ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಣುರೇಣುತೃಣಕಾಷ್ಠ ಗೋವಿಂದ ಎಂಬಂತೆ ವಿಶೇಷತೆಯನ್ನು ಕಾಣುವ ಪ್ರತಿಯೊಂದು ವಸ್ತುವನ್ನೂ ಪೂಜಿಸುವ ಸಂಸ್ಕೃತಿ ಭಾರತದ್ದು. ಅದರಂತೆ ದಿನಾಂಕ ಉತ್ಥಾನ ದ್ವಾದಶಿಯ ಪರ್ವಸಮಯದಲ್ಲಿ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ತುಳಸಿಯ ಕಟ್ಟೆಯಲ್ಲಿ ಕಾರ್ತಿಕದಾಮೋದರನ ಪೂಜೆಯನ್ನು ಸಡಗರದಿಂದ ಆಚರಿಸಲಾಯಿತು.
ಈ ಸಮಯದಲ್ಲಿ ಶಾಲೆಯ ವಿದ್ಯಾರ್ಥಿಗಳು ದೀಪಗಳನ್ನು ಬೆಳಗಿಸಿ, ತುಳಸಿ ಮತ್ತು ಕಾರ್ತಿಕ ದಾಮೋದರರನ್ನು ಭಜನೆಗಳ ಮೂಲಕ ಆರಾಧಿಸಿದರು. ಶ್ರೀನಿವಾಸ ಶೇಟ್ ಕುಂದಾಪುರ ತಮ್ಮ ಸಿರಿಕಂಠದಿಂದ ಭಜನೆಗಳ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಅಧ್ಯಾಪಕ ರಾಮಕೃಷ್ಣ ಉಡುಪ ತುಳಸಿಪೂಜೆಯನ್ನು ನೆರವೇರಿಸಿ, ಅದರ ಮಹತ್ವವನ್ನು ತಿಳಿಸುತ್ತಾ ತನ್ನ ಪತ್ರ-ಪುಷ್ಪ-ಫಲ-ಕಾಷ್ಠಗಳ ಮೂಲಕ ಸರ್ವೋಪಯೋಗಿಯಾದ ಸಸ್ಯ ತುಳಸಿ. ಶೈತ್ಯಸಂಬಂಧಿಯಾದ ಯಾವುದೇ ರೋಗವಿದ್ದರೂ ಅದನ್ನು ದೂರಮಾಡಬಲ್ಲ ಸಸ್ಯವಾಗಿದ್ದು, ಮನೆಯಲ್ಲಿ ಇರಲೇ ಬೇಕಾದ ಅನಿವಾರ್ಯ ಆಯುರ್ವೇದೀಯ ಪದಾರ್ಥವಾಗಿದೆ. ಕೀಟಗಳು ಬೆಳೆದ ಪೈರನ್ನು ಹಾಳುಗೆಡಹಬಹುದಾದ ಸಮಯ ಇದಾಗಿದ್ದರಿಂದ ಅವುಗಳನ್ನು ಆಕರ್ಷಿಸಿ ನಾಶ ಮಾಡಲು ದೀಪಗಳನ್ನು ಬಳಸುವ ಪದ್ಧತಿ ಭಾರತದ ಅನಾದಿಕಾಲದ ನಿಯಮವಾಗಿದ್ದು ಅದರಂತೆ ಈ ದಿನ ಕಾರ್ತಿಕದಾಮೋದರನನ್ನು ತುಳಸಿಯ ಸನ್ನಿಧಿಯಲ್ಲಿ ಪೂಜಿತ್ತೇವೆ ಎಂದರು.
ಅನಂತರ ಸಿಡಿಮದ್ದುಗಳ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ರಂಜಿಸಲಾಯಿತು.
ಈ ಸಮಯದಲ್ಲಿ ಶ್ರೀ ಸಿದ್ಧಿ ಪ್ರತಿಷ್ಠಾನ ಹಟ್ಟಿಅಂಗಡಿಯ ಕಾರ್ಯದರ್ಶಿಗಳೂ, ಶಾಲೆಯ ಪ್ರಾಂಶುಪಾಲರೂ ಆದ ಶರಣ ಕುಮಾರ, ಆಡಳಿತಾಧಿಕಾರಿ ವೀಣಾರಶ್ಮಿ ಎಮ್ ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.















