಡಿಸುವ ಬಗ್ಗೆ ಪರಿಶೀಲಿಸುವುದು.
ರಾಜ್ಯದ ಸಾರ್ವಜನಿಕ ಸೇವೆಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಗಳಲ್ಲಿ ಪ್ರಾತಿನಿಧ್ಯದ ಅಸಮರ್ಪಕತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯದಲ್ಲಿನ ಪರಿಶಿಷ್ಟ ಜಾತಿಗಳ ವಿವಿಧ ಉಪ ಗುಂಪುಗಳಲ್ಲಿ ಅಂತರ್ ಹಿಂದುಳಿದಿರುವಿಕೆಯನ್ನು (Inter-se backwardness) ಗುರುತಿಸಲು Empirical data ಸಂಗ್ರಹಿಸುವುದು.
ಕರ್ನಾಟಕ ರಾಜ್ಯದಲ್ಲಿನ ಪರಿಶಿಷ್ಟ ಜಾತಿಗಳ ವಿವಿಧ ಉಪ ಗುಂಪುಗಳಲ್ಲಿ ಅಂತರ್ಹಿಂದುಳಿದಿರುವಿಕೆ (Inter-se backwardness) ಹಾಗೂ ಪ್ರಾತಿನಿಧ್ಯತೆಯ ಆಧಾರದ ಮೇಲೆ ಸೂಕ್ತ ಒಳ ಮೀಸಲಾತಿ (ಉಪ-ವರ್ಗೀಕರಣ) ಮಾಡುವ ಬಗ್ಗೆ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸುವ ಬಗ್ಗೆ ಪರಿಶೀಲಿಸುವುದು.
ಆಯೋಗವು ಅಗತ್ಯವಿದ್ದಲ್ಲಿ ತನ್ನ ವಿವೇಚನೆಯಂತೆ ಮತ್ತು ಅಂತರ್ಹಿಂದುಳಿದಿರುವಿಕೆಯ ಬಗ್ಗೆ ಇನ್ನಿತರ ಸೂಕ್ತ ದತ್ತಾಂಶಗಳು (Empirical data) ಲಭ್ಯವಿದ್ದಲ್ಲಿ ಸಂಗ್ರಹಿಸಬಹುದು.
ಪರಿಶಿಷ್ಟ ಜಾತಿಯೊಳಗಿನ ವಿವಿಧ ಉಪ ಗುಂಪುಗಳ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ವಿವಿಧ ಸಮಸ್ಯೆಗಳನ್ನು ಪರಿಶೀಲಿಸುವ ಬಗ್ಗೆ ಮತ್ತು ಮಾನ್ಯ ಸರ್ವೋಚ್ಛ ನ್ಯಾಯಾಲಯವು (ಪಂಜಾಬ್ ರಾಜ್ಯ ಮತ್ತು ಇತರರ ವಿರುದ್ಧ ದೇವಿಂದರ್ ಸಿಂಗ್ ಮತ್ತು ಇತರರು ಸಿವಿಲ್ ಮೇಲ್ಮನವಿ ಸಂಖ್ಯೆ: 2317/2011ರ ದಿನಾಂಕ:01-08-2024ರ ಪ್ರಕರಣದಲ್ಲಿ) ನೀಡಿರುವ ತೀರ್ಪಿನ ಅನ್ವಯ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ (ಉಪ-ವರ್ಗೀಕರಣ) ಬಗ್ಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ವಿಧಾನ ಬಗ್ಗೆ ಪರಿಶೀಲಿಸುವುದು.
ಮೀಸಲಾತಿ ನೀತಿಗಳ ಪ್ರಯೋಜನವನ್ನು ಪರಿಶಿಷ್ಟ ಜಾತಿಗಳ ವಿವಿಧ ಉಪ ಗುಂಪುಗಳ ನಡುವೆ ಸಮಾನವಾಗಿ ಪಡೆಯಲಾಗುತ್ತಿದೆಯೇ ಎಂಬುದರ ಬಗ್ಗೆ ಪರಿಶೀಲಿಸುವುದು ಮತ್ತು ಮೇಲ್ಕಂಡ ಎಲ್ಲಾ ಅಂಶಗಳ ಬಗ್ಗೆ ಕೈಗೊಳ್ಳಬಹುದಾದ ಇತರ ಕ್ರಮಗಳ ಕುರಿತು ನಿರ್ದಿಷ್ಟ ಶಿಫಾರಸ್ಸುಗಳೊಂದಿಗೆ ವರದಿಯನ್ನು ಸಲ್ಲಿಸುವುದು.
ದಿನಾಂಕ: 04-01-2025 ರಿಂದ 26-03-2025 ರವರೆಗೂ ಒಳಮೀಸಲಾತಿಯ ಬಗ್ಗೆ ಒಟ್ಟು 4034 ಅಹವಾಲುಗಳು/ಮನವಿಗಳ (ಇ-ಮೇಲ್/ಮುದ್ದಾಂ/ಅಂಚೆ ಮೂಲಕ) ಹಾಗೂ ಸಲಹೆಗಳನ್ನು ಆಯೋಗವು ಸ್ವೀಕರಿಸಿದ್ದು, ಸದರಿ ಮನವಿ/ ಅಹವಾಲುಗಳನ್ನು ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ ಗೌರವಾನ್ವಿತ ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನದಾಸ್ ಏಕ ಸದಸ್ಯ ವಿಚಾರಣಾ ಆಯೋಗವು ದಿನಾಂಕ: 27-03-2025 ರಂದು ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ, ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ದತ್ತಾಂಶವನ್ನು (Emperical Data) ಸಂಗ್ರಹಣೆಗೆ ಸಮೀಕ್ಷೆಯನ್ನು ನಡೆಸಲು ಶಿಫಾರಸ್ಸು ಮಾಡಿರುತ್ತದೆ. ಅದರಂತೆ ವೈಜ್ಞಾನಿಕ ದತ್ತಾಂಶ ಸಂಗ್ರಹಣೆಗೆ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿರುತ್ತದೆ.
2011ರ ಜನಗಣತಿಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ನಮೂದಿಸಿರುವ ಜಾತಿಗಳ ಮೂಲಜಾತಿಗಳ ಸಂಖ್ಯೆಯ ಮಾಹಿತಿ ಇಲ್ಲದೆ ಇರುವುದರಿಂದ ಮಾದಿಗ ಸಂಬಂಧಿತ ಜಾತಿಗಳ ಸಂಖ್ಯೆ ಮತ್ತು ಹೊಲೆಯ ಸಂಬಂಧಿತ ಜಾತಿಗಳ ಸಂಖ್ಯೆಯನ್ನು ವರ್ಗೀಕರಿಸಲು ಸಾಧ್ಯವಾಗಿರುವುದಿಲ್ಲ.
ಪರಿಶಿಷ್ಟ ಜಾತಿಗಳ ಬಗ್ಗೆ ನಮೂದಿಸಿರುವ ಜನಸಂಖ್ಯೆಯನ್ನು ಒಳಮೀಸಲಾತಿಯ ವರ್ಗೀಕರಣದಲ್ಲಿ ಯಾವ ಗುಂಪಿಗೆ ಸೇರಿಸಬೇಕು ಎಂಬುವದರ ಬಗ್ಗೆ ಯಾವ ವರದಿಯಲ್ಲೂ ಉಲ್ಲೇಖವಿಲ್ಲ ಮತ್ತು ಈ ಸಮುದಾಯವನ್ನು ವರ್ಗೀಕರಣದಲ್ಲಿ ಪರಿಗಣಿಸಿಲ್ಲ. 2011ರ ಜನಗಣತಿಯಲ್ಲಿ ಇವರ ಉಪಜಾತಿಗಳ ವಿವರಗಳು ಲಭ್ಯವಿಲ್ಲ ಆದ್ದರಿಂದ ಹೊಸ ಸಮೀಕ್ಷೆಯನ್ನು ಕೈಗೊಂಡು ಇವರ ಮೂಲಜಾತಿಗಳನ್ನು ದಾಖಲಿಸಿಕೊಂಡು ಒಳಮೀಸಲಾತಿ ವರ್ಗೀಕರಣವನ್ನು ಮಾಡಬೇಕೆಂದು ಆಯೋಗವು ಶಿಫಾರಸ್ಸು ಮಾಡಿರುತ್ತದೆ.
ಸಮೀಕ್ಷೆಯಲ್ಲಿ ಗಮನಿಸಬೇಕಾದ ಅಂಶ:
ಆದಿ ಕರ್ನಾಟಕ ಆದಿ, ದ್ರಾವಿಡ ಮತ್ತು ಆದಿ ಆಂಧ್ರ ಎಂದು ಸಮೀಕ್ಷಾ ಸಮಯದಲ್ಲಿ ನಮೂದಿಸಿರುವ ಎಲ್ಲರೂ ತಮ್ಮ ತಮ್ಮ ಮೂಲ ಜಾತಿಗಳನ್ನು ನಮೂದಿಸಬೇಕೆಂದು ತಿಳಿಸಬೇಕಾಗಿದೆ. ಇದು ಸಮೀಕ್ಷೆಯ ಒಂದು ಮುಖ್ಯ ಉದ್ದೇಶವಾಗಿರುತ್ತದೆ.
ಮೊಬೈಲ್ ಆಪ್ನ್ನು ಬಳಸುತ್ತಿರುವ ಉದ್ದೇಶ ಹಾಗೂ ಇ-ಆಡಳಿತ ಇಲಾಖೆಯು ಅಭಿವೃದ್ಧಿಪಡಿಸಿರುವ ತಂತ್ರಾಂಶದಲ್ಲಿ ಮಾಹಿತಿ ಸಂಗ್ರಹಿಸುತ್ತಿರುವುದರಿಂದ ಇರುವ ಅನುಕೂಲಗಳು:
ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಬಹುದು. ಸಂಗ್ರಹಿಸಿರುವ ಮಾಹಿತಿಯನ್ನು ಅಧಿಕೃತವಾಗಿ ಪರಿಶೀಲಿಸಿ ಅಂತಿಮಗೊಳಿಸುವುದು. ವೈಜ್ಞಾನಿಕವಾದ ದತ್ತಾಂಶಗಳನ್ನು ಸಂಗ್ರಹಿಸಬಹುದು. ಈಗಾಗಲೇ ಇರುವ ದತ್ತಾಂಶಗಳನ್ನು ಬಳಸಿಕೊಂಡು ಸಮೀಕ್ಷೆಯನ್ನು ಕೈಗೊಳ್ಳಬಹುದು (ಕುಟುಂಬ, ಆಧಾರ್), ಕಡಿಮೆ ಕಾಲಾವಕಾಶ ತೆಗೆದು ಕೊಂಡು ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗುವುದು. ಸಂಗ್ರಹಿಸಿದ ಮಾಹಿತಿಯನ್ನು ವಿವಿಧ ಹಂತಗಳಲ್ಲಿ ಪರಿಶೀಲಿಸಿ ಪರೀಕ್ಷಿಸಿ ಅಂತಿಮಗೊಳಿಸಬಹುದು
ಸಂಗ್ರಹಿಸಿರುವ ಮಾಹಿತಿಯ ವರ್ಗೀಕರಣ ಮತ್ತು ವಿಶ್ಲೇಷಣೆ ಸ್ಪಷ್ಟವಾಗಿರುತ್ತದೆ ಮತ್ತು ಕಡಿಮೆ ಕಾಲಾವಧಿಯಲ್ಲಿ ವರ್ಗೀಕರಿಸಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಯೋಜನೆಗಳನ್ನು ರೂಪಿಸಲು ಮತ್ತು ಜನರ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಲು ಇದು ಸಹಾಯವಾಗುತ್ತದೆ. ಸಂಗ್ರಹಿಸುವ ಮಾಹಿತಿ ಸಂಕ್ಷಿಪ್ತವಾಗಿರಬೇಕು. ನಿರ್ದಿಷ್ಟವಾಗಿರಬೇಕು. ಅವಶ್ಯಕತೆ ಇರುವ ಮಾಹಿತಿಯನ್ನು ಮಾತ್ರ ಸಂಗ್ರಹಿಸಬೇಕು.
ಏಕಕಾಲದಲ್ಲಿ ಸಮೀಕ್ಷೆಯನ್ನು ಪ್ರಾರಂಭಿಸಿ, ನಿರ್ದಿಷ್ಟ ಕಾಲಮಿತಿಯಲ್ಲಿ ಪೂರ್ಣಗೊಳಿಸಬಹುದು. ಮಾಹಿತಿಯನ್ನು ಸಂಗ್ರಹಿಸಲು ನೇಮಿಸುವ ಮಾಹಿತಿ ಸಮೀಕ್ಷಾದಾರರಿಗೆ ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ, ವಾರ್ಡ್ ಮಟ್ಟದಲ್ಲಿ ತರಬೇತಿಗಳನ್ನು ಆಯೋಜಿಸಲಾಗುತ್ತದೆ.
ಈ ಸಮೀಕ್ಷೆಯ ಉದ್ದೇಶ, ಹಾಗೂ ಈ ತಂತ್ರಾಂಶವನ್ನು ಬಳಸುವ ವಿಧಾನವನ್ನು ಕುರಿತು ತರಬೇತಿ ನೀಡಿ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವಂತೆ ಮತ್ತು ಸಂಗ್ರಹಿಸಬೇಕಾದಂತಹ ಮಾಹಿತಿಯ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟು ಮಾಹಿತಿಯನ್ನು ಸಂಗ್ರಹಿಸಲು ತರಬೇತಿಯನ್ನು ನೀಡಲಾಗುತ್ತಿದೆ.
ಸಮೀಕ್ಷಾ ಪ್ರಕ್ರಿಯಾ ವಿಧಾನ:
ಪ್ರಶ್ನಾವಳಿಗಳನ್ನು ಗೌರವಾನ್ವಿತ ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನದಾಸ್ ಏಕ ಸದಸ್ಯ ವಿಚಾರಣಾ ಆಯೋಗವು ಸಿದ್ದಪಡಿಸಿದ್ದು ಈ ಪ್ರಶ್ನಾವಳಿಯನ್ನು ಇಆಅS ಇ-ಗವರ್ನೆನ್ಸ್ ಇಲಾಖೆಯವರು ಆಂಡ್ರಾಯ್ಡ್ ಮೊಬೈಲ್ ಆಪ್ ಮೂಲಕ ಮಾಹಿತಿಯನ್ನು ಸಂಗ್ರಹಿಸಲು ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿರುತ್ತಾರೆ.
ಸಮೀಕ್ಷೆಯನ್ನು BLO Model ನಂತೆ ಜಿಲ್ಲೆಗಳ ಜಿಲ್ಲಾಧಿಕಾರಿಗಳು 58932 ಪ್ರಮುಖವಾಗಿ ಶಿಕ್ಷಕರನ್ನು ಸಮೀಕ್ಷಾದಾರರಾಗಿ (Enumerators) ನೇಮಿಸಿ ಆದೇಶ ಹೊರಡಿಸಿರುತ್ತಾರೆ. ಪ್ರತಿ 10-12 ಸಮೀಕ್ಷೆದಾರರಿಗೆ (Enumerators) ಒಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಸದರಿ ಸಮೀಕ್ಷೆದಾರರು (Enumerators) ಮನೆ-ಮನೆಗೆ ತೆರಳಿ Android Mobile App ನಲ್ಲಿ ಅಳವಡಿಸಿರುವ ತಂತ್ರಜ್ಞಾನದ ಮೂಲಕ ಸಮೀಕ್ಷೆಯನ್ನು ನಡೆಸುವ ಸಂದರ್ಭದಲ್ಲಿ ಸಮೀಕ್ಷಾದಾರರಿಗೆ, ಪ.ಜಾತಿ ಜನಾಂಗದವರು ತಮ್ಮ ಜಾತಿ/ಮೂಲ ಜಾತಿ/ಶಿಕ್ಷಣ/ಉದ್ಯೋಗ/ರಾಜಕೀಯ/ಸಾಮಾಜಿಕ ಹಾಗೂ ಆರ್ಥಿಕ ಇತ್ಯಾದಿ ಮಾಹಿತಿಯನ್ನು ನೀಡಿ ಸಮೀಕ್ಷೆಗೆ ಸಹಕರಿಸುವುದು ಬಹಳ ಮುಖ್ಯವಾಗಿರುತ್ತದೆ. ಇದರಿಂದ ಅವರಿಗೆ ಮುಂದೆ ಒಳ ಮೀಸಲಾತಿ ಪ್ರಯೋಜನೆಯನ್ನು ಪಡೆಯುವಲ್ಲಿ ಸಹಾಯಕವಾಗುತ್ತದೆ.
2025ನೇ ಏಪ್ರಿಲ್ 9ರ ಸರ್ಕಾರದ ಆದೇಶದಲ್ಲಿ ರಾಜ್ಯ/ಜಿಲ್ಲಾ/ತಾಲ್ಲೂಕು ಮಟ್ಟದ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗಿಕರಣ ಕುರಿತು ಸಮೀಕ್ಷೆ ಕೈಗೊಳ್ಳುವ ಸಂಬಂಧ ಸಮನ್ವಯ ಸಮಿತಿಗಳನ್ನು ರಚಿಸಿ ಇವುಗಳ ಮೇಲುಸ್ತುವಾರಿಯಲ್ಲಿ ಈ ಕೆಳಕಂಡ ಮೂರು ಹಂತಗಳಲ್ಲಿ ಸಮೀಕ್ಷೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
ಮೊದಲನೇ ಹಂತ:
ದಿನಾಂಕ: ಮೇ.5 ರಿಂದ ಮೇ.17 ರವರೆಗೆ ಮನೆ – ಮನೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ.
ಎರಡನೇ ಹಂತ:
ದಿನಾಂಕ: ಮೇ.19 ರಿಂದ ಮೇ.21 ರವರೆಗೆ ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ.
ಮೂರನೇ ಹಂತ:
ದಿನಾಂಕ: ಮೇ.19 ರಿಂದ ಮೇ.23 ರವರೆಗೆ ಆನ್ಲೈನ್ ಮೂಲಕ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಸಮೀಕ್ಷೆಗೆ ಸುಮಾರು 25 ಲಕ್ಷ ಪರಿಶಿಷ್ಟ ಜಾತಿ ಕುಟುಂಬಗಳು ಇರಬಹುದೆಂದು ಅಂದಾಜಿಸಲಾಗಿದೆ.
ಸಮೀಕ್ಷೆಯ ಉದ್ದೇಶಕ್ಕಾಗಿ ಈಗಾಗಲೇ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ ಗಳನ್ನು ಗುರುತಿಸಿ ದಿನಾಂಕ: 25.04.2025 ರಂದು ರಾಜ್ಯ ಮಟ್ಟದಿಂದ ತರಬೇತಿ ನೀಡಲಾಗಿರುತ್ತದೆ. ಹಾಗೂ ತಾಲ್ಲೂಕು ಮಟ್ಟದ ಮಾಸ್ಟರ್ ಟ್ರೈನರ್ ಗಳಿಗೆ ಜಿಲ್ಲಾ ಮಟ್ಟದಲ್ಲಿ ದಿನಾಂಕ: 28.04.2025 ರಂದು ತರಬೇತಿ ನೀಡಲಾಗಿರುತ್ತದೆ.
ಸಮೀಕ್ಷೆಗೆ ನೇಮಕವಾಗಿರುವ ಸುಮಾರು 65,000 ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಸಮೀಕ್ಷೆಯ ಕುರಿತು ದಿನಾಂಕ: ಮೇ.2 ಮತ್ತು ಮೇ.3 ರಂದು ತಾಲ್ಲೂಕು ಮಟ್ಟದಲ್ಲಿ ತರಬೇತಿಯನ್ನು ನೀಡಲಾಗಿರುತ್ತದೆ. ಮತ್ತು ಎಲ್ಲಾ ಸಮೀಕ್ಷಾದಾರರಿಗೆ ಸಮೀಕ್ಷಾ ಕೈಪಿಡಿ ಮತ್ತು ಸಮೀಕ್ಷಾ ಕಿಟ್ಗಳನ್ನು ಒದಗಿಸಲು ಕ್ರಮವಹಿಸಲಾಗುತ್ತಿದೆ.
ಮಾಹಿತಿಯನ್ನು ವೈಜ್ಞಾನಿಕವಾಗಿ ಕಡಿಮೆ ಅವಧಿಯಲ್ಲಿ ಪಡೆಯುವ ಉದ್ದೇಶದಿಂದ ಇ-ಆಡಳಿತ ಇಲಾಖೆಯು ಅಭಿವೃದ್ಧಿ ಪಡಿಸಿರುವ ಅಂಡ್ರಾಯಿಡ್ ಆಧಾರಿತ ಮೊಬೈಲ್ ಆಪ್ ಮೂಲಕ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ.
ಸಮೀಕ್ಷೆ ನಡೆಸುವ ಎಲ್ಲಾ ಗಣತಿದಾರರ ಮೊಬೈಲ್ ಸಂಖ್ಯೆಗಳನ್ನು ಅಂಡ್ರಾಯಿಡ್ ಆಧಾರಿತ ಮೊಬೈಲ್ ಆಪ್ ಮುಖಾಂತರ ವೈಟ್ಲಿಸ್ಟಿಂಗ್ ಮಾಡಲಾಗಿದ್ದು, ಈ ಮೊಬೈಲ್ ನಂಬರ್ಗಳನ್ನು ಹೊರತುಪಡಿಸಿ ಇತರೆ ಮೊಬೈಲ್ ನಂಬರ್ ಮುಖೇನ ಸಮೀಕ್ಷೆಯನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಸಮೀಕ್ಷೆಯನ್ನು ಪಾರದರ್ಶಕವಾಗಿ ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆ.
ಸಮೀಕ್ಷೆಯಲ್ಲಿ ಕುಟುಂಬ ತಂತ್ರಾಂಶದಿಂದ ಡಾಟಾಬೇಸ್ (ಪಡಿತರ ಚೀಟಿ) ನಲ್ಲಿರುವ ದತ್ತಾಂಶಗಳನ್ನು ಬಳಸಿಕೊಂಡು ಮಾಹಿತಿ ಸಂಗ್ರಹಿಸುತ್ತಿರುವುದರಿಂದ, ವೈಜ್ಞಾನಿಕವಾದ ದತ್ತಾಂಶಗಳನ್ನು ಪಡೆಯಲು ಸಹಕಾರಿಯಾಗಿದೆ.
ಮೂಬೈಲ್ ಆಪ್ನಲ್ಲಿರುವ ಸಮೀಕ್ಷಾ ಪ್ರಶ್ನಾವಳಿಯಲ್ಲಿ 42 ಪ್ರಶ್ನೆಗಳಿದ್ದು, ಇದರಲ್ಲಿ ಕೌಟುಂಬಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ವಿಷಯಗಳನ್ನೊಳಗೊಂಡಂತೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಈ ಮಾಹಿತಿಯು ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ವಿವಿಧ ಜಾತಿಗಳ ಸ್ಥಿತಿಗತಿ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಪ್ರಾತಿನಿದ್ಯತೆ ಬಗ್ಗೆ ದತ್ತಾಂಶವನ್ನು ನೀಡುತ್ತದೆ. ಇದರಿಂದಾಗಿ ವೈಜ್ಞಾನಿಕವಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ ವರ್ಗಿಕರಣಕ್ಕಾಗಿ ಅನುಕೂಲಕರವಾಗಲಿದೆ.
ಸಮೀಕ್ಷೆಯನ್ನು ಕೈಗೊಳ್ಳಲು ಮೈಬೈಲ್ ಆಪ್ ಬೆಳಿಗ್ಗೆ 6:30 ರಿಂದ ಸಂಜೆ 6:30 ರವರೆಗೆ ಎನೇಬಲ್ (enabeled) ಮಾಡಲಾಗಿರುತ್ತದೆ. ಸದರಿ ಅವಧಿಯಲ್ಲಿ ಗಣತಿದಾರರು ಮನೆಗಳಿಗೆ ಭೇಟಿ ನೀಡಲಿದ್ದು, ಸಾರ್ವಜನಿಕರು/ಕುಟುಂಬದವರು ತಮ್ಮ ಜಾತಿಯ ಕುರಿತು ಮಾಹಿತಿಯನ್ನು ನೀಡಲು ಸಹಕರಿಸಿ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸಲು ಹಾಗೂ ಮನೆ-ಮನೆ ಸಮೀಕ್ಷೆ ಕೈಗೊಂಡ ಸಂದರ್ಭದಲ್ಲಿ ಮಾಹಿತಿ ಒದಗಿಸಲು ಸಾಧ್ಯವಾಗದೇ ಇರುವ ಪರಿಶಿಷ್ಟ ಜಾತಿಯ ಕುಟುಂಬದವರು ಸ್ವಯಂಪ್ರೇರಿತವಾಗಿ ವಿಶೇಷ ಶಿಬಿರಗಳಲ್ಲಿ ಭಾಗವಹಿಸಿ ಮಾಹಿತಿಯನ್ನು ಒದಗಿಸಬಹುದಾಗಿದೆ.
ಸಹಾಯವಾಣಿ:
ಜಿಲ್ಲಾ ಮಟ್ಟದ ಸಹಾಯವಾಣಿ ಸ್ಥಾಪಿಸತಕ್ಕದ್ದು, ನಗರ ಪ್ರದೇಶದಲ್ಲಿ ಇ-ಆಡಳಿತ ಇಲಾಖೆಯ ಡಿ.ಪಿ.ಎಂ ಗಳ ಸಹಾಯವಾಣಿಯನ್ನು ಸ್ಥಾಪಿಸಬೇಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆರ್.ಡಿ.ಪಿ.ಆರ್. ಸಹಾಯವಾಣಿಯನ್ನು ಬಳಸಬಹುದು. ಇದರಲ್ಲಿ ಎಫ್.ಎ.ಕ್ಯೂ ಗಳನ್ನು ತಯಾರಿಸಲಾಗುವುದು ಹಾಗೂ ಎಫ್.ಎ.ಕ್ಯೂ ಗಳಲ್ಲಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಲಾಗುವುದು.
ರಾಜ್ಯ ಮಟ್ಟದ ಸಹಾಯವಾಣಿ ಸಂಖ್ಯೆ: 9481359000 ಈ ಸಹಾಯವಾಣಿ ಈಗಾಗಲೇ ಚಾಲ್ತಿಯಲ್ಲಿರುತ್ತದೆ. ಇದಲ್ಲದೆ ಇತರೆ ಯಾವುದೇ ಸಂದೇಹಗಳಿದ್ದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ ಅಥವಾ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ