ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣದ ಮಹತ್ವದ ಉದ್ದೇಶವನ್ನು ಹೊಂದಿಕೊಂಡು ಕುಂದಾಪುರದ ಎಲ್.ಜಿ. ಫೌಂಡೇಶನ್ ವತಿಯಿಂದ “ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಹಾಗೂ ಸಾಧಕರ ಸನ್ಮಾನ ಸಮಾರಂಭ – 2026” ಕಾರ್ಯಕ್ರಮವು ಹೆಮ್ಮಾಡಿಯ ಹೊಸಕಳಿಯ ಬೊಬ್ಬರ್ಯ ದೈವಸ್ಥಾನದ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಶೈಕ್ಷಣಿಕ ಸಾಧನೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಇತರ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ನಾಲ್ವರು ವಿದ್ಯಾರ್ಥಿಗಳಾದ ರಿಷಿಕಾ ದೇವಾಡಿಗ, ಶ್ರಾವ್ಯ ಜಿ. ದೇವಾಡಿಗ, ವರ್ಷಾ ಕೆ. ದೇವಾಡಿಗ, ರಶ್ಮಿತಾ ರವಿ ದೇವಾಡಿಗ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಲ್.ಜಿ. ಫೌಂಡೇಶನ್ನ ವ್ಯವಸ್ಥಾಪಕ ಟ್ರಸ್ಟಿಗಳಾದ ನಾಗರಾಜ್ ಪಡುಕೋಣೆ ವಹಿಸಿದ್ದರು. ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಅವರು ಎಲ್.ಜಿ. ಫೌಂಡೇಶನ್ನ ಸಮಾಜಮುಖಿ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಗ್ರಾಮೀಣ ಭಾಗದ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವಾಗುವುದು ಸಂಸ್ಥೆಯ ಪ್ರಮುಖ ಧ್ಯೇಯವಾಗಿದ್ದು, ಶಿಕ್ಷಣದ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದು ತಿಳಿಸಿದರು.
ಕಾರ್ಯಕ್ರಮವನ್ನು ಹೆಮ್ಮಾಡಿಯ ನಿವೃತ್ತ ಮುಖ್ಯೋಪಾಧ್ಯಾಯರಾದ ನಂದಿ ದೇವಾಡಿಗ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಅವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶ್ರಮ, ಸತ್ಯನಿಷ್ಠೆ ಮತ್ತು ಪರಿಶ್ರಮದ ಮಹತ್ವವನ್ನು ವಿವರಿಸಿದರು.
ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಅಡಿಪಾಯವಾಗಿದ್ದು, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸ ಮೂಡಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿಯ ಖ್ಯಾತ ವೈದ್ಯರು ಹಾಗೂ ಸಮಾಜಮುಖಿ ಚಿಂತಕರಾದ ಡಾ. ಮಧುಕರ್ ದೇವಾಡಿಗ ಅವರು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅತ್ಯಂತ ಉಪಯುಕ್ತ ಹಾಗೂ ಮನನೀಯ ಮಾರ್ಗದರ್ಶನ ನೀಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಓದಬೇಕು, ಸಮಯವನ್ನು ಹೇಗೆ ನಿರ್ವಹಿಸಬೇಕು, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಗೌರವ ನೀಡುವುದು ಹೇಗೆ ಎಂಬುದರ ಕುರಿತು ಅವರು ವಿವರವಾಗಿ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ನೆರವು ಅಗತ್ಯವಿದ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಇದರಿಂದ ಅನೇಕ ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹ ದೊರೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಂಬೈನ ಖ್ಯಾತ ಉದ್ಯಮಿಗಳಾದ ಜನಾರ್ಧನ ದೇವಾಡಿಗ ಉಪ್ಪುಂದ, ಎಲ್.ಜಿ. ಫೌಂಡೇಶನ್ ಟ್ರಸ್ಟಿಗಳಾದ ಲಚ್ಚು ದೇವಾಡಿಗ, ಕುಸುಮಾ ದೇವಾಡಿಗ, ಗುರುಕೃತಿಕ್ ದೇವಾಡಿಗ, ಕುಂದಾಪುರ ದೇವಾಡಿಗ ಸಂಘದ ಅಧ್ಯಕ್ಷರಾದ ನಾಗರಾಜ್ ರಾಯಪ್ಪನಮಠ ಹೊಸಕಳಿಯ ದೈವದ ಪಾತ್ರಿಗಳಾದ ಚಿಕ್ಕಯ್ಯ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಪುರುಷೋತ್ತಮ ದಾಸ್ ಅವರು ಅತಿಥಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ನಿಹಾರಿಕ ದೇವಾಡಿಗ ಪ್ರಾರ್ಥನೆ ಸಲ್ಲಿಸಿದರು. ರಾಘವೇಂದ್ರ ದೇವಾಡಿಗ ಅವರು ವಂದನಾರ್ಪಣೆ ಸಲ್ಲಿಸಿದರು.
ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಸುರೇಶ್ ದೇವಾಡಿಗ, ದಿನಕರ ದೇವಾಡಿಗ, ಮಹಾಲಿಂಗ ದೇವಾಡಿಗ, ಅಭಿಷೇಕ್ ದೇವಾಡಿಗ ಅವರನ್ನು ಈ ಸಂದರ್ಭದಲ್ಲಿ ಗುರುತಿಸಲಾಯಿತು. ಬೈಂದೂರಿನ ರಾಮ ದೇವಾಡಿಗ ಕಾರ್ಯಕ್ರಮ ಸಂಯೋಜಿಸಿದ್ದರು.
















