ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸುಮಾರು 475 ವರ್ಷಗಳ ಇತಿಹಾಸವಿರುವ ತಾಲೂಕಿನ ಬಸ್ರೂರಿನ ಮಂಡಿಕೇರಿ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ 17ನೇ ವರ್ಷದ ಬ್ರಹ್ಮರಥೋತ್ಸವವು ಶುಕ್ರವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿತು.
ಬ್ರಹ್ಮರಥೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀದೇವಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ತುಲಾಭಾರ ಸೇವೆ, ಯಜ್ಞ ವಿಧಿಗಳು, ಮಹಾ ಪ್ರಾರ್ಥನೆ, ಮಹಾಪೂಜೆ, ಮಹಾ ಬಲಿ ಪ್ರದಾನ, ಸಾಯಂಕಾಲ ರಥಾರೋಹಣ, ಮಹಾಸಮಾರಾಧನೆ ನಡೆಯಿತು.
ರಾತ್ರಿ ರಥೋತ್ಸವ, ಆಕರ್ಷಕ ಸುಡುಮದ್ದು ಪ್ರದರ್ಶನ, ಸಂಜೆ ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಾ.ಆಯು ಭಟ್ ಅಂಬಲಪಾಡಿ ಮತ್ತು ವೃಂದದವರಿಂದ “ಭಜನ್ ಸಂಧ್ಯಾ” ಕಾರ್ಯಕ್ರಮ ನಡೆಯಿತು.
ಶನಿವಾರ ಅವಭ್ರತ ಉತ್ಸವ ನಡೆಯಿತು. ದೇವಸ್ಥಾನದ ಧರ್ಮದರ್ಶಿ ಮಂಡಳಿ ಸದಸ್ಯರು, ದೇವಸ್ಥಾನದ ಪ್ರಧಾನ ಅರ್ಚಕರು, ಪುರೋಹಿತರು, ಕುಳಾವಿ ಭಜಕರು. ಊರಿನ ಹತ್ತು ಸಮಸ್ತರು, ಸಮಾಜ ಬಾಂಧವರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.










