ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಾಲೆಗಳು ಪಠ್ಯದ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸುವಂತೆ ಮಾಡಬೇಕು. ಆಗ ಶಿಕ್ಷಣ ಪರಿಪೂರ್ಣವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಶ್ರಮವಹಿಸಬೇಕು ಎಂದು ಹವ್ಯಾಸಿ ಯಕ್ಷಗಾನ ಕಲಾವಿದರು, ಲಂಡನ್ನಲ್ಲಿ ವೈಮಾನಿಕ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಯೋಗೀಂದ್ರ ಮರವಂತೆ ಹೇಳಿದರು.
ಅವರು ಇಲ್ಲಿನ ಪಡುಕೋಣೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಯನ್ನು ಯಕ್ಷಗಾನ ಚಂಡೆಯನ್ನು ಭಾರಿಸುವುದರ ಮೂಲಕ ಯಕ್ಷಗಾನ ತರಬೇತಿಗೆ ಚಾಲನೆ ನೀಡಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ದಿನೇಶ್ ಪೂಜಾರಿ ಅವರು ರಾಷ್ಟ್ರ ಧ್ವಜಾರೋಹಣಗೈದು, ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಶುಭ ಹಾರೈಸಿದರು.
ಪಡುಕೋಣೆ ಕೋಟೆಗುಡ್ಡೆ ಎಜುಕೇಶನ್ ಡೆವಲಪ್ಮೆಂಟ್ ಟ್ರಸ್ಟ್ ಅಧ್ಯಕ್ಷರಾದ ಸುಬ್ರಹ್ಮಣ್ಯ ಪಡುಕೋಣೆ ಉಪಸ್ಥಿತರಿದ್ದು, ಯಕ್ಷಗಾನದ ತರಗತಿಯನ್ನು ಟ್ರಸ್ಟ್ ಆಯೋಜಿಸಿರುವುದರ ಔಚಿತ್ಯದ ಕುರಿತು ಮಾತನ್ನಾಡಿ ಶುಭ ಹಾರೈಸಿದರು.
ಯಕ್ಷ ಗುರುಗಳಾದ ಯೋಗೀಂದ್ರ ಆಚಾರ್ಯ ಗುಜ್ಜಾಡಿ ಅವರು ಯಕ್ಷಗಾನ ಕಲಿಕೆಯ ಮಹತ್ವವನ್ನು ವಿವರಿಸಿದರು.
ಸಮಾರಂಭದಲ್ಲಿ ಟ್ರಸ್ಟ್ ಉಪಾಧ್ಯಕ್ಷರಾದ ರಾಮ ಪೂಜಾರಿ ಮುಲ್ಲಿಮನೆ, ಕಾರ್ಯದರ್ಶಿ ರಾಜೀವ ಪಡುಕೋಣೆ, ಕೋಶಾಧಿಕಾರಿ ಅರವಿಂದ ಪೂಜಾರಿ, ಟ್ರಸ್ಟಿಗಳಾದ ಪಿ.ಎನ್. ಶ್ರೀಧರ್, ಯೋಗಶಿಕ್ಷಕರಾದ ನರಸಿಂಹಮೂರ್ತಿ, ಸ್ಥಳೀಯ ಅಂಗನವಾಡಿಯ ಶಿಕ್ಷಕಿ ಗೀತಾ, ಸಮಿತಿ ಸದಸ್ಯರುಗಳಾದ ರಮೇಶ್ ಕೆ., ಕೃಷ್ಣ ಮೊಗವೀರ, ರಾಜೇಶ್ ಆಚಾರ್, ಸಹನಾ, ಸುಮತಿ, ಕುಸುಮಾ, ಉಮಾ ಹಾಗೂ ಪೋಷಕ ವೃಂದದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕರಾದ ಆನಂದ ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿ ಗಣರಾಜ್ಯೋತ್ಸವದ ಹಾಗೂ ಯಕ್ಷಗಾನ ತರಗತಿಯ ಕುರಿತು ವಿಷದವಾಗಿ ವಿವರಿಸಿದರು. ಶಿಕ್ಷಕರಾದ ದಿನೇಶ್, ಮೇಘನಾ, ಪ್ರೀತಿ, ಪ್ರಜ್ಞಾ ಸಹಕರಿಸಿದರು. ಸಹ ಶಿಕ್ಷಕಿಯರಾದ ಶ್ಯಾಮಲ ಕಾರ್ಯಕ್ರಮ ನಿರೂಪಿಸಿ, ಅಮಿತಾ ಸ್ವಾಗತಿಸಿ, ಸುಜಾತಾ ವಂದಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಹಾಗೂ ಕೊನೆಯಲ್ಲಿ ಮಕ್ಕಳಿಂದ ದೇಶಭಕ್ತಿ ಗೀತಗಾಯನ, ಭಾಷಣ ಹಾಗೂ ಮಕ್ಕಳೇ ಬರೆದು, ನಿರ್ದೇಶಿಸಿದ ಡಾ. ಬಿ. ಆರ್. ಅಂಬೇಡ್ಕರ್ರವರ ಜೀವನದ ಕುರಿತಾದ ಕಿರುನಾಟಕ ಪ್ರದರ್ಶನಗೊಂಡಿತು.
















